Monday 26 January 2015

ಬಯಲಾಟದ ನಾದ ಬ್ರಹ್ಮ ಮದ್ದಳೆ ಸಣ್ಣಪಾಲಯ್ಯ



ಮದ್ದಳೆ ಸಣ್ಣ ಪಾಲಯ್ಯ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಲಗೇತನಹಟ್ಟಿ ಗ್ರಾಮದ ಬಯಲಾಟದ ಕಲಾವಿದ ಮದ್ದಳೆ ಸಣ್ಣಪಾಲಯ್ಯ ಅವರಿಗೆ ೨೦೧೩-೧೪ ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಈ ಸಂದರ್ಭದ ನೆಪದಲ್ಲಿ ಸುಮಾರು ೭೫ ವರ್ಷದ ಹಿರಿಯ ಕಲಾ ಜೀವಿಯ ಬಗೆಗಿನ ಅವಲೋಕನ ಇಲ್ಲಿದೆ


ತನ್ನ ಶಿಷ್ಯರ ಜೊತೆಯಲ್ಲಿ ಕಲಾವಿದ ಸಣ್ಣ ಪಾಲಯ್ಯ
     ಸಣ್ಣಪಾಲಯ್ಯ ಮ್ಯಾಸನಾಯಕ ಬುಡಕಟ್ಟಿನ ಒಂದು ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿ ಮೂರನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಬಾಲ್ಯದಲ್ಲೇ ತನ್ನ ಪರಿಸರದಲ್ಲಿ ಪ್ರಚಲಿತವಿದ್ದ ಭಜನೆ ಕಲೆಯಲ್ಲಿ ಆಸಕ್ತರಾಗಿ ಭಜನೆಯ ಡಕ್ಕೆ ಬಾರಿಸುವುದರಲ್ಲಿ ಪ್ರವೀಣರಾದವರು. ಇದರಿಂದ ಇವರು ಭಜನೆ ಸಣ್ಣಪಾಲಯ್ಯ ಅಂತಲೇ ಜನಪ್ರಿಯರಾಗಿದ್ದರು. ಅನಂತರ ನಿಧಾನವಾಗಿ ಬಯಲಾಟದ ಕಡೆ ಗಮನಹರಿಸಿ ಅನೇಕ ಪ್ರದರ್ಶನಗಳಲ್ಲಿ ಅರ್ಜುನ, ಸಖಿ ಮೊದಲಾದ ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಅನಂತರ ಭಜನೆಯ ಡಕ್ಕೆ ವಾದ್ಯ ನುಡಿಸಿದ ಅನುಭವದ ನೆರಳಲ್ಲಿ ಬಯಲಾಟದ ಮದ್ದಳೆ ಅಥವಾ ಮೃದಂಗ ಬಾರಿಸಲು ಆರಂಭಿಸುತ್ತಾರೆ. ಆಮೂಲಕ ಮದ್ದಳೆ ಸಣ್ಣಪಾಲಯ್ಯನಾಗಿ ರೂಪಾಂತರಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ತನ್ನ ಹಟ್ಟಿಯಲ್ಲಿ ಮದ್ದಳೆ ಬಾರಿಸುವುದರಲ್ಲಿ ನಿಪುಣರಾಗಿದ್ದ ಮೂಳೋಬಜ್ಜ, ಕೆಂಗಯ್ಯ, ಕಾರೆಬೋರಯ್ಯ ಮೊದಲಾದ ಹಿರಿಯರಿಂದ ಮದ್ದಳೆಯ ವಿವಿಧ ಮಟ್ಟುಗಳನ್ನು ಕಲಿಯುತ್ತಾರೆ. ನಿಧಾನವಾಗಿ ಅವೆಲ್ಲ ಮಟ್ಟುಗಳನ್ನು ಕರಗತಮಾಡಿಕೊಂಡು ಎಂಥ ಸಂದರ್ಭದಲ್ಲೂ ದೃತಿಗೆಡದೆ ಮದ್ದಳೆ ಬಾರಿಸುವ ಶಕ್ತಿಯನ್ನು ಸಂಪಾದಿಸುತ್ತಾರೆ. ಅಲ್ಲಿಂದಲೆ ಬಯಲಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಲ್ಲಿಯವರೆಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಣ್ಣಪಾಲಯ್ಯ ಅವರ ನೆಂಟರ ಬಳಿ ಇದ್ದ ಮದ್ದಳೆ ಇವರಿಗೆ ಬಳುವಳಿಯಾಗಿ ಸಿಕ್ಕಿದ್ದು ಇವರ ಕಲಾಸಕ್ತಿಗೆ ಇನ್ನಷ್ಟು ನೀರೆರೆಯುತ್ತದೆ. ಆ ದಿನಗಳಲ್ಲಿ ಇಡೀ ಹಟ್ಟಿಗೆ ಇದ್ದದ್ದು ಒಂದೆ ಮದ್ದಳೆ ಎಂದರೆ ಆ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಸಣ್ಣಪಾಲಯ್ಯನವರ ಕಲಾಸಕ್ತಿಗೆ ಮನೆಯ ಹಿರಿಯರಿಂದ ಎದುರಾದ ವಿರೋಧವನ್ನು ಲೆಕ್ಕಿಸದೆ ತನ್ನ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದು ನಿಜವಾಗಿಯೂ ಬಯಲಾಟ ಕಲೆಗೆ ಸಹಕಾರಿಯಾಯಿತು ಎನ್ನಬಹುದು.
             ಇವರ ಒಂದು ವಿಶೇಷವೆಂದರೆ ನಲಗೇತನಹಟ್ಟಿ ಸುತ್ತಲಿನ ಬಯಲಾಟದ ಪ್ರದರ್ಶನಗಳನ್ನು ಸಣ್ಣಪಾಲಯ್ಯ ಅವರನ್ನು ಬಿಟ್ಟು ಊಹಿಸಿಕೊಳ್ಳುವುದು ಕಷ್ಟ. ತನ್ನ ಹಟ್ಟಿಯಲ್ಲಿ ಮಾತ್ರವಲ್ಲದೆ ಸುತ್ತ ಮುತ್ತಲಿನ ಹಲವಾರು ಊರುಗಳಲ್ಲಿ ಬಯಲಾಟದ ಪ್ರದರ್ಶನಗಳಲ್ಲಿ ಮದ್ದಳೆ ವಾದಕನಾಗಿ ಭಾಗವಹಿಸಿ ಅವರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ತನ್ನ ಮದ್ದಳೆಯ ಮೂಲಕ ನೂರಾರು ಪ್ರದರ್ಶನಗಳಿಗೆ ಸಾಥ್ ನೀಡಿದ್ದು ಅವುಗಳಲ್ಲಿ ಪ್ರಧಾನವಾಗಿ ಗಿರಿಜಾ ಕಲ್ಯಾಣ, ಇಂದ್ರಜಿತ್ ಕಾಳಗ, ತಾಮ್ರಧ್ವಜ, ರಾಮಾಂಜಿನಯ ಯುದ್ದ, ಐರಾವಣ-ಮೈರಾವಣ, ಶಶಿರೇಖ ಭರಣಿ, ದುಶ್ಯಾಸನನ ಕಾಳಗ, ಪಾರ್ಥಪಾಚಾಂಲಿ, ಕಾಳಾಸುರ, ಸಂಪೂರ್ಣ ರಾಮಾಯಣ, ಬಬ್ರುವಾಹನ, ರತಿಕಲ್ಯಾಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಷ್ಟು ಕಥೆಗಳಲ್ಲಿ ಒಂದೊಂದು ಕಥೆ ಹತ್ತಾರು ಪ್ರದರ್ಶನಗಳನ್ನು ಕಂಡಿದ್ದಿದೆ. ಅವೆಲ್ಲವುಗಳಿಗೆ ಮದ್ದಳೆ ಬಾರಿಸಿದ ಸಣ್ಣಪಾಲಯ್ಯ ಈ ಎಲ್ಲಾ ಪ್ರದರ್ಶನಗಳಲ್ಲೂ ನಾನು ಅತ್ಯುತ್ತಮವಾಗಿ ಬಾರಿಸಿದ್ದೇನೆ ಎಂದು ಹೇಳಲಾರೆ ಆದರೆ ಹೆಚ್ಚು ಪ್ರದರ್ಶನಗಳಲ್ಲಿ ಚನ್ನಾಗಿಯೇ ಬಾರಿಸಿದ್ದೇನೆ. ಪ್ರದರ್ಶನಗಳು ಕಳಪೆಯಾದಾವೆಂದಾಗ ತಾನು ’ಕುಣಿಯಲಾರದೆ ಮದ್ಲೆಕಾರನನ್ನು ಗೋಳು ಹೊಯ್ದು ಕೊಂಡರು’ ಎನ್ನುವ ಗಾದೆ ಮಾತಿನಂತೆ ಅದರ ಅಪಕೀರ್ತಿಯನ್ನು ನನ್ನ ಹೆಗಲಿಗೆ ಏರಿಸಿದ್ದಿದೆ. ಇಂತಹ ಟೀಕೆಗಳು ಬಂದಾಗ ನಾನು ಯಾರಿಗೂ ಎದುರಾಡದೆ  ನನ್ನ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ  ಎಂಬ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮದ್ದಳೆಯ ಬಗ್ಗೆ ಯಾವುದೇ ಶಾಸ್ತ್ರೀಯ ಜ್ಞಾನವನ್ನು ಕಲಿಯದೇ ಇದ್ದರು ಮದ್ದಳೆಯ ಜಂಪೆ, ಸಾಂಗತ್ಯ, ಅರ್ಧರೇಖ, ಆಟತಾಳ, ಕುಕ್ಕತಾಳ ಮೊದಲಾದ ಮಟ್ಟುಗಳ ಬಗ್ಗೆ ಅವರಲ್ಲಿರುವ ಅನುಭವ ಜ್ಞಾನ ಬೆರಗು ಮೂಡಿಸುವಂಥಹದ್ದು.
ಮದ್ದಳೆ ನುಡಿಸುತ್ತಿರುವ ಕಲಾ ಜೀವಿ ಸಣ್ಣ ಪಾಲಯ್ಯ
         ಶ್ರೀಯುತರು ಬರೀ ಮದ್ದಳೆ ಬಾರಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಕಲಾವಿದರಿಗೆ ಮಾತು ಮತ್ತು ಅಭಿನಯವನ್ನು  ಹೇಳಿಕೊಟ್ಟವರು ಕೂಡ. ಅದರಲ್ಲೂ ಅಕ್ಷರಜ್ಞಾನವಿಲ್ಲದ ಕಲಾವಿದರಿಗೆ ಮಾತುಗಳನ್ನು ಹೇಳಿಕೊಟ್ಟು ಕಲಿಸಿರುವುದು ಇವರ ವಿಶೇಷ. ಇವರಲ್ಲಿ ಕಲಿತ ಯುವ ಕಲಾವಿದರಾದ ಚಿತ್ರಲಿಂಗಯ್ಯ, ಕುರುಡುಬೋರಯ್ಯ, ದೊಡ್ಡಬೋರಯ್ಯ ಅವರುಗಳು ಹೇಳುವಂತೆ - ’ಅಕ್ಷರಗೊತ್ತಿಲ್ಲದ ನಮಗೆ ತಾಲೀಮು ಸಂದರ್ಭದಲ್ಲಿ ಅಷ್ಟೇ ಅಲ್ಲದೆ ತನ್ನ ಮನೆ ಮತ್ತು ಹೊಲಗಳಲ್ಲಿ ಮಾತುಕಲಿಸಿದ್ದಾರೆ. ನಟನೆಯ ಹೆಜ್ಜೆಗಳನ್ನು ಹೇಳಿಕೊಟ್ಟದ್ದನ್ನು ನಾವು ಎಂದಿಗೂ ಮರೆಯುವಂತಿಲ್ಲ. ಏಕೆಂದರೆ ನಮ್ಮ ಕಾಲನ್ನು ಕೈಯಲ್ಲಿಡಿದು ತಿರುವಿ ಹೀಗೆಂದು ಹೇಳಿಕೊಟ್ಟದ್ದಾರೆ. ಅದರ ಜೊತೆಗೆ ಒಂದು ಸ್ಥಳದಲ್ಲಿ ಮರಳನ್ನು ಹರಡಿ ಅದರಲ್ಲಿ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸಿ ನಮಗೆ ತೋರಿಸುತ್ತಿದ್ದರು.’ ಯುವ ಕಲಾವಿದರ ಈ ಮಾತುಗಳು ಸಣ್ಣಪಾಲಯ್ಯ ಅವರ ಕಲಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ. 
         ಇಂತಹ ಅಪರೂಪದ ಈ ಕಲಾವಿದನ ಬದುಕು ಸುಖಕರವಾಗಿಲ್ಲ. ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಆರ್ಥಿಕ ಬಲ  ಈ ಕಲೆಯಿಂದ ಒದಗಿಬರಲಿಲ್ಲ. ಮೊದಲಿಂದಲೂ ಇವರಿಗೆ ತಾಲೀಮು, ಪ್ರದರ್ಶನ ಎಲ್ಲಾ ಸೇರಿ ಕಲಾವಿದರಿಂದ ಸಿಗುತ್ತಿದ್ದ ಸಂಭಾವನೆ ಕೇವಲ ೨೦ ರಿಂದ ೫೦ ರೂಗಳು ಮಾತ್ರ. ಈಗ ಅದು ೨೫೦ ರಿಂದ ೫೦೦ ರೂಗಳಿಗೆ ಸೀಮಿತಗೊಂಡಿದೆ. ಇದರ ಜೊತೆಗೆ ಕೆಲವೊಮ್ಮೆ ಒಂದು ಜೊತೆ ಬಟ್ಟೆ. ಈ ವಿಷಯದಲ್ಲಿ ಯಾರನ್ನು ಜುಲ್ಮೆಮಾಡದ ಇವರು ಕೊಟ್ಟಷ್ಟರಲ್ಲೇ ತೃಪ್ತಿ ಕಂಡವರು. ಯಾರನ್ನು ಇಂತಿಷ್ಟೆ ಎಂದು ಬಾಯಿಬಿಟ್ಟು ಕೇಳಿದ ಉದಾಹರಣೆಗಳೆ ಇಲ್ಲ ಎಂಬುದು ಇವರ ಒಡನಾಡಿ ಕಲಾವಿದರ ಅಂಬೋಣ. ಸಂಭಾವನೆಯ ವಿಷಯ ಹೀಗಾದರೆ ಇನ್ನೂ ಸರ್ಕಾರ ಸಂಘ ಸಂಸ್ಥೆಗಳಿಂದ ಕಲೆಗಾಗಿ ಸಿಗುವ ಯಾವುದೇ ಸೌಕರ್ಯಗಳು ಕೂಡ ಇವರ ಪಾಲಿಗೆ ಸಿಗಲಿಲ್ಲ ಎಂಬುದು ಬೇಸರದ ಸಂಗತಿ. ಈಗ ಸುಮಾರು ಎಪ್ಪತ್ತು ವರ್ಷ ವಯಸ್ಸಾದರೂ ಸರ್ಕಾರದಿಂದ ಸಿಗುವ ಮಾಶಾಸನ ಕೂಡ ಇವರಿಗೆ ಇನ್ನೂ ಸಿಕ್ಕಿಲ್ಲ ಎಂಬುದು ಕಲಾಪ್ರಪಂಚದ ದೌರ್ಭಾಗ್ಯವೇ ಸರಿ.
ಹಿರಿಯರೆಲ್ಲರು ತಮ್ಮ ಪರಂಪರೆಯ ಕಲೆಯ ಬಗ್ಗೆ ಈ ಹೊಸಕಾಲದ ಯುವಕರು ನಿರಾಸಕ್ತರಾಗಿದ್ದಾರೆ ಎಂದು ಕೊರಗುತ್ತಿರುವುದು ಸಾಮಾನ್ಯವಾದ ಸಂಗತಿ. ಆದರೆ ಸಣ್ಣಪಾಲಯ್ಯ ಈ ಬಗ್ಗೆ ಹೊಂದಿರುವ ಅಭಿಪ್ರಾಯವೇ ಬೇರೆಯಾಗಿದೆ.ಅವರು ಹೇಳುವಂತೆ ಹೀಗಿನ ಯುವಕರು ನಮಗಿಂತ ಹೆಚ್ಚು ಶಕ್ತಿಶಾಲಿಗಳು ಅವರು ಈ ಕಲೆಯನ್ನು ಯಾವುದಾರೂ ರೂಪದಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಧೃಡವಾದ ಮಾತನ್ನಾಡುತ್ತಾರೆ. ಇದಕ್ಕೆ ಪೂರಕವಾಗಿ ಅನೇಕ ಯುವ ಕಲಾವಿದರು ತನ್ನ ಬಳಿ  ತೀವ್ರ ಆಸಕ್ತಿಯಿಂದ ಬಂದು ಕಲಿಯುತ್ತಿರುವುದನ್ನು ನೆನಪಿಸಿಕೊಳ್ಳುತ್ತಾರೆ. 
     ಇಂತಹ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ತನ್ನ ೧೫ನೇ ವರ್ಷದಿಂದ ಇಲ್ಲಿಯವರೆಗೆ ಅಂದರೆ ಅರ್ದಶತಮಾನಕ್ಕೂ ಹೆಚ್ಚು ಕಾಲ ಬಯಲಾಟ ಕಲೆಯ ಸೇವಕರಂತೆ ಕೆಲಸಮಾಡಿದ್ದ ಈ ಕಲಾವಿದನನ್ನು ಗುರುತಿಸಿ ೨೦೧೩-೧೪ ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿರುವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಬೆಳಗಲ್ ವೀರಣ್ಣ ಹಾಗೂ ಎಲ್ಲಾ ಸದಸ್ಯರು ವಿಶೇಷವಾಗಿ ಡಾ. ಬಿ.ಎಂ. ಗುರುನಾಥ ಅವರು ಖಂಡಿತವಾಗಿ ಅಭಿನಂದನಾರ್ಹರು. 
       ಇಂಥ ಹಿರಿಯ ಹಾಗೂ ಅಲಕ್ಷಿತ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಖಂಡಿತವಾಗಿಯೂ ಇಂದಿಗೆ ಮಾಡಲೇಬೇಕಾದ ಕೆಲಸವಾಗಿದೆ. ಹೀಗೆ ಗುರುತಿಸಿ ಗೌರವಿಸಿದ ಕಲಾವಿದರ ಕಲೆಯ ಪ್ರಾವೀಣ್ಯತೆಯನ್ನು ಬಳಸಿಕೊಳ್ಳಬೇಕು. ಬಯಲಾಟದಂತಹ ಕಲೆಯನ್ನು ಯಾವುದೇ ಮುಜುಗರವಿಲ್ಲದೆ ಯುವಕರು ಪ್ರದರ್ಶನಗಳನ್ನು ನೀಡುವಂತಾಗಬೇಕು. ಅದಕ್ಕೆ ಈ ಹಿರಿಯ ಕಲಾವಿದರನ್ನು ಮಾರ್ಗದರ್ಶನಕ್ಕಾಗಿ ಬಳಸಿಕೊಳ್ಳಬೇಕು. ಆ ಮೂಲಕ ಬಯಲಾಟ ಕಲೆಯ ಉದ್ಧಾರವಾಗಬೇಕು ಎಂಬುದು ಸಾಂಕೃತಿಕ ಲೋಕದ ಆಶಯವಾಗಿದೆ.
                                                                                            ಚಿತ್ರಗಳು ಮತ್ತು ಬರೆಹ  -  ಡಾ. ಎಸ್.ಎಂ. ಮುತ್ತಯ್ಯ

No comments:

Post a Comment