Thursday 7 August 2014

ದೇವರ ಎತ್ತಿನ ಕಿಲಾರಿಗಳು


       ಕರ್ನಾಟಕ ಸಂಸ್ಕೃತಿಗಳ ಅಂತರ್ಯದಲ್ಲಿ ಅನೇಕ ರೋಚಕ ಹಾಗೂ ಅರ್ಥಪೂರ್ಣ ಸಂಪ್ರದಾಯ ಆಚರಣೆಗಳಿವೆ. ಆಧುನಿಕ ಪ್ರಹಾರಗಳು ಏನೆಲ್ಲ ಪ್ರಭಾವಿಸಿದರೂ ತಮ್ಮದೇ ಆದ ಅಸ್ತಿತ್ವ ಹಾಗೂ ಅನನ್ಯತೆಗಳನ್ನು ಉಳಿಸಿಕೊಂಡಿವೆ. ಅಂಥ ಸಂಪ್ರದಾಯಗಳಲಿ ’ಎತ್ತಿನ ಕಿಲಾರಿಗಳು’ ಒಂದು ವಿಶಿಷ್ಟ ಸಂಪ್ರದಾಯ. ಚಿತ್ರದುರ್ಗ ಸೀಮೆಯ ಸುತ್ತ ಮುತ್ತ ವಾಸಿಸುವ ಮ್ಯಾಸನಾಯಕ ಸಮುದಾಯದಲ್ಲಿ ಕಂಡು ಬರುವ ಇದು, ಸಂಸ್ಕೃತಿ ಅಧ್ಯಯನಗಳಿಗೆ ಹಲವು ಒಳನೋಟಗಳನ್ನು ನೀಡುತ್ತದೆ.
ಕಿಲಾರಿ ಪದದ ಅರ್ಥ : 
       ಪದ ಕೋಶಗಳು ಹೇಳುವಂತೆ ಕಿಲಾರ್ ಅಥವಾ ಕಿಲಾರಿ ಎಂದರೆ ದನಗಳ ವಿಶಿಷ್ಟವಾದ ಒಂದು ತಳಿ. ಈ ತಳಿಯ ದನಗಳನ್ನು ಸರ್ಕಾರದ ಅಧೀನದಲ್ಲಿ ಸಾಕಲಾಗುತ್ತಿತ್ತು ಎಂಬುದಾಗಿ ತಿಳಿದುಬರುತ್ತದೆ. ಕರ್ನಾಟಕದ ಹಲವು ಕಡೆಗಳಲ್ಲಿ ಕಿಲಾರಿ ದನಗಳು ಸಿಗುತ್ತವೆ. ಮ್ಯಾಸನಾಯಕ ಸಮುದಾಯದೊಳಗೆ ಕಿಲಾರಿ ಪದಕ್ಕೆ ಕಾಯುವವನು ಎಂಬ ಸಾಮಾನ್ಯ ಅರ್ಥವಿದೆ. ಇಲ್ಲಿಯ ಎತ್ತಿನ ಕಿಲಾರಿಗಳು ಇದೇ ಹಿನ್ನೆಲೆಯೊಳಗೆ ಬಳಕೆಗೊಂಡಿರುವಂತದ್ದು ಸ್ಪಷ್ಟ. ಎಲ್ಲಾ ಕಿಲಾರಿಗಳಿಗಿಂತ ದೇವರೆತ್ತಿನ ಕಿಲಾರಿಗಳು ಅತೀ ಗೌರವಾನ್ವಿತರು.
ದೇವರ ಎತ್ತುಗಳು : 
      ಕರ್ನಾಟಕದ ಹಲವಾರು ಸಂಸ್ಕೃತಿಗಳಲ್ಲಿ ಭಕ್ತರು ತಮ್ಮ ದೈವಕ್ಕೆ ಹರಕೆ ರೂಪದಲ್ಲಿ ಗೂಳಿಯನ್ನು (ಎತ್ತನ್ನು) ಒಪ್ಪಿಸುವುದು ಸಾಮಾನ್ಯ. ಆಕಳನ್ನು ದೇವರಿಗೆ ಬಿಡುವ ಪದ್ದತಿ ಕಡಿಮೆ. ಹಾಗೆಯೇ ಇಲ್ಲೆಲ್ಲ  ದೇವರಿಗೆ ಬಿಡುವ ಎತ್ತುಗಳ ಸಂಖ್ಯೆ ಅತೀ ಕಡಿಮೆ. ಆದರೆ ಮ್ಯಾಸನಾಯಕರ ಸಮುದಾಯದಲ್ಲಿ ದೇವರಿಗೆ ಆಕಳು ಮತ್ತು ಎತ್ತುಗಳೆರಡನ್ನು ಯಾವುದೇ ಭೇದಭಾವವಿಲ್ಲದೆ ಬಿಡುತ್ತಾರೆ. ಹೀಗೆ ದೇವರಿಗೆ ಬಿಟ್ಟ ದನಗಳ ಸಂಖ್ಯೆ ನೂರನ್ನು ದಾಟಿರುತ್ತದೆ. ಎತ್ತುಗಳನ್ನು ಕಾಯುವುದಕ್ಕೆ ಗುಡಿಕಟ್ಟಿನ ಹಿರಿಯರು ಹಾಗೂ ಕುಲಸಾವಿರದವರು ಕಿಲಾರಿಗಳನ್ನು ನೇಮಿಸುತ್ತಾರೆ. ಅವರನ್ನೇ ದೇವರ ಎತ್ತಿನ ಕಿಲಾರಿಗಳು ಎಂದು ಕರೆಯುತ್ತಾರೆ. ಈ ಕಿಲಾರಿಗಳು ಊರಿಂದ ಹೊರಗೆ ಕಾಡಿಗೆ ಹತ್ತಿರವಾಗಿ ಮುಳ್ಳು ಬೇಲಿಯಿಂದ ದೊಡ್ಡಿಯನ್ನು ನಿರ್ಮಿಸಿಕೊಂಡು, ಅದರಲ್ಲಿ ಆ ದನಗಳನ್ನು ಜತನದಿಂದ ಕಾದು ಸಂಬಾಳಿಸುತ್ತಾರೆ. ಈ ದೊಡ್ಡಿಯನ್ನು ಗೂಡು ಎಂಬ ಪೂಜ್ಯ ಹೆಸರಿನಿಂದ, ದೇವರೆತ್ತುಗಳನ್ನು ಮುತ್ತಯ್ಯಗಳು, ಸುರುಬುಗಳು ಎಂಬ ಗೌರವ ನಾಮಗಳಿಂದ ಕರೆಯುತ್ತಾರೆ.
       ದೇವರೆತ್ತುಗಳನ್ನು ಮುತ್ತಯ್ಯಗಳು ಎಂದು ಕರೆಯುವುದೇ ಹೆಚ್ಚು. ಮುತ್ತಯ್ಯಗಳು ಎಂದರೆ ಹಿರಿಯರು ಎಂದರ್ಥ. ಅಂದರೆ ದೇವರ ಎತ್ತುಗಳನ್ನು ಇವರು ಕುಲದ ಹಿರಿಯರ ಪ್ರತಿರೂಪವಾಗಿ ಕಂಡಿದ್ದಾರೆ. ಹೀಗೆ ದೇವರೆತ್ತುಗಳನ್ನು ಪರಿಭಾವಿಸುವ ಕ್ರಮ ಮ್ಯಾಸನಾಯಕರ ಕಂಪಳರಂಗ, ಗಾದ್ರಿಪಾಲನಾಯಕ, ಬೋರೆದೇವರು, ಬೋಸೆದೇವರು, ಬಂಗಾರದೇವರು, ಬೊಮ್ಮದೇವರು ಇವೇ ಮೊದಲಾದ ದೈವದ ಒಕ್ಕಲುಗಳಲ್ಲಿ ಮುಖ್ಯವಾಗಿದೆ. ಈ ಮುತ್ತಯ್ಯಗಳು ಇವರ ಆಚರಣೆಗಳಲ್ಲಿ ಎಷ್ಟು ಮುಖ್ಯವೆಂದರೆ, ಯಾವುದೇ ಹಬ್ಬ ಪ್ರಾರಂಭವಾಗುವುದು ಮುತ್ತಯ್ಯಗಳ ಪೂಜೆಯ ಮೂಲಕ ಮತ್ತು ಮುತ್ತಯ್ಯಗಳ ಮೀಸಲು ಹಾಲು, ತುಪ್ಪ ಬಂದ ನಂತರವೇ.
      ಇಲ್ಲಿ ಗೂಡು, ದೇವರಗುಡಿ ಮತ್ತು ಉದಿಪದಿ, ಒಡಪು ಇವುಗಳ ಬಗ್ಗೆ ಕೆಲವು ವಿಚಾರಗಳನ್ನು ಹೇಳುವುದು ಉಚಿತ. ಈಗಾಗಲೇ ಹೇಳಿದ ಹಾಗೆ ಗೂಡು ದೇವರ ಎತ್ತುಗಳನ್ನು ಕೂಡಲು ಊರ ಹೊರಗೆ ಮುಳ್ಳು ಕಳ್ಳೆಗಳಿಂದ ನಿರ್ಮಿಸಿದ ದೊಡ್ಡಿ, ಈ ದೊಡ್ಡಿಯೊಳಗೆ ಒಡಪು ಇರುತ್ತದೆ. ಒಡಪು ಎಂದರೆ ದಿನಾಲು ಬೆಳಿಗ್ಗೆ, ಸಾಯಂಕಾಲ ಬೆಂಕಿ ಹಾಕಲು ಮಾಡಿರುವ ಒಂದು ಗುಂಡಿ. ಇದು ಸಾಮಾನ್ಯವಾದ ಗುಂಡಿಯಲ್ಲ ಅದಕ್ಕೂ ದೈವ ಮಾನ್ಯತೆ ಇದೆ. ಇದರಲ್ಲಿ ದೊರೆಯುವ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುತ್ತಾರೆ. ಹಾಗಾಗಿಯೇ ಈ ಗುಂಡಿಯನ್ನು ಕೇವಲ ಗುಂಡಿಯೆಂದು ಕರೆಯದೇ ಒಡಪು ಎಂದು ಕರೆದಿದ್ದಾರೆ. ದೇವರ ಗುಡಿ ಹಟ್ಟಿಯಲ್ಲಿರುತ್ತದೆ. ಆ ಗುಡಿಯ ಮುಂದೆ ಮುತ್ತಯ್ಯಗಳ ಪೂಜಾಸ್ಥಾನವೊಂದಿರುತ್ತದೆ. ಅಲ್ಲಿ ಮುತ್ತಯ್ಯಗಳ ಹಾಲಿನಿಂದ ಬಂದ ಬೆಣ್ಣೆಯಿಂದ ಗರುಡಗಂಬದ ದೀಪಗಳನ್ನು ಉರಿಸುತ್ತಾರೆ. ಮತ್ತೆ ಅಲ್ಲಿಯೂ ಒಡಪು ಇರುತ್ತದೆ. 
ಕಿಲಾರಿಗಳ ನೇಮಕ ಮತ್ತು ಕೆಲಸ ಕಾರ್ಯಗಳು:
ಕಿಲಾರಿಗಳನ್ನು ನೇಮಿಸುವುದು ಅತ್ಯಂತ ವ್ಯವಸ್ಥಿತ. ಗುಡಿಕಟ್ಟಿನ ಕುಲಸಾವಿರದವರು, ಹಿರಿಯರು ಸೇರಿ ಒಂದು ಕುಟುಂಬವನ್ನೇ ಈ ಕೆಲಸಕ್ಕೆ ನೇಮಿಸುತ್ತಾರೆ. ಈಗಾಗಲೇ ಸುಮಾರು ವರ್ಷಗಳ ಹಿಂದೆಯೇ ಈ ಕುಟುಂಬಗಳನ್ನು ಆಯ್ಕೆ ಮಾಡಿರುವುದರಿಂದ, ಈಗ ಕುಟುಂಬದ ಒಳಗಿನ ಜನ, ಯಾರು ಈ ವೃತ್ತಿ ಮಾಡಬೇಕೆಂಬುದನ್ನು ನಿರ್ಧರಿಸುತ್ತಾರೆ.
ಕಿಲಾರಿಗಳ ಕೆಲಸಗಳು ಅತ್ಯಂತ ಕಠಿಣತರವಾದಂತಹವು ದೇವರ ಎತ್ತುಗಳನ್ನು ದಿನಾಲು ಮೇಯಿಸುವುದು. ಸುರಕ್ಷಿತವಾಗಿ ನೋಡಿಕೊಳ್ಳುವುದು, ಹಬ್ಬದ ಸಂದರ್ಭಕ್ಕೆ ಹಾಲನ್ನು ಮೀಸಲಿಡಿದು,  ಅದರಿಂದ ಬಂದ ಬೆಣ್ಣೆಯನ್ನು ಮತ್ತು ಒಂದಿಷ್ಟು ಮೀಸಲು ಹಾಲನ್ನು ದೇವರಗುಡಿಗೆ ಒಪ್ಪಿಸುವುದು, ಗೂಡಿಂದ ದೇವರೆತ್ತುಗಳನ್ನು ಕರೆತಂದು ಹಬ್ಬ ಮುಗಿಸಿಕೊಂಡು ಕರೆದೊಯ್ಯುವುದು. ಗುಡಿಯ ಮುಂಭಾಗದಲ್ಲಿ ಇರುವ ಮುತ್ತಯ್ಯಗಳ ಪದಿಯಲ್ಲಿ ಪೂಜಾಕಾರ್ಯ ನೆರವೇರಿಸುವುದು. ಹಾಗೆಯೇ ಭಕ್ತರು ಗೂಡಿಗೆ ಮಲಗಲು ಬಂದಾಗ ಅವರಿಗೆ ಪೂಜೆ ಮಾಡಿಕೊಟ್ಟು ಪ್ರಸಾದ ನೀಡಿ ಕಳುಹಿಸುವುದು ಇತ್ಯಾದಿ. ಇಂತಹ ಅನೇಕ ಮಹತ್ವದ ಧಾರ‍್ಮಿಕ ಕೆಲಸ ಕಾರ್ಯಗಳನ್ನು ಮತ್ತು ಸಾಮಾನ್ಯ ಕಾರ್ಯಗಳನ್ನು ಕಿಲಾರಿಗಳು ಮಾಡಬೇಕಾಗಿರುತ್ತದೆ. 
ಕಿಲಾರಿಗಳ ವೇಷ ಭೂಷಣ ಮತ್ತು ಜೀವನ ನಿರ್ವಹಣೆ:
          ದೇವರ ಕೆಲಸವೆಂದು ಎತ್ತುಗಳನ್ನು ಕಾಯುವ ಕಿಲಾರಿಗಳಿಗೆ ಕುಲಸಾವಿರದವರಿಂದ ದೈವಿಕ ದೀಕ್ಷೆಯಾಗುತ್ತದೆ. ಇವರು ದೀಕ್ಷೆಯಾದ ದಿನದಿಂದ ಮೈಗೆ ಪೂರ್ತಿ ಬಟ್ಟೆ ಧರಿಸುವುದಿಲ್ಲ. ತಲೆಗೆ ಒಂದು ಪಾಗು. ಸೊಂಟಕ್ಕೆ ಒಂದು ಪಂಚೆ, ಹೊದಿಯಲು ಒಂದು ಪಚ್ಚಡ, ಹೆಗಲ ಮೇಲೊಂದು ಕಂಬಳಿ, ಕೈಯಲ್ಲಿ ಬಿದುರಿನ ಒಂದು ಕೋಲು ಮತ್ತು ನೀರಿನ ಕುಡಿಕೆ ಇದು ಕಿಲಾರಿಗಳ ಸಾಮಾನ್ಯ ವೇಷ. ಇವರು ಬಹಳ ದಿನಗಳ ಕಾಲ ಗೂಡಿನಲ್ಲಿಯೇ ಬಂದರಿಕೆ ಸೊಪ್ಪಿನ ತಡಿಕೆಗಳ ಮೇಲೆ ಮಲಗುತ್ತಿದ್ದರು. ಈಗೀಗ ಊರಿಗೆ ಬಂದು ಮಲಗುವ ಪರಿಪಾಠವಿದೆ. 
ಭಕ್ತರು ನೀಡುವ ದವಸ ಧಾನ್ಯಗಳೇ ಇವರ ಜೀವನ ನಿರ್ವಹಣೆಗೆ ಆಧಾರ ಸುಗ್ಗಿಯ ಕಾಲದಲ್ಲಿ ಕಿಲಾರಿಗಳು ಪ್ರತಿ ಭಕ್ತರು ಕಣಗಳಿಗೆ ಬೇಟಿ ನೀಡಿ ದಾನ್ಯಗಳನ್ನು ಸಂಗ್ರಹಿಸುತ್ತಾರೆ. ಕಿಲಾರಿ ಹೋಗದೇ ಇದ್ದರು ಕೆಲ ಭಕ್ತರು ಕಿಲಾರಿಯ ಮನೆಗೆ ತಮ್ಮ ಭಕ್ತಿಯ ಸ್ವರೂಪವನ್ನು ದವಸವನ್ನು ಒಪ್ಪಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ದೊರೆಯುವ ಕಾಯಿ, ಕಾಸು ಕೂಡ ಜೀವನ ನಿರ್ವಹಣೆಗೆ ಪೂರಕ.
ಇವರ ವಿಶೇಷವೇನೆಂದರೆ ಅತಿಯಾದ ಮಡಿವಂತಿಕೆ ಕಿಲಾರಿಗಳು ತಮ್ಮ ಮನೆಯಲ್ಲಿ ಬೇರೆ ಸದಸ್ಯರು ಉಂಡ ತಟ್ಟೆಯಲ್ಲಿ ಉಣ್ಣುವುದಿಲ್ಲ. ಬೇರೆಯರ ಮನೆಗಳಲ್ಲಿ ಉಣ್ಣುವುದಿಲ್ಲ. ತೀರಾ ಉಣ್ಣಲೇ ಬೇಕಾದ ಪ್ರಸಂಗ ಬಂದರೆ ದೊನ್ನೆಯಲ್ಲಿ ಉಣ್ಣುತ್ತಾರೆ. ಪ್ರಯಾಣ ಏನೆಂದರೂ ಕಾಲನ್ನಡಿಗೆಯದು. ಬಹಳ ಎಂದರೆ ದ್ವಿಚಕ್ರದಲ್ಲಿ, ಅದು ಸ್ವಗೋತ್ರದವರಾದರೆ ಮಾತ್ರ. ಪಟ್ಟಣಗಳಿಗೆ ಹೋಗುವುದೇ ಅಪರೂಪ. ಇಂತಹ ಮಡಿವಂತಿಕೆ ಇದ್ದು, ಸ್ವಲ್ಪ ಸಡಿಲಗೊಳ್ಳುತ್ತಿದೆ. 
ದೇವರ ರೂಪ ತೆಳೆದ ಕಿಲಾರಿಗಳು: 
      ಎತ್ತುಗಳನ್ನು ಕಾಯುತ್ತಿದ್ದ ಈ ಕಿಲಾರಿ ಸಂಪ್ರದಾಯ ಸುಮಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಅಂತ ಉದಾಹರಣೆಗಳಲ್ಲಿ ಹಿಂದೇ ಕಿಲಾರಿಗಳಿಗೆ ಕಾರ್ಯನಿರ್ವಹಿಸುತ್ತಾ, ಪ್ರಕೃತಿಯಲ್ಲಿ ಅಪಾಯಗಳಿಗೆ ಸಿಕ್ಕಿ ಮಡಿದ ಕಿಲಾರಿಗಳು ಇಂದು ಪೂಜ್ಯನೀಯರಾಗಿದ್ದಾರೆ. ಅಂತವರಲ್ಲಿ ಗ್ರಾಧಿಪಾಲನಾಯಕ, ನಲಗೇತ ಎರಗಯ್ಯ ಮೊದಲಾದವರು. ಧಾರ‍್ಮಿಕ ವೃತ್ತಿಯಾಗಿರುವ ಕಿಲಾರಿತನ ಇಂದು ಅಂಥ ಆಕರ್ಷಣೆಯ ಕಾರ್ಯವಾಗಿ ಉಳಿದಿಲ್ಲ. ಆದರೂ ಜನರಿಗೆ ದೈವದ ಬಗೆಗೆ ಇರುವ ಭಯ, ನಂಬಿಕೆ ಸಂಪ್ರದಾಯ ರೂಪದಲ್ಲಿಯಾದರೂ ಉಳಿದಿದೆ. ಮುಂದೆಯೂ ಉಳಿಯುತ್ತದೆ. 

ಡಾ. ಎಸ್. ಎಂ .ಮುತ್ತಯ್ಯ

ಕರ್ನಾಟಕ ಅಂಬೇಡ್ಕರ್ : ಪ್ರೊ. ಬಿ. ಕೃಷ್ಣಪ್ಪ *



                                 - ಡಾ.ಎಸ್.ಎಂ.ಮುತ್ತಯ್ಯ

-೧-
          ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿರುವ ವೇದಿಕೆಯ ಮೇಲಿರುವ ಹಾಗೂ ನಮ್ಮ ಮುಂದೆ ಆಸೀನರಾಗಿರುವ ಎಲ್ಲಾ ಬಂಧುಗಳೇ ತಮಗೆಲ್ಲರಿಗೂ ಪ್ರೀತಿ ಪೂರ್ವಕ ನಮಸ್ಕಾರಗಳು.ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುವುದಕ್ಕೆ ನನಗೆ ಅತ್ಯಂತ ಸಂತಸವೆನಿಸುತ್ತದೆ. ಇದು ಎಲ್ಲಾ ಸಮಾರಂಭಗಳಲ್ಲಿ ಭಾಷಣಕಾರರು ಹೇಳುವಂತೆ ಬರೀ ಉಪಚಾರಕ್ಕೆ ಹೇಳಿದ ಮಾತಲ್ಲ. ಇದಕ್ಕೆ ಸ್ಪಷ್ಟವಾದ ಎರಡು ಕಾರಣಗಳಿವೆ : ಮೊದಲನೆಯದಾಗಿ ಈ ಸಮಾರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದೇವೆ. ಪ್ರೊ.ಬಿಕೆ ಅವರು ತಮ್ಮ ಅಸ್ಸೀಮ ಹೋರಾಟವನ್ನು ಆರಂಭ ಮಾಡಿದ್ದು ಈ ಭದ್ರಾವತಿಯಿಂದಲೇ. ಈ ನಗರ ಇಲ್ಲಿರುವ ವಿ.ಐ.ಎಸ್.ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳಿಂದ ಎಷ್ಟು ಪ್ರಸಿದ್ಧಿಯೋ ಕೃಷ್ಣಪ್ಪನವರು  ’ದಲಿತ ಸಂಘರ್ಷ ಸಮಿತಿ’ ಯನ್ನು ಮೊದಲು ಕಟ್ಟಿದ್ದು ಈ ಊರಿಂದಲೇ ಎಂಬುದರಿಂದಲೂ ಅಷ್ಟೇ ಪ್ರಸಿದ್ಧಿಪಡೆದಿದೆ. ಇಂಥ ಚಾರಿತ್ರಿಕ ಮಹತ್ವವಿರುವ ಈ ನೆಲದಲ್ಲಿ ನಿಂತು ಕೃಷ್ಣಪ್ಪನವರ ವಿಚಾರ ಧಾರೆಗಳನ್ನು ಮೆಲಕು ಹಾಕುವುದು ಮಾತನಾಡುವವರಿಗೆ ಒಂದು ರೀತಯಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. 
ಇನ್ನೂ ಎರಡನೆಯ ಕಾರಣವೆಂದರೆ ಈ ದಿನದ ಸಮಾರಂಭದಲ್ಲಿ ದಲಿತ ನೌಕರರ ಜಾಗೃತಿ ದಿನವೆಂದು ಕರೆದಿರುವುದು. ಈ ಹೊತ್ತಿನ ದಲಿತರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಮುಖ್ಯವಾದುದು ಎಂದರೆ ತಮ್ಮ ಸಮುದಾಯಗಳಲ್ಲಿ ಜಾಗೃತ ಪ್ರಜ್ಞೆ ಇಲ್ಲವಾಗಿರುವುದು. ಮೇಲ್ವರ್ಗದ ಸಮುದಾಯಗಳು ದಲಿತ ಸಮುದಾಯದವರನ್ನು ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕಿಂತ ದೊಡ್ಡ ಸತ್ಯವೇನೆಂದರೆ ಶೋಷಣೆ ಮಾಡುತ್ತಿದ್ದಾರೆ ಎಂಬುದೆ ದಲಿತರಿಗೆ ತಿಳಿಯದಂತಾಗಿರುವುದು. ಮೇಲ್ವರ್ಗದವರು ನಾವು ಶೇಷ್ಟ್ರರೆಂದು ಕರೆದುಕೊಂಡು ನೀವು ದಲಿತರು ಕನಿಷ್ಟವೆಂದು ಹೇಳಿದರೆ ಅದನ್ನು ಪ್ರಶ್ನಿಸದೇ ವಿಧೇಯತೆಯಿಂದ ಒಪ್ಪಿಕೊಂಡಿರುವುದು. ಇದೆಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ದುರ್ಬಲ ವರ್ಗಗಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದು ಉದ್ಧಾರವಾದ ದಲಿತರು ತಮ್ಮದೇ ಗುಂಪಿನ ದಲಿತರನ್ನು ಶೋಷಿಸುತ್ತಿರುವುದು. ಹಾಗೆಯೇ ದಲಿತರನ್ನು ಶೋಷಿಸುವವರಗೆ ಬಂಬಲವಾಗಿ ನಿಲ್ಲಿತ್ತಿದ್ದಾರೆ. ಹಾಗೆಯೇ ನಮ್ಮ ದಲಿತ ಸಮುದಾಯಗಳ ಯುವ ಪೀಳಿಗೆಯ ಜನ ದಲಿತರಾಗಿ ಹುಟ್ಟಿ ದಲಿತರಾಗಿರುವ ಕಾರಣಕ್ಕೆ ಸಿಗುವ ಎಲ್ಲಾ ಅವಮಾನಗಳನ್ನು ಉಂಡು, ಸಿಗುವ ಸೌಲಭ್ಯಗಳನ್ನು ಅನುಭವಿಸಿಯೂ  ಕೂಡ ನಾವು ದಲಿತರೆಂದು ಧೈರ‍್ಯದಿಂದ ಹೇಳಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಈ ಎಲ್ಲದಕ್ಕೂ ಇರಬಹುದಾದ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಸರಿಯಾದ ಜಾಗೃತಿ ಇಲ್ಲದಿರುವದೇ ಕಾರಣ. ಈ ಸಂದರ್ಭದಲ್ಲಿ ನಮ್ಮೊಳಗೆ ಗೈರು ಹಾಜರಿಯಾಗಿರುವ ಜಾಗೃತಿಯನ್ನು ಮೂಡಿಸಿಕೊಳ್ಳಬೇಕಾದುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ. 

         ಇಂಥ ಅಗತ್ಯವನ್ನು ಮನಗಂಡು ಆ ಕುರಿತು ಚರ್ಚಿಸಲು,ಆತ್ಮಾವಲೋಕನ ಮಾಡಿಕೊಳ್ಳಲು ಸೇರಿರುವ ಈ ಸಭೆಯನ್ನು ಕುರಿತು ಮಾತನಾಡುವುದೆಂದರೆ ಮಾತಾಡುವವರಿಗೆ ಖಂಡಿತಾ ಅತ್ಯಂತ ಖುಷಿಯ ಸಂಗತಿ. ಯಾರೂ ಶಾಲೆಗೆ ಬರುತ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಂದಾಗ ಶಿಕ್ಷರಲ್ಲಿ ಉಂಟಾಗುವ ಸಂತಸದ ಭಾವ ನನ್ನಲ್ಲಿ ಮೂಡುತ್ತಿದೆ. ಈ ದಿನ ನಾನು ಮಾತನಾಡಬೇಕಿಂದಿರುವ ಮಾತುಗಳನ್ನು ಪ್ರಮುಖವಾದ ಎರಡು ಭಾಗಗಳಾಗಿ ವಿಂಗಡಿಸಿ ಮಾತನಾಡಲು ಬಯಸುತ್ತೇನೆ. ಮೊದಲನೆಯದು ಪ್ರೊ.ಕೃಷ್ಣಪ್ಪ ಅವರ ಹೋರಾಟದ ಬದುಕಿನ ನಡೆ ಮತ್ತು ನುಡಿಯನ್ನು ಕುರಿತ ಭಾಗ. ಎರಡನೆಯದು ಇಂದಿನ ದಲಿತರ ಪ್ರಮುಖ ಸಮಸ್ಯೆಗಳು ಮತ್ತು ಅದಕ್ಕೆ ನಾವು ತೋರಬೇಕಾದ ಪ್ರತಿಕ್ರಿಯೆಗಳು
-೨-
       ಪ್ರೊ. ಕೃಷ್ಣಪ್ಪ ಅವರ ಬದುಕು  ಇಂದಿನ ನಮ್ಮ ನಿಮ್ಮ ಬದುಕಿಗಿಂತ ತುಂಬಾ ದುಸ್ಥಿತಿಯಲ್ಲಿತ್ತು. ಅವರ ದುಸ್ಥಿತಿಯ ಒಂದರೆಡು ವಿಷಯಗಳನ್ನು ಪ್ರಸ್ತಾಪಿಸುವುದಾದರೆ : ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಮತ್ತು ಆರ್ಥಿಕ ಬಲವಿರಲಿಲ್ಲ. ಮೂರು ಜನ ತಂಗಿಯರು ಹಾಗೂ ಮೂರು ಜನ ಸೋದರಿಯರ ಕೂಲಿ ಕುಟುಂಬದಲ್ಲಿ ಜೀವನ ನಡೆಸಿದವರು. ತಾವು ಬದುಕಿದ ಊರಲ್ಲಿದ್ದ ವಿಪರೀತ ಅಸ್ಪೃಶತಾವಾದಿಗಳ ನಡುವೆ ಬದುಕಿದವರು. ಮೆಡಿಕಲ್ ಓದಲು ಮನಸ್ಸಿದ್ದರೂ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹಿಂದೆ ಬಿದ್ದವರು. ದಲಿತ ಜನಾಂಗದಲ್ಲಿ ಹುಟ್ಟದ ಕಾರಣಕ್ಕೆ ತನ್ನ ಕೊನೆಗಾಲದವರೆಗೂ ಸಾಕಷ್ಟು ನೋವನ್ನುಂಡವರು. ಚಿತ್ರದುರ್ಗ ಜಿಲ್ಲೆಯ ಹರಿಹರದ ಬಸಪ್ಪ ಮತ್ತು ಚೌಡಮ್ಮನವರ ಹಿರಿಯ ಮಗನಾಗಿ ಪ್ರೊ.ಬಿ. ಕೃಷ್ಣಪ್ಪನವರು ೧೯೩೮, ಜೂನ್ ೯ ರಂದು ಜನಿಸಿದರು. ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿ ದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು. ಇಂಥ ಕಷ್ಟಕರವಾದ ಬದುಕನ್ನು ಸಾಗಿಸಿದ ಬಿಕೆ ಅವರು ಸಾಮಾನ್ಯರಂತೆ ತನಗೆ ಬಂದ ಬಾಳಿನ ಕರ್ಮವೆಂದು ಭಾವಿಸದ್ದರೆ ಈ ಹೊತ್ತು ನಾವೆಲ್ಲರು ಸೇರಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಶ್ರೀಯುತರು ಬಾಳಿನ ಪ್ರತೀ ನೋವಿನ ಸಂದರ್ಭದಲ್ಲೂ ತನ್ನ ನೋವನ್ನು ತನ್ನದು ಮಾತ್ರವೆಂದು ತಿಳಿಯದೇ ನನ್ನ ನೋವು ನನ್ನ ಸಮುದಾಯಗಳ ಎಲ್ಲರ ನೋವು ಎಂದು ಭಾವಿಸಿ, ಆ ನೋವಿಗೆ ಕಾರಣರಾದವರ ವಿರುದ್ಧ ಸಿಡಿದೆದ್ದು ಪ್ರತಿಭಟನಾ ಆಂದೋಳನಗಳನ್ನು ಕಟ್ಟಿ ಬೆಳೆಸಿದರು. ಇವರ ಅಂಥ ನೂರಾರು ಪ್ರಯತ್ನಗಳು ಕರ್ನಾಟಕದ ದಲಿತ ಸಮುದಾಯಗಳ ಬಿಡುಗಡೆಯ ಮಾರ್ಗಗಳಾದವು. ಕೃಷ್ಣಪ್ಪನವರು ದಲಿತರ ಆಶಾಕಿರಣವಾದರು.
      ಇವರಿಗೆ ತನ್ನ ವಿದ್ಯಾಭ್ಯಾಸದ ಪ್ರತಿಫಲವಾಗಿ ಉತ್ತಮವಾದ ಸರ್ಕಾರಿ ನೌಕರಿಯೂ ಸಿಕ್ಕಿತೂ ಆಗ ಈಗಿನ ನಮ್ಮ ನೌಕರರಂತೆ ತಾನು ತನ್ನ ಕುಟುಂಬ ಸಂತೋಷದಿಂದ ಇದ್ದರೆ ಸಾಕು ಎಂದು ಯೊಚಿಸಬಹುದಿತ್ತು. ಆದರೆ ಕೃಷ್ಣಪ್ಪನವರು ಎಂದು ಹಾಗೆ ಯೋಚಿಸಲಿಲ್ಲ. ತನಗೆ ಬರಿತ್ತಿದ್ದ ಸಂಭಳದ ಬಹುಭಾಗವನ್ನು ತನ್ನ ಚಳವಳಿಯ ಓಡಾಟಗಳಿಗೆ ಬಳಸಿದರು. ಚಳುವಳಿಯ ನಾಯಕನಾಗಿ ಪಡೆದ ಜನಪ್ರಿಯತೆಯಿಂದ ದೊರೆಯುವ ರಾಜಕೀಯ ಲಾಭಗಳನ್ನು ಪಡೆದು ತಾನು ದೊಡ್ಡ ವಿಐಪಿಯಾಗಿ ಬೆಳೆಯಬಹುದಿತ್ತು. ಅದರ ಬದಲಿಗೆ ನಾನು ಮಾಡವುದೇನಿದ್ದರೂ ಅದು ಸಮುದಾಯದ ಉದ್ಧಾರಕ್ಕೆ ಮಾತ್ರ ಎಂಬ ಧೃಢವಾದ ನಂಬಿಕೆಯುಳ್ಳವರಾಗಿದ್ದರು. ಅಧಿಕಾರದ ಹಿಂದೆ ಬೀಳದೆ ತಮ್ಮ ಜನರ ಶ್ರೇಯೋಭಿವೃದ್ಧಿಯ ಬೆನ್ನು ಹತ್ತಿದವರು. ಪ್ರೊ.ಬಿ.ಕೆಯವರು ಶಾಸಕರೂ ಆಗಲಿಲ್ಲ, ಮಂತ್ರಿಯೂ ಆಗಲಿಲ್ಲ, ಅಧ್ಯಕ್ಷಗಿರಿಗಾಗಲೀ, ತಮ್ಮವರನ್ನು ಅಲ್ಲಿಗೆ ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶಸ್ತಿ ಪತ್ರಕ್ಕಾಗಲಿ, ಬೆಳೆಯುತ್ತಿರುವ ದಲಿತ ಶಕ್ತಿಯು ಬೃಹತ್ ರಾಜಕೀಯ ಶಕ್ತಿಯಾಗ ದಂತೆ ನಿಗ್ರಹಿಸುವ ತಂತ್ರದಲ್ಲಿ ಇಡಿಯಾದ ಸಂಘಟನೆಯನ್ನು ಚಿಂದಿ ಮಾಡಲು ವಸಾಹತು ಶಾಹಿಗಳು ನೀಡುವ ಎಂಜಲಿಗಾಗಲೀ ಲಾಬಿ ನಡೆಸಿದವರಲ್ಲ. ಸ್ವಾಭಿಮಾನದಿಂದ ಸಂಘರ್ಷ ಮಾಡಿದ್ದರು. ಸಂಘಟನೆಯ ವಿಷಯದಲ್ಲಿ ಸೈದ್ಧಾಂತಿಕವಾಗಿ ತುಂಬಾ ಗಂಭೀರತೆಯಿದ್ದ ವಿಚಾರಶೀಲ ವ್ಯಕ್ತಿಯಾಗಿದ್ದರು. ವೈಯಕ್ತಿಕವಾಗಿಯೂ ಅಪಾರ ಪ್ರಾಮಾಣಿಕರಾಗಿದ್ದರು. ಅವರು ಪರಿನಿಬ್ಬಾಣ ಹೊಂದಿದ ದಿನ ಅವರ ಮೃತ ಶರೀರವನ್ನು ದಫನ ಮಾಡುವುದಕ್ಕೂ ಅವರದ್ದೇ ಆದ ಸ್ವಂತ ಜಾಗ ಇರಲಿಲ್ಲ! ಹತ್ತಿರದ ಸ್ವಜಾತಿ ಬಾಂಧವರೊಬ್ಬರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಪ್ರತಿಯೊಬ್ಬರೂ ಬಿ.ಕೆ.ಯವರಿಂದ (ಸಂಘಟನೆಯಿಂದ) ವಿಚಾರದ ನೆರವು ಪಡೆದಿದ್ದಾರೆಯೇ ಹೊರತು ಅವರಿಗೆ ಸಂಘಟನೆ (ನಾವು) ಏನನ್ನೂ ನೀಡಲಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು.ಶೋಷಿತರ ಹಕ್ಕುಗಳಿ ಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ. ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.
ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆಸಿದ ಹೊರಾಟಗಳ ಸ್ವರೂಪವನ್ನು ಒಮ್ಮೆ ಚಾರಿತ್ರಿಕ ಅವಲೋಕನ ಮಾಡಿಕೊಳ್ಳಬೇಕು. ಶ್ರೀಯುತರು ನಡೆಸಿದ ಹೋರಾಟಗಳನ್ನು ಹೆಸರಿಸುವುದಾದರೆ:   

  1. ಕರ್ನಾಟಕದಲ್ಲಿ ಸಾರ್ವಜನಿಕ ಹೋಟೆಲ್‌ಗಳಲ್ಲಿ ದಲಿತರು ತೆಂಗಿನ ಚಿಪ್ಪಿನಲ್ಲಿ ಟೀ ಕಾಫಿ ಕುಡಿಯುವದರ ವಿರುದ್ಧ           ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿ ಅದನ್ನು ನಿಷೇಧಿಸುವಂತೆ ಮಾಡಿದ್ದು ದಲಿತರ ಬದುಕಿನ ಮರ್ಯಾದೆ ಕಾಪಾಡಿದ   ಕೀರ್ತಿ
  2. ದಲಿತರಿಗೆ ಯಾವುದೇ ಭೂ ಒಡೆತನವಿಲ್ಲದೆ ಕೇವಲ ಜೀತದಾಳಗಳಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರಿಗೂ ಭೂ   ಒಡೆತನ ಬೇಕೆಂದು ಹೋರಾಟಗಳನ್ನು ಕಟ್ಟಿ ಸರ್ಕಾರಿ ಭೂಮಿಯನ್ನು ದಲಿತ ಭೂಹೀನರಿಗೆ ಹಂಚುವಂತೆ ಮಾಡಿದ್ದು        ಕೃಷ್ಣಪ್ಪ ನವರ ಬಹುದೊಡ್ಡ ಸಾಧನೆ.
  3. ಚಂದ್ರಗುತ್ತಿಯ ಎಲ್ಲಮ್ಮನ ಜಾತ್ರೆಯಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದ ಹೆಣ್ಣುಮಕ್ಕಳು ನಡೆಸುತ್ತಿದ್ದ ಬೆತ್ತಲೆ            ಸೇವೆಯನ್ನು ವಿರೋಧಿಸಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿ ಸರ್ಕಾರ ಅದನ್ನು ನಿಷೇಧಿಸುವಂತೆ ಮಾಡಿದ್ದು         ಒಂದು ಚಾರಿತ್ರಿಕ ಸಾಧನೆಯಾಗಿದೆ. 
  4. ಸರ್ಕಾರ ದಲಿತ ಹಾಗೂ ಹಿಂದುಳಿದ ವರ್ಗಗಳ ಸುಧಾರಣೆಗಾಗಿ ನೇಮಿಸಿದ ಚಿನ್ನಪ್ಪರೆಡ್ಡಿ ಮತ್ತು ಮಂಡಲ್ ಆಯೋಗಗಳ  ವರದಿಯನ್ನು ಜಾರಿಮಾಡಲು ಮೀನ ಮೇಶ ಎಣಿಸುತ್ತಿದ್ದಾಗ, ಆ ಆಯೋಗಗಳ ವರದಿಗಳ ಜಾರಿಗಾಗಿ ಆಗ್ರಹಿಸಿ  ರಾಜ್ಯವ್ಯಾಪಿ ಹೋರಾಟ ಕಟ್ಟಿ ಯಶಸ್ವಿಯಾದರು.
  5. ಕರ್ನಾಟಕದಲ್ಲಿ ನಡೆಯುತ್ತಿದ್ದ ಅನೇಕ ದಲಿತರ ದೌರ್ಜನ್ಯಗಳ ವಿರುದ್ಧ ಹೊರಾಟ ರೂಪಿಸಿದರು.   
-೩-
           ದಲಿತರಾದ ನಾವೆಲ್ಲ ಇಲ್ಲಿಯವರೆಗೆ ನಮಗಿರುವ ಸಮಸ್ಯೆಗಳಲ್ಲಿ ಕೇವಲ ಸಾಮಾಜಿಕ ಆಯಾಮದ (ಅಸೃಷ್ಯತೆ) ಬಗ್ಗೆ ಮಾತ್ರ ಹೆಚ್ಚು ತಲೆಕೆಡಿಸಿಕೊಂಡಿದ್ದೇವೆ. ಆದರೆ ಇಂದು ಸಾಮಾಜಿಕ ಸಮಸ್ಯೆಗಿಂತ ಹೆಚ್ಚಾಗಿ ನಮ್ಮನ್ನು ಕಾಡುತ್ತಿರುವುದು ಆರ್ಥಿಕ-ರಾಜಕೀಯ ಆಯಾಮದ ಸಮಸ್ಯೆಗಳು. ಸಮಾಜದಲ್ಲಿ ನಮ್ಮನ್ನು ಅಯ್ಯೋ ದಲಿತರು ಅವರನ್ನು ನಾವು ಇಲ್ಲಿಯವರೆಗೆ ಮನುಷ್ಯರಂತೆ ನೋಡಿಲ್ಲ ಎಂಬ ಭಾವನೆ ಮೇಲ್ವರ್ಗದವರಲ್ಲಿ ಬಹುಪಾಲು ಜನರಿಗೆ ಇದೆ. ಆದರೆ ಈ ಭಾವನೆ ನಮಗೆ ಬುದುಕಿನಲ್ಲಿ ಸಮಪಾಲು ನೀಡುವ ಮಾನವೀಯತೆಗಿಂತ ಕೃತಕ ಕರುಣೆಯಾಗಿದೆ.  ಇಂದು ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಮಾನಸಿಕವಾಗಿ ಅಂರ್ತಗತವಾಗಿವೆ. ಹೊರನೋಟಕ್ಕೆ ನಮ್ಮನ್ನು ಗೌರವದಿಂದ ಕಾಣುವಂತೆ ನಟಿಸಿ ಒಳಗೊಳಗೆ ನಮ್ಮನ್ನು ಹಿಂಸಿಸುತ್ತಿರುವುದು ನಮ್ಮಲ್ಲಿ ಬಹಳಷ್ಟು ಜನರಿಗೆ ಅರ್ಥವಾಗುತ್ತಿಲ್ಲ. ಈ ಗೊಂದಲದಿಂದಾಗಿವೆ ನಮ್ಮ ನಿಜವಾದ ಶತ್ರುಗಳು ಯಾರೆಂದು ನಮಗೆ ಸರಿಯಾಗಿ ಅರ್ಥವೇ ಆಗಿಲ್ಲ. ಇದರಿಂದಾಗಿ ನಮ್ಮ ಒಂದು ಕಾಲದ ಶತ್ರುಗಳಾಗಿದ್ದ ಬ್ರಾಹ್ಮಣರನ್ನೇ ಇಂದಿಗೂ ಶತ್ರುಗಳೆಂದು ಭಾವಿಸಿದ್ದೇವೆ. ಬ್ರಾಹ್ಮಣರಿಗಿಂತ ಅತ್ಯಂತ ಅಪಾಯಕಾರಿಯಾದ ಶತ್ರುಗಳು ಇಂದು ಆರ್ಥಿಕ ಹಾಗೂ ರಾಜಕೀಯ ಒಡೆತನವನ್ನು ತಮ್ಮ ಹಿಡಿತದಲ್ಲಿಟ್ಟು ಕೊಂಡಿರುವ ಲಿಂಗಾಯತ ಮತ್ತು ಒಕ್ಕಲಿಗ ಇವೇ ಮೊದಲಾದ ಪ್ರಭಲ ಸಮುದಾಯಗಳು. ಇವರು ಸರ್ಕಾರ ಮತ್ತು ವೈಯಕ್ತಿಕ ನೆಲೆಯಲ್ಲಿ ದಲಿತರ ಪರವಾಗಿ ಮಾತನಾಡುತ್ತಾರೆ. ಕೆಲಸ ಕಾರ್ಯಗಳ ಸಂದರ್ಭದಲ್ಲಿ  
            ಇಂದು ದಲಿತರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾದ ಮತ್ತೊಂದು ಸಮಸ್ಯೆ ದಲಿತರೇ ದಲಿತರನ್ನು ಶೋಷಣೆ ಮಾಡುತ್ತಿರುವುದು. ಇದರಲ್ಲಿ ಎರಡು ಮಾದರಿಗಳಿವೆ. ಮೊದಲನೆಯದು ದಲಿತರಾದ ಕಾರಣಕ್ಕೆ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದು ಮುಂದುವರೆದ ಜನ ಅಕ್ಕ ಪಕ್ಕದ ತನ್ನದೇ ಸಮುದಾಯದ ಜನರನ್ನು ಶೋಷಣೆಮಾಡುವ ಹಂತಕ್ಕೆ ತಲುಪಿದ್ದಾರೆ. ಸೌಲಭ್ಯಗಳನ್ನು ಪಡೆಯುವ ಆಸೆಯಲ್ಲಿ ತಾನು ನಡೆದು ಬಂದ ಹಾದಿಯನ್ನೇ ಮರೆತ್ತಿದ್ದಾರೆ. ಈ ವಿಷಯದಲ್ಲಿ ಇನ್ನೂ ಒಂದು ವಿಷಾಧದ ಸಂಗತಿಯೆಂದರೆ ಪ್ರಬಲ ವರ್ಗಗಳ ಶೋಷಣೆಗೆ ಇವರೇ ಬೆಂಬಲ, ಕುಮ್ಮಕ್ಕು ಕೊಡುತ್ತಿರುವುದು. ಇಂಥ ಕೆಲಸದಲ್ಲಿ ರಾಜಕೀಯ ಕ್ಷೇತ್ರ ಮುಂಚೂಣಿಯಲ್ಲಿದೆ. ರಾಜಕೀಯ ಮತ್ತು ಸರ್ಕಾರಿ ವ್ಯವಸ್ಥೆಗಳು ದಲಿತರನ್ನು ನೋಡುವ ಪರಿ ವಿಚಿತ್ರವಾಗಿದೆ. ದಲಿತರ ಪರವಾಗಿ ಮಾಡುವ ಎಲ್ಲಾ ಯೋಜನೆಗಳು ನಮ್ಮನ್ನು ಸ್ವಾಲಂಬಿಗಳನ್ನಾಗಿ ಮಾಡುವದಕ್ಕಿಂತ ಪರಾವಲಂಭಿಗಳನ್ನಾಗಿ ಮಾಡಿವೆ. ನಮಗೆ ತತ್ಕಾಲಕ್ಕೆ ಬೇಕಾಗಿರುವ ಹಣ, ಆಹಾರಗಳನ್ನು ಕೊಟ್ಟು ಅವುಗಳಿಗಾಗಿಯೇ ನಾವು ಸದಾ ಬಾಯ್ತೆರದು ಕೋರುವಂತೆ ಮಾಡಿದ್ದಾರೆ. ನಮ್ಮ ಈ ಸ್ಥಿತಿ ಅವರಿಗೆ ಸದಾ ಇರಬೇಕು ಹಾಗಾದರೆ ಮಾತ್ರ ಅವರ ಸುಖ ಸಂತೋಷದ ಬದುಕು ಸಾಗಿಸಲು ಸಾಧ್ಯ. ಅಂದರೆ ರಾಜಕೀಯ ಚದುರಂಗದಾಟದಲ್ಲಿ ನಾವು ಏನಿದ್ದರೂ ದಾಳಗಳು ಅಷ್ಟೆ. ಚುನಾವಣೆ ಮತ್ತು ಪಕ್ಷ ರಾಜಕಾರಣದಲ್ಲಿ ನಾವೆಲ್ಲರೂ ಮತ ಬ್ಯಾಂಕ್‌ಗಳು ಅಷ್ಟೇ. ಇನ್ನೂ ದುರಂತದ ಸಂಗತಿಯೆಂದರೆ ದಲಿತ ಗುಂಪಿನ ರಾಜಕಾರಣಿಗಳು ದಲಿತರ ಪರವಾದ ಯಾವೊಂದು ಉತ್ತಮ ಕೆಲಸ ಮಾಡಿದಂತೆ ಕಾಣುವುದಿಲ್ಲ. ದಲಿತ ವ್ಯಕ್ತಿಯೊಬ್ಬರಿಗೆ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ನಮ್ಮ ಪಕ್ಷ ದಲಿತರಿಗೆ ಮಹದುಪಕಾರ ಮಾಡಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತವೆ. ಆದರೆ ಅಂಥ ಸ್ಥಾನ ಪಡೆದ ದಲಿತ ಮುಖಂಡರು ತಮ್ಮ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂಧಿಸುತ್ತಾರಾ? ಎಂಬುದು ಯಕ್ಷ ಪ್ರಶ್ನೆ. ಒಟ್ಟಾರೆ ಸಮಾಜದ ದಮನಿತ ವರ್ಗಗಳ ಸಬಲೀಕರಣಕ್ಕೆ ಪ್ರಯತ್ನಿಸ ಬೇಕಿದ್ದ ಆಳುವ ವ್ಯವಸ್ಥೆ ಅದನ್ನು ಮಾಡದೆ ತನ್ನ ಹಿತದೃಷ್ಟಿಯಿಂದ ಯತಾಸ್ಥಿತಿಯನ್ನು ಎಚ್ಚರದಿಂದ ಕಾಪಿಟ್ಟುಕೊಂಡು ಬರುತ್ತಿದೆ. ನಮ್ಮ ಆರ್ಥಿಕ ಸ್ವಾವಲಂಬನೆ ಯಾರಿಗೂ ಬೇಡವಾದ ವಿಷಯವಾಗಿದೆ. ದಲಿತ ರಾಜಕಾರಣಿಗಳಿಗೂ ಕೂಡ.
          ದಲಿತ ಸಮುದಾಯಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಡಕಿನ ಸಮಸ್ಯೆ ಬಹಳ ಗಂಭೀರವಾದುದು. ದಲಿತ ಗುಂಪುಗಳಲ್ಲಿ ಹುಟ್ಟಿಕೊಂಡಿರುವ ಒಳ ಮೀಸಲಾತಿ ಜಗಳ ದಲಿತರ ಅಗತ್ಯವೆನಿಸಿದರೂ ಅದರಿಂದ ದೊರೆಯ ಬಹುದಾದ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ರೀತಿಯ ಭಿನ್ನತೆ ನಿಜವಾಗಿಯೂ ಇರುವ ಅಸಮಾನತೆಯ ಕಾರಣಕ್ಕೆ ಹುಟ್ಟಿಕೊಂಡಿದೆ ಎನ್ನುವುದಕ್ಕಿಂತ ವ್ಯವಸ್ಥೆಯಲ್ಲಿ ಬೇಕೆಂದೇ ಹುಟ್ಟು ಹಾಕಿದ ಸಮಸ್ಯೆ ಎಂದೆನಿಸುತ್ತದೆ. ಇದರಿಂದ ದಲಿತರಿಗೆ ಆಗುವ ಲಾಭಕಿಂತ ಶೋಷಿತ ವರ್ಗಕ್ಕೆ ಹೆಚ್ಚಿನ ಲಾಭವಾಗಲಿದೆ.
         ದಲಿತರ ಪರವಾಗಿ ಕೆಲಸ ಮಾಡುವ ಸಂಘಗಳು ಮತ್ತು ಸಂಘಟನೆಗಳು ನೈಜ ಉದ್ದೇಶಗಳನ್ನು ಮರೆತು ಅವು ಕೂಡ ಸಂಘದ ಪದಾಧಿಕಾರಿಗಳ ಸ್ವಾರ್ಥ ಸಾಧನೆಗಳಿಗೆ ಬಲಿಯಾಗಿವೆ. ದಲಿತ ಸಂಘರ್ಷ ಸಮಿತಿಯ ಆರಂಭದ ಹಂತದ ಶಕ್ತಿ ಸಾಮರ್ಥ್ಯ ಹಾಗೂ ಸಂಘಟನಾಕಾರರ ಬದ್ಧತೆಗಳನ್ನು ನೋಡಿದರೆ ಇಂದಿನ ಸಂಘಟನೆಗಳಲ್ಲಿ ಅಂಥ ಒಂದು ಅಂಶ ಕೂಡ ಕಾಣದು. ಕಾಲದ ಮಹಿಮೆಯೋ ಏನೋ ಸಂಘಟನೆಗಳು ತೀರ್ವವಾದ ಪಲ್ಲಟಗಳಿಗೆ ಸಿಕ್ಕು ಛಿದ್ರ ಛಿದ್ರವಾಗಿವೆ. ಉತ್ತಮ ಉದ್ದೇಶಗಳಿಗಾಗಿ ಈ ಭಿನ್ನತೆಗಳು ಹುಟ್ಟಿಕೊಂಡಿದ್ದರೆ ಸಮಸ್ಯೆಯಿರಲಿಲ್ಲ. ಭಿನ್ನತೆಗಳು ಹುಟ್ಟಿಕೊಂಡಿರುವುದು ಹಣ, ಅಧಿಕಾರದ ಆಸೆಗಾಗಿ, ಸ್ವಾರ್ಥ ಸಾಧನೆಗಾಗಿ. ಸಂಘಟನೆಗಳ ವಿಷಯದಲ್ಲಿ ಪ್ರಸ್ತಾಪಿಸಲೇ ಬೇಕಾದ ಸಂಗತಿ ಆಡಳಿತ ಶಾಹಿಯನ್ನು ಬ್ಲಾಕ್ ಮೇಲ್ ಮಾಡಿ ಹಣ ಮಾಡುವ ದಂದೆಗಾಗಿಯೇ ಹುಟ್ಟಿಕೊಂಡಿರುವ ಲೆಟರ್ ಹೆಡ್ ಗೆ ಸೀಮಿತವಾದ ಸಂಘಟನೆಗಳು. ಇದರಿಂದ ದಲಿತರ ಮೇಲೆ ಎಂಥ ದುಷ್ಪರಿಣಾಮ ಬೀರಿದೆ ಎಂಬುದು ನಮಗೆಲ್ಲರಿಗೂ ತಿಳಿದ ಸಂಗತಿಯೇ . ಸಮುದಾಯಗಳ ಉದ್ದಾರಕ್ಕೆ ಸಮರ್ಥ ಶಕ್ತಿಗಳಾಗಿದ್ದ ಸಂಘಟನೆಗಳನ್ನು ತಮ್ಮ ಹಿತಾಸಕ್ತಿಗೆ ಬಳಕೆಮಾಡಿ ಸಮುದಾಯದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದು ಖಂಡಿತಾ ಸಮುದಾಯಗಳಿಗೆ ಮಾಡಿದ ಘೋರ ಅಪರಾಧ. 
ಇಂದು ನಾವೆಲ್ಲ ಮಾಡಬೇಕಾದುದು ಏನು ?

  1. ದಲಿತರ ವಿವಿಧ ಗುಂಪುಗಳು ಮತ್ತು ಸಂಘಟನೆಗಳ ಮಧ್ಯೆ ಇರುವ ಭಿನ್ನತೆ ತಾತ್ವಿಕವಾದುದಲ್ಲ. ಈ ಎಲ್ಲಾ ಗುಂಪುಗಳು ಎದುರಿಸುತ್ತಿರುವ ಸಮಸ್ಯೆಗಳು ಒಂದೇ ರೀತಿಯವು ಹಾಗೂ ಎಲ್ಲಾ ಸಂಘಟನೆಗಳು ಇಟ್ಟುಕೊಂಡಿರುವ ಗುರಿಗಳು       ಒಂದೇ ಆದರೆ ಕೆಲವು ಸಣ್ಣ ಪುಟ್ಟ ವ್ಯತ್ಯಾಸಗಳು ದೊಡ್ಡದಾಗಿ ಮೂಲ ಉದ್ದೇಶಗಳನ್ನೇ ಮರೆಸಿವೆ. ಇದನ್ನು                 ಅರ್ಥಮಾಡಿಕೊಂಡು ನಾವೆಲ್ಲರೂ ಒಗಟ್ಟನ್ನು ಪ್ರದರ್ಶಿಸಲೇಬೇಕಾಗಿದೆ. 
  2. ಸಂವಿಧಾನಾತ್ಮಕವಾಗಿ ದೊರೆಯುತ್ತಿರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸುಸ್ಥಿತಿಗೆ              ತಲುಪಬೇಕು. ನಾವು ಸುಸ್ಥಿತಿಗೆ ತಲುಪಿದ ನಂತರ ನಮ್ಮ ಹಿಂದಿರುವ ಬಂಧುಗಳಿಗೆ ಆ ಸೌಲಭ್ಯಗಳು ದೊರೆಯುವಂತೆ  ಮಾಡಬೇಕು. ಸಾಧ್ಯವಾದರೆ ನಮಗೆ ಸಿಗುವ ಫಲದಿಂದಲೂ ಸ್ವಲ್ಪ ಮಟ್ಟಿನ ಸಹಕಾರ ಮಾಡಬೇಕು.
  3. ದಲಿತ ಸಮುದಾಯಗಳಿಗೆ ಅಗತ್ಯವಾಗಿ ಬೇಕಿರುವ ಶಾಶ್ವತ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುವಂತೆ              ಸರ್ಕಾರಗಳ ಮೇಲೆ ಒತ್ತಡ ತರಬೇಕು. ಪರಾವಲಂಭಿಗಳಾಗಿಸುವ  ತಾತ್ಕಾಲಿಕ ಹಾಗೂ ಜನಪ್ರಿಯ ಯೋಜನೆಗಳಿಗೆ    ಗಂಟು ಬೀಳಬಾರದು. ಮೀಸಲಾತಿಯಿಂದ ಮಾತ್ರ ನಮ್ಮ ಉದ್ಧಾರ ಎಂಬುದನ್ನು ಪುನರ್ ಪರಿಶೀಲಿಸಬೇಕು.
  4. ಸಮದಾಯ ಚಿಂತನೆಯ ಹಿನ್ನೆಲೆಯಲ್ಲಿ ರಾಜಕಾರಣ ಇರುವಂತೆ ನೋಡಿಕೊಳ್ಳಬೇಕು. ಇಂದು ಮೀಸಲು ಕ್ಷೇತ್ರಗಳಿಂದ ಸರಿಯಾದ ವ್ಯಕ್ತಿಗಳನ್ನು  ಆರಿಸಿ ಕಳುಹಿಸಬೇಕು. 


                                                        ******************