Sunday 28 December 2014

ಶಿಕ್ಷಕರ ದಿನಾಚರಣೆ

                                                                                                                        ಡಾ. ಎಸ್.ಎಂ.ಮುತ್ತಯ್ಯ
ತಮಗೆಲ್ಲರಿಗೂ ಇಂದಿನ ಶಿಕ್ಷರ ದಿನಾಚರಣಾ ಸಮಾರಂಭದ ಶುಭಾಷಯಗಳು ನನ್ನ ಕೆಲವು ವಿಚಾರಗಳನ್ನು ಇಷ್ಟೊಂದು ಜನ ಶಿಕ್ಷಕರ ನಡುವೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಶಿಕ್ಷಣ ಎಂಬುದು ಮಾನವನ ಜೀವನಕ್ಕೆ ಬಹಳ ಮಹತ್ವದ್ದು. ಮನುಷ್ಯನ ಸರ್ವೋತೋಮುಖ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ಇಂಥ ಮಹತ್ವದ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ-ಮೌಲ್ಯಗಳ ರವಾನೆದಾರರಾದ ಶಿಕ್ಷಕರ ಪಾತ್ರ ಅತ್ಯಂತ ಪ್ರಧಾನವಾದುದು.  ಇದು ನಿರಂತರವಾದ ಮತ್ತು ಸಾರ್ವತ್ರಿಕ ಪ್ರಕ್ರಿಯೆ ಕೂಡಾ ಆಗಿದೆ. ಈ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ ೫ ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿ ಸೆಪ್ಟೆಂಬರ ೫, ೧೯೬೨ ರಿಂದ  ಶಿಕ್ಷಕರ ದಿನವನ್ನು ಆಚರಿಸುವ ಪದ್ದತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನೆ  ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯನ್ನು ಕಳೆದ ಕಳೆದ ೫೨ ವರ್ಷಗಳಿಂದ ಆಚರಿಸುತ್ತಾ ಬಂದಿರುವ ನಾವು ಸಹಜವಾಗಿಯೇ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಮಾಡಿರುವ ಸಾಧನೆಗಳನ್ನು ಹಾಗೂ ಅವರು ತಲುಪಿದ ಉನ್ನತ ಸ್ಥಿತಿಯನ್ನು ಸ್ಮರಿಸುವುದು. ಶಿಕ್ಷಕ ವೃತ್ತಿಯ ಶ್ರೇಷ್ಟತೆಯನ್ನು ಹೇಳುವುದು. ಅಲ್ಲಲ್ಲಿ ಔಪಚಾರಿಕವಾಗಿ ಶಿಕ್ಷಕರು ತಮ್ಮ ಮೂಲ ಉದ್ದೇಶಗಳನ್ನು ಮರೆತಿರುವ ಬಗ್ಗೆ ಪ್ರಸ್ತಾಪಿಸುವುದು. ಒಟ್ಟಾರೆ ಎಲ್ಲರು ಉತ್ತಮ ಶಿಕ್ಷಕರಾಗಬೇಕೆಂದು ಕರೆಕೊಡುವುದು ಇಂಥ ಸಾಂಪ್ರದಾಯಿಕ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ. ಸ್ವತಃ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಪರಿವರ್ತಿಸಿದ ದಿನ ಬಹಳ ಖುಷಿಯಾಗಿದ್ದು ತನ್ನ ಜನ್ಮ ದಿನ ವೈಯುಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿತ್ತಿದೆ ಎಂಬ ಕಾರಣಕ್ಕೆ. ವೈಯುಕ್ತಿಕವಾದುದು ಒಬ್ಬರ ಸಾಧನೆಗಳನ್ನು ಸ್ಮರಣೆಮಾಡುವುದರ ಮೂಲಕ ಜನರ ಮನಸ್ಸಲ್ಲಿ ಉಳಿಸ ಬಹುದಷ್ಟೇ ಆದರೆ ಅವರ ಆ ಕಾರ್ಯಗಳು ಮುಂದುವರೆಯಲಾರವು. ಸಾಮೂಹಿಕತೆ ಇದಕ್ಕೆ ವಿರುದ್ಧವಾದುದು. ಇದರಲ್ಲಿ ಒಬ್ಬರ ಉನ್ನತ ಕಾರ್ಯಗಳು ಸ್ಮರಣೆಗೆ ಸೀಮಿತಗೊಳ್ಳದೆ ಸ್ಮರಣೆಯ ಆಚೆಗೆ ಮುಂದುವರೆಯುವ ಪ್ರಯತ್ನವಿರುತ್ತದೆ. ರಾಧಾಕೃಷ್ಣನ್ ಅವರು ತಮ್ಮ  ಸಾಧನೆಗಳು ಮುಂದಿನ ಕಾಲಕ್ಕೆ ಉಳಿದು ಬೆಳೆಯಬೇಕು ಎಂಬ ಕಾರಣಕ್ಕೆ ತನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಒಪ್ಪಿಗೆ ಸೂಚಿಸಿದರು. ಹಾಗಾಗಿಯೇ ಶಿಕ್ಷಕರ ದಿನಾಚರಣೆ ಎಂಬುದು ರಾಧಾಕೃಷ್ಣ ಅವರ ಸಾಧನೆಗಳ ಪ್ರಸಂಶೆ ಮಾತ್ರವಾಗದೆ, ಅವರ ಆ ಮಹಾನ್ ಶಕ್ತಿಯನ್ನು ನಾವೆಲ್ಲರೂ ಅನುಸರಿಸಿ ಅಂಥ ಇನ್ನಷ್ಟು ಸಾಧನೆಗಳನ್ನು ಮಾಡುವುದರ ಮೂಲಕ ಶಿಕ್ಷಕ ವೃತ್ತಿಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆಯಬೇಕು. ಆದರೆ ಇಂದು ನಾವೆಲ್ಲರೂ ಪ್ರಮಾಣಿಕವಾಗಿ ಹೇಳುವುದಾದರೆ ಅಂಥ ಪಥದ ವಿಸ್ತರಕರು ಬೇಡ ಕೇವಲ ಪಥಿಕರಾದರೂ ಆಗಿದ್ದೇವೆ ? ಎಂಬುದಾಗಿ ಪ್ರಶ್ನಿಸಿಕೊಳ್ಳಬೇಕು
ಆದರೆ ನಾವು ಈ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ನಮ್ಮ ಸಮಾಜದಲ್ಲಿ ಆಚರಿಸುವ ಎಲ್ಲಾ ದಿನಾಚರಣೆಗಳು ಹೀಗೆ ಇವೆ ಎಂಬ ಕಾರಣಕ್ಕೆ ನಮ್ಮ ಇಂಥ ತಪ್ಪು ನಡೆಗಳಿಗೆ ಸಮರ್ಥನೆ ಪಡೆಯಬೇಕಿಲ್ಲ. ಪಡೆಯಬಾರದು ಕೂಡ. ಏಕೆಂದರೆ ನಾವೆಲ್ಲ ಭವಿಷ್ಯವನ್ನು ರೂಪಿಸುವ ಜ್ಞಾನಿಗಳನ್ನು, ಉತ್ತಮ ಜೀವನ ನಡೆಸುವ ಪ್ರಜೆಗಳನ್ನು, ಶಿಕ್ಷಕರನ್ನು ರೂಪಿಸುವ ಶಿಕ್ಷಕರನ್ನೇ ತಯಾರು ಮಾಡುವ ಮಹತ್ವದ ಮೌಲ್ಯಯುತವಾದ ಕೆಲಸವನ್ನು ಮಾಡುವ ನಾವೇ ಇಂಥ ಕೆಲಸಮಾಡುವುದು ಸರಿಯಲ್ಲ. ಆದ್ದರಿಂದ ಈ ನೆಪದಲ್ಲಿ ನಾನು ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಿತಿ ಹಾಗೂ ಅವರ ವೃತ್ತಿಯ ಮುಂದಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸಲು ಇರುವ ಸಾಧ್ಯತೆಗಳ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಲು ಇಚ್ಚಿಸುತ್ತೇನೆ.
ಶಿಕ್ಷಕರ ಈಗಿನ ಸ್ಥಿತಿ 
ಗುರು ಶಿಷ್ಯ ಪರಂಪರೆಗೆ ಹೆಸರಾದ ಈ ಭವ್ಯ ಭಾರತದಲ್ಲಿ  ಶಿಕ್ಷಕರ ಇಂದಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. 
ಇಂದಿನ ಸಮಾಜದಲ್ಲಿ ಶಿಕ್ಷಕರಿಗೆ ಶಿಷ್ಯರಿಂದಾಗಲಿ ಅಥವಾ ಅವರ ಪೋಷಕರಿಂದಾಗಲಿ ಯಾವುದೇ ದೊಡ್ಡ ಗೌರವವನ್ನು ಪಡೆಯುವ ಸಂದರ್ಭಗಳಿಲ್ಲ.
ಶಿಕ್ಷಕರನ್ನು ಕಾರಣಕ್ಕೆ ಅತ್ಯಂತ ಗುಮಾನಿಯಿಂದ ತಾತ್ಸಾರದಿಂದ ಕಾಣುವ ಸಂದರ್ಭಗಳೇ ಹೆಚ್ಚಾಗಿವೆ. 
ಇದಕ್ಕೆ ಅನೇಕರು ಹೇಳುವಂತೆ ಕಾರಣಗಳು ಹೀಗಿವೆ: 
ಶೇಕಡವಾರು ಶಿಕ್ಷಕರು ಇಂದು ಸಂಯಮ, ಸಹನೆ, ಆದರ್ಶ, ಪ್ರೀತಿ, ವಾತ್ಸಲ್ಯ ಎಂಬ ಬಹುಮುಖ್ಯ ಮೌಲ್ಯಗಳನ್ನು ಮರೆತಿರುವುದಂತೂ ಅಪ್ಪಟ ಸತ್ಯ. 
ಶಿಕ್ಷಕರು ಪಾಠ ಹೇಳುವ ಕೆಲಸಕ್ಕಿಂತ ಬಿಸಿಯೂಟ ನಿರ್ವಹಣೆ, ಜನಗಣತಿ ಕಾರ್ಯ, ಮತದಾರರಪಟ್ಟಿ ಪರಿಷ್ಕರಣೆ, ವರದಿ ತಯಾರಿಸುವುದು, ಕಚೇರಿ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿರುವವರಗೆ ಮಾತ್ರ ನಮ್ಮ ಜವಾಬ್ದಾರಿ ಅಲ್ಲಿಂದ ಹೊರಗೆ ಹೋದರೆ ನಮಗೂ ಅವರಿಗೂ ಏನೂ ಸಂಬಂಧವಿಲ್ಲ ಎಂಬ ಭಾವನೆ. ಶಾಲೆಯ ಒಳಗಾದರೂ ಪಾಠ ವಿಷಯಗಳಿಗೆ ಮಾತ್ರ ವಿದ್ಯಾರ್ಥಿ ಸಂಬಂಧ ಎಂಬ ಮನೋಭಾವ
ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗದಿರುವುದು, ಶಾಲೆಯಲ್ಲಿದ್ದರೂ ಸರಿಯಾದ ಕ್ರಮದಲ್ಲಿ ತರಗತಿಗಳನ್ನು ತೆಗೆದು ಕೊಳ್ಳದಿರುವುದು
ಅವುಗಳ ಜಾಗದಲ್ಲಿ, ರಾಜಕಾರಣ, ಜಾತಿ ಪ್ರೀತಿ ಬೆಳೆಸಿಕೊಳ್ಳುವುದು
ಹಿರಿಯ ಅಧಿಕಾರಿಗಳ ಜೊತೆ ನಂಟು, ಒಳಗೊಳಗೇ ಏನೋ ಒಡಂಬಡಿಕೆ, 
ಅಸೋಸಿಯೇಷನ್ಗಳ ಹೆಸರಲ್ಲಿ ಓಡಾಟ, ಪಾಠ ಮಾಡುವುದಕ್ಕಿಂತ ಶಿಕ್ಷಕರ ಸಮಸ್ಯೆಗಳ ಹೈಲೈಟ್ ಮಾಡೋದು  
ಸರಕಾರ ಸಂಬಳ ಕೊಡುವುದೇ ಪಾಠ ಮಾಡಲು ಎಂಬುದನ್ನೇ ಮರೆತು, ತಮ್ಮ ಸಂಬಳ ಸಾರಿಗೆ ಬಡ್ತಿಗಳ ವಿಷಯಕ್ಕೆ ತಿಂಗಳಲ್ಲಿ ಹದಿನಾಲ್ಕು ದಿವಸವೂ ಬಿಎಓ ಆಫೀಸುಗಳಿಗೆ ಅಲೆದಾಟ
ಈಗೀಗಂತೂ, ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಯಲ್ಲಿ ತಮಗೂ ಪಾಲಿರಬೇಕೆಂಬ ಉದ್ದೇಶದಿಂದ ನಾನಾ ರೀತಿಯ ತಂತ್ರಗಳನ್ನು ಮಾಡುವುದು
ಆಯಾ ದಿನದ ಪಾಠ ಮಾಡುವ ಕೆಲಸವನ್ನು ಹೆಚ್ಚು ಶ್ರಮವಿಲ್ಲದೇ ಮಾಡಿ ಮುಗಿಸುವುದಷ್ಟೇ ತಮ್ಮ ಶಿಕ್ಷಕ ವೃತ್ತಿಯ ಸೀಮಿತ ಎಂದು ಅರಿತುಕೊಂಡಂತಿದೆ. 
ಮಕ್ಕಳು ಗಲಾಟೆ ಮಾಡುತ್ತಿದ್ದರೆ ಪಾಠ ಮಾಡಲು ಹೇಗಾಗುತ್ತದೆ. ಅದಕ್ಕಾಗಿ ಈ ಶಿಕ್ಷಕರು ಶಿಕ್ಷಿಸಲು ಮುಂದಾಗುತ್ತಾರೆ. ಸಿಟ್ಟಿನ ಭರದಲ್ಲಿ ತಮ್ಮ ದಂಡನೆಯ ಸ್ವರೂಪ ಹೇಗಿರುತ್ತದೆ ಎಂದರೆ ಅರಿಯಲಾಗದಷ್ಟು ವಿವೇಚನೆ ಕಳಕೊಂಡು ಬಿಡುತ್ತಾರೆ.
ಕಲಿಯಲು ಶಾಲೆಗಳಿಗೆ ಬಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಅನೇಕ ಶಿಕ್ಷಕರ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ
ಶಿಕ್ಷಕರ ಮುಂದಿರುವ ಸವಾಲುಗಳು
ಶಿಕ್ಷಕ ವೃತ್ತಿಯ ಪ್ರಮಾಣಿಕತೆ ಮತ್ತು ಗೌರವಗಳು ಇಂದು ಪಾತಾಳಕ್ಕೆ ಕುಸಿದಿದ್ದು ಅವುಗಳನ್ನು ಶಾಪಮುಕ್ತಗೊಳಿಸಿ ಮೇಲೆತ್ತಬೇಕಿದೆ. ಅದಕ್ಕಾಗಿ ಶಿಕ್ಷಕರು ಮಾಡಬೇಕಿರುವ ಅಗತ್ಯವಾದ ಕಾರ್ಯಗಳು
ಮೊದಲಿಗೆ ನಮ್ಮ ವೃತ್ತಿಗಿರುವ ಪ್ರಾಮುಖ್ಯತೆಯನ್ನು ಮನಗಾಣಬೇಕಿದೆ. ಅಷ್ಟೇ ಅಲ್ಲ ಅದನ್ನು ತಮ್ಮ ಕಾರ್ಯಗಳ ಮೂಲಕ ಪ್ರಕಟಮಾಡಬೇಕಿದೆ.
ನಾವು ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿದ್ದೇವೆ. ಶಿಕ್ಷಕರೇ ಅಪ್ರಸ್ತುತ ಎಂಬ ವಾತವರಣ ನಿರ್ಮಾಣವಾಗುತ್ತಿದೆ. ಎಜುಸ್ಯಾಟ್ ಮೂಲಕ ಸಿಗುತ್ತಿರುವ ಪಾಠಗಳು, ಅಂತರ್ಜಾಲದಲ್ಲಿ ಯಾವುದೇ ವಿಷಯದ ಬಗ್ಗೆ ಅನಂತವಾದ ಮಾಹಿತಿ ಸಿಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಕಾಲಕ್ಕೆ ಅನುಗುಣವಾದ ವಿಷಯಜ್ಞಾನ ಹಾಗೂ ಸಂವಹನ ತಂತ್ರ, ಕಲಿಕೆಯ ಮಾದರಿಗಳನ್ನು ಹುಡುಕಿಕೊಳ್ಳಬೇಕಿದೆ. ಬೆಳಗಿನ ವಿಷಯ ಸಂಜೆಗೆ ಹಳತೆನಿಸುವ ಈ ಕಾಲದಲ್ಲಿ ದಿನದಿನವೂ ಹೊಸಹೊಸದನ್ನು ಕಲಿತರೆ ಮಾತ್ರವೇ ನಮ್ಮ ಅಸ್ತಿತ್ವ ಉಳಿಯುತ್ತದೆ. ಇಲ್ಲವಾದರೆ ಎಲ್ಲರಿಂದಲೂ ಛೀ ಥೂ ಎನಿಸಿಕೊಂಡು ಸಂಬಳಕ್ಕೆ ಮಾತ್ರ ದುಡಿಯುವ ನಿಸ್ತೇಜ ಕಾರ್ಮಿಕರಾಗುತ್ತೇವೆ.

೧. ಕಥೆ : ಶಿಕ್ಷಕರಿಗೆ ಇರುವ ಅರ್ಹತೆಯ ಬಗ್ಗೆ ಒಂದು ಘಟನೆ : ಒಂದು ಹೈಸ್ಕೂಲ್ ನಲ್ಲಿ ಒಬ್ಬ ಇಂಗ್ಲೀಷ್ ಶಿಕ್ಷಕಿ 
ತನ್ನ ಒಂದು ತರಗತಿಯಲ್ಲಿ ಸ್ವಂತ ಕವನ ಬರೆಯುವ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಆ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕವನಗಳನ್ನು ಬರೆದು ತರುತ್ತಾರೆ. ಅವುಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕಿ ಅವುಗಳಿಗೆ ಎ,ಬಿ,ಸಿ ಎಂದು ಗ್ರೇಡ್ ಗಳನ್ನು ನೀಡಿ ಮರುದಿನ ತರಗತಿಯಲ್ಲಿ ಹಂಚುತ್ತಾರೆ. ಅದರಲ್ಲಿ ಒಬ್ಬ ಹುಡುಗನ ಕವನದ ಪ್ರತಿ ಇರುವುದಿಲ್ಲ. ಅದಕ್ಕಾಗಿ ಎಲ್ಲರಿಗೂ ಪ್ರತಿಗಳನ್ನು ನೀಡಿಯಾದ ಮೇಲೆ ನನ್ನ ಪ್ರತಿ ಇಲ್ಲವೆಂದು ಕೇಳುತ್ತಾನೆ. ಶಿಕ್ಷಕಿ ವಿಪರೀತ ಸಿಟ್ಟು ಬಂದು ಹುಡಗನ್ನು ಬಾಯಿಗೆ ಬಂದಂತೆ ಬಯ್ಯುತ್ತಾಳೆ. ಅವರಿಗೆ ಇಷ್ಟೊಂದು ಸಿಟ್ಟು ಬರಲು ಕಾರಣ ಆ ಹುಡುಗ ಬೇರೆ ಯಾರೋ ಪ್ರಸಿದ್ಧ ಕವಿಯ ಕವನವನ್ನು ನಕಲುಮಾಡಿ ತಂದಿದ್ದಾನೆ. ಅವನೊಬ್ಬ ವಂಚಕ ಎಂಬ ಅವರ ತಿಳುವಳಿಕೆ. ಆದರೆ ಆ ಹುಡುಗ ನಿಜವಾಗಿ ತಾನೆ ಬರೆದಿದ್ದ. ಇದನ್ನು ತನ್ನ ಶಿಕ್ಷಕಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ. ಆದರೆ ಇದರಿಂದ ಶಿಕ್ಷಕಿಗೆ ಕೋಪ ಇನ್ನಷ್ಟು ಜಾಸ್ತಿಯಾಯಿತು. ಹುಡುಗನಿಗೆ ಇದರಿಂದ ತುಂಬಾ ಬೇಸರವಾಯಿತು. ಅಂದಿನಿಂದ ಆ ಶಿಕ್ಷಕಿಯ ಬಗ್ಗೆ ಒಂದು ರೀತಿಯ ಅಸಹನೆಯನ್ನು ಬೆಳೆಸಿಕೊಂಡ. ಈ ಅಸಹನೆ ಅವನು ಆ ಶಾಲೆಯನ್ನು ಬಿಟ್ಟ ನಂತರವೂ ಮುಂದುವರೆಯಿತು. ಯಾರಾದರೂ ಆ ಶಿಕ್ಷಕಿಯ ಹೆಸರನ್ನು ಹೇಳಿದರೆ ಸಾಕು ಅವನಿಗೆ ಕೋಪಬರುತ್ತಿತ್ತು. ಶಿಕ್ಷಕಿಯನ್ನು ಬಯ್ಯುತ್ತಿದ್ದ. ಮುಂದೆ ಆ ಹುಡುಗ ಜಗತ್ಪ್ರಸಿದ್ದ ಸಾಹಿತಿಯಾದ ಆತನ ಕೀರ್ತಿ ಎಷ್ಟಿತ್ತು ಎಂದರೆ ಅವನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಕರೆಯುವುದಾದರೆ ಮೂರು ತಿಂಗಳು ಮುಂಚಿತವಾಗಿ ತಿಳಿಸಬೇಕಿತ್ತು. ಈ ಸಂದರ್ಭದಲ್ಲೂ ತನ್ನ ಶಿಕ್ಷಕಿಯನ್ನು ನೆನಪಿಸಿಕೊಂಡರೆ ಅವನಿಗೆ ಸಿಟ್ಟು ಬರುತ್ತಿತ್ತು. ಇತ್ತ ಶಿಕ್ಷಕಿ ತನ್ನ ವೃತ್ತಿಯನ್ನು ಮಾಡುತ್ತಿದ್ದಾಗಲೆ ಗುಣಪಡಿಸಲಾರದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾಳೆ. ಆಸ್ಪತ್ರೆಗೆ ಸೇರುತ್ತಾಳೆ. ಹೀಗೆ ಇರುವಾಗ ಒಂದು ದಿನ ತನ್ನ ಹಳೆಯ ಆ ಶಿಷ್ಯನನ್ನು ನೋಡಬೇಕೆಂದು ಆಪೇಕ್ಷಿಸುತ್ತಾಳೆ. ಆಕೆಯ ಪತಿ ಹೇಗೋ ಹರಸಾಹಸ ಮಾಡಿ ಆತನ ಪೋನ್ ನಂಬರ್ ಪಡೆದು ಪೋನ್ ಮಾಡಿ ನಿಮ್ಮ ಇಂಥ ಶಿಕ್ಷಕಿಯ ಪತಿ ನಾನು ನಿಮ್ಮ ಶಿಕ್ಷಕಿಗೆ ಇಂಥ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾಳೆ. ಈಗ ನಿಮ್ಮನ್ನು ನೋಡಬೇಕೆಂದು ಬಯಸುತ್ತಿದ್ದಾಳೆ. ನೀವು ಬರಲು ಆಗುತ್ತದೆಯೇ ಎಂದು ಕೇಳುತ್ತಾನೆ. ತನ್ನ ಹಳೆಯ ಶಿಕ್ಷಕಿಯ ಹೆಸರು ಕೇಳಿದ ತಕ್ಷಣ ಅವನು ಸಿಟ್ಟಿಗೇಳುತ್ತಾನೆ. ಅಷ್ಟೇ ಅಲ್ಲ ನಾನು ಬರಲಾಗುವುದಿಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಡುತ್ತಾನೆ. ಪತಿ ಎಷ್ಟು ಪ್ರಯತ್ನಿಸಿದರೂ ಅವನು ಒಪ್ಪುವುದಿಲ್ಲ. ಅನಂತರ ಕೆಲವು ದಿನಗಳಾದ ಮೇಲೆ ಮತ್ತೊಮ್ಮೆ ಆತನಿಗೆ ಪೋನ್ ಮಾಡಿ ನಿಮ್ಮ ಶಿಕ್ಷಕಿ ನಿಮ್ಮನ್ನು ನೋಡಲೇ ಬೇಕೆಂದು ಹಟ ಮಾಡುತ್ತಿದ್ದಾಳೆ. ಅವಳು ಇನ್ನು ಬಹಳ ಕಾಲ ಬದುಕಲಾರಳು ಹಾಗಾಗಿ ತಾವು ದೊಡ್ಡ ಮನಸ್ಸು ಮಾಡಿ ಬರಬೇಕೆಂದು ವಿನಮ್ರವಾಗಿ ಬೇಡಿಕೊಳ್ಳುತ್ತಾನೆ. ಕೊನೆಗೆ ಶಿಕ್ಷಕಿಯ ಕೊನೆಯ ದಿನಗಳು ಎನ್ನುವ ಕಾರಣಕ್ಕೆ ಬರಲು ಒಪ್ಪುತ್ತಾನೆ. ಒಂದಿ ದಿನ ಶಿಕ್ಷಕಿಯನ್ನು ಸೇರಿಸಲಾಗಿದ್ದ ಆಸ್ಪತ್ರೆಗೆ ಬರುತ್ತಾನೆ. ಶಿಕ್ಷಕಿ ಸಂಪೂರ್ಣ ಸವೆದು ಹೋಗಿದ್ದಾಳೆ. ನೋಡಿ ಇವನಿಗೆ ಬಹಳ ಬೇಸರವಾಗುತ್ತದೆ. ಮಾತುನಾಡುವ ಸ್ಥಿತಿಯಲ್ಲಿ ಇಲ್ಲದ ಅವಳು ಹಾಸಿಗೆಯಲ್ಲಿ ಮಲಗಿಕೊಂಡೆ ಇವನನ್ನೇ ನೋಡುತ್ತಿದ್ದಾಳೆ. ಕೊನೆಗೆ  ತನ್ನ ಪತಿಯನ್ನು ಕರೆದು ಅಲ್ಲಿನ ಔಷಧಿ ಇಡುವ ಕಪಾಟಿನಲ್ಲಿ ಒಂದು ಪೇಪರ್ ಇದೆ ಕೊಡಿ ಎಂದು ಕೇಳುತ್ತಾಳೆ. ಪತಿ ತಂದು ಕೊಡುತ್ತಾನೆ. ಆಗ ಆ ಪತ್ರಿಕೆಯನ್ನು ಅವನ ಕೈಗೆ ಕೊಡುತ್ತಾಳೆ. ಅದನ್ನು ನೋಡಿದರೆ ಆ ದಿನ ಅವನೇ ಬರೆದುಕೊಟ್ಟಿದ್ದ ಕವನದ ಪ್ರತಿ. ಅದರಲ್ಲಿ ಮೌಲ್ಯಮಾಪನ ಮಾಡಿ ಅದಕ್ಕೆ ಎ+ ಗ್ರೇಡ್ ನೀಡಲಾಗಿತ್ತು. ಅದನ್ನು ನೋಡಿ ಅವನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ತಲೆ ಎತ್ತಿ ನೋಡಿದರೆ ಶಿಕ್ಷಕಿ ತಾನು ಅಂದು ಮಾಡಿದ ಅಪರಾಧಕ್ಕೆ ಪ್ರಾಯಶ್ಚಿತ್ತ ಪಡುವಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. - ಈ ಕಥೆಯ ಮೂಲಕ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿಯುತ್ತದೆ. ನಾವು ಬೆಳೆಯುವ ಸಸಿಗಳನ್ನು ಪೋಷಿಸುವವರು. ಆ ಸಂದರ್ಭಕ್ಕೆ ನಾವು ಯಾವುದೇ ಒಂದು ಸಣ್ಣ ತಪ್ಪು ಮಾಡಿದರೂ ಅದು ಬೆಳೆಯುವ ಪೈರಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸಮಯ ಬಂದರೆ ಆ ಸಸಿ ಅಲ್ಲಿಯೇ ಮರಟಿ ಹೋಗಬಹುದು. ಇಂಥ ಮಹತ್ವದ ಕೆಲಸ ನಮ್ಮದು. ನಿಜವಾದ ಶಿಕ್ಷಕರಾದರೆ ನಾವು ನಮ್ಮ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವನ್ನು ಯಾವತ್ತಾದರೂ ಒಂದು ದಿನ ಒಪ್ಪಿಕೊಳ್ಳುತ್ತೇವೆ. ನಿಜವಾದ  ವಿದ್ಯಾರ್ಥಿಯಾದರೆ ಸಾವಿನ ಸಂದರ್ಭದಲ್ಲಾದರೂ ತನ್ನನ್ನು ನೋಡುವುದರಿಂದ ಅವರ ಮನಸ್ಸು ನೆಮ್ಮದಿ ಪಡೆಯುತ್ತದೆ ಎಂಬ ಕಾರಣಕ್ಕೆ ಶಿಕ್ಷಕರು ಮಾಡಿರುವ ಅಪರಾಧವನ್ನು ಕ್ಷಮಿಸುತ್ತಾನೆ.
***************************************************************************
  
+ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ದಿನಾಂಕ ೦೫.೦೯.೨೦೧೪ ರಂದು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾಡಿದ ಭಾಷಣ

ಕರ್ನಾಟಕ ಅಂಬೇಡ್ಕರ್ : ಪ್ರೊ. ಬಿ. ಕೃಷ್ಣಪ್ಪ


                                                                                                                              -ಡಾ.ಎಸ್.ಎಂ.ಮುತ್ತಯ್ಯ
                                                                                    -೧-
ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿರುವ ವೇದಿಕೆಯ ಮೇಲಿರುವ ಹಾಗೂ ನಮ್ಮ ಮುಂದೆ ಆಸೀನರಾಗಿರುವ ಎಲ್ಲಾ ಬಂಧುಗಳೇ ತಮಗೆಲ್ಲರಿಗೂ ಪ್ರೀತಿ ಪೂರ್ವಕ ನಮಸ್ಕಾರಗಳು.
ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುವುದಕ್ಕೆ ನನಗೆ ಅತ್ಯಂತ ಸಂತಸವೆನಿಸುತ್ತದೆ. ಇದು ಎಲ್ಲಾ ಸಮಾರಂಭಗಳಲ್ಲಿ ಭಾಷಣಕಾರರು ಹೇಳುವಂತೆ ಬರೀ ಉಪಚಾರಕ್ಕೆ ಹೇಳಿದ ಮಾತಲ್ಲ. ಇದಕ್ಕೆ ಸ್ಪಷ್ಟವಾದ ಎರಡು ಕಾರಣಗಳಿವೆ : 
ಮೊದಲನೆಯದಾಗಿ ಈ ಸಮಾರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದೇವೆ. ಪ್ರೊ.ಬಿಕೆ ಅವರು ತಮ್ಮ ಅಸ್ಸೀಮ ಹೋರಾಟವನ್ನು ಆರಂಭ ಮಾಡಿದ್ದು ಈ ಭದ್ರಾವತಿಯಿಂದಲೇ. ಈ ನಗರ ಇಲ್ಲಿರುವ ವಿ.ಐ.ಎಸ್.ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳಿಂದ ಎಷ್ಟು ಪ್ರಸಿದ್ಧಿಯೋ ಕೃಷ್ಣಪ್ಪನವರು  ’ದಲಿತ ಸಂಘರ್ಷ ಸಮಿತಿ’ ಯನ್ನು ಮೊದಲು ಕಟ್ಟಿದ್ದು ಈ ಊರಿಂದಲೇ ಎಂಬುದರಿಂದಲೂ ಅಷ್ಟೇ ಪ್ರಸಿದ್ಧಿಪಡೆದಿದೆ. ಇಂಥ ಚಾರಿತ್ರಿಕ ಮಹತ್ವವಿರುವ ಈ ನೆಲದಲ್ಲಿ ನಿಂತು ಕೃಷ್ಣಪ್ಪನವರ ವಿಚಾರ ಧಾರೆಗಳನ್ನು ಮೆಲಕು ಹಾಕುವುದು ಮಾತನಾಡುವವರಿಗೆ ಒಂದು ರೀತಯಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. 
ಇನ್ನೂ ಎರಡನೆಯ ಕಾರಣವೆಂದರೆ ಈ ದಿನದ ಸಮಾರಂಭದಲ್ಲಿ ದಲಿತ ನೌಕರರ ಜಾಗೃತಿ ದಿನವೆಂದು ಕರೆದಿರುವುದು. ಈ ಹೊತ್ತಿನ ದಲಿತರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಮುಖ್ಯವಾದುದು ಎಂದರೆ ತಮ್ಮ ಸಮುದಾಯಗಳಲ್ಲಿ ಜಾಗೃತ ಪ್ರಜ್ಞೆ ಇಲ್ಲವಾಗಿರುವುದು. ಮೇಲ್ವರ್ಗದ ಸಮುದಾಯಗಳು ದಲಿತ ಸಮುದಾಯದವರನ್ನು ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕಿಂತ ದೊಡ್ಡ ಸತ್ಯವೇನೆಂದರೆ ಶೋಷಣೆ ಮಾಡುತ್ತಿದ್ದಾರೆ ಎಂಬುದೆ ದಲಿತರಿಗೆ ತಿಳಿಯದಂತಾಗಿರುವುದು. ಮೇಲ್ವರ್ಗದವರು ನಾವು ಶೇಷ್ಟ್ರರೆಂದು ಕರೆದುಕೊಂಡು ನೀವು ದಲಿತರು ಕನಿಷ್ಟವೆಂದು ಹೇಳಿದರೆ ಅದನ್ನು ಪ್ರಶ್ನಿಸದೇ ವಿಧೇಯತೆಯಿಂದ ಒಪ್ಪಿಕೊಂಡಿರುವುದು. ಇದೆಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ದುರ್ಬಲ ವರ್ಗಗಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದು ಉದ್ಧಾರವಾದ ದಲಿತರು ತಮ್ಮದೇ ಗುಂಪಿನ ದಲಿತರನ್ನು ಶೋಷಿಸುತ್ತಿರುವುದು. ಹಾಗೆಯೇ ದಲಿತರನ್ನು ಶೋಷಿಸುವವರಗೆ ಬಂಬಲವಾಗಿ ನಿಲ್ಲಿತ್ತಿದ್ದಾರೆ. ಹಾಗೆಯೇ ನಮ್ಮ ದಲಿತ ಸಮುದಾಯಗಳ ಯುವ ಪೀಳಿಗೆಯ ಜನ ದಲಿತರಾಗಿ ಹುಟ್ಟಿ ದಲಿತರಾಗಿರುವ ಕಾರಣಕ್ಕೆ ಸಿಗುವ ಎಲ್ಲಾ ಅವಮಾನಗಳನ್ನು ಉಂಡು, ಸಿಗುವ ಸೌಲಭ್ಯಗಳನ್ನು ಅನುಭವಿಸಿಯೂ  ಕೂಡ ನಾವು ದಲಿತರೆಂದು ಧೈರ‍್ಯದಿಂದ ಹೇಳಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಈ ಎಲ್ಲದಕ್ಕೂ ಇರಬಹುದಾದ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಸರಿಯಾದ ಜಾಗೃತಿ ಇಲ್ಲದಿರುವದೇ ಕಾರಣ. ಈ ಸಂದರ್ಭದಲ್ಲಿ ನಮ್ಮೊಳಗೆ ಗೈರು ಹಾಜರಿಯಾಗಿರುವ ಜಾಗೃತಿಯನ್ನು ಮೂಡಿಸಿಕೊಳ್ಳಬೇಕಾದುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ. ಇಂಥ ಅಗತ್ಯವನ್ನು ಮನಗಂಡು ಆ ಕುರಿತು ಚರ್ಚಿಸಲು,ಆತ್ಮಾವಲೋಕನ ಮಾಡಿಕೊಳ್ಳಲು ಸೇರಿರುವ ಈ ಸಭೆಯನ್ನು ಕುರಿತು ಮಾತನಾಡುವುದೆಂದರೆ ಮಾತಾಡುವವರಿಗೆ ಖಂಡಿತಾ ಅತ್ಯಂತ ಖುಷಿಯ ಸಂಗತಿ. ಯಾರೂ ಶಾಲೆಗೆ ಬರುತ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಂದಾಗ ಶಿಕ್ಷರಲ್ಲಿ ಉಂಟಾಗುವ ಸಂತಸದ ಭಾವ ನನ್ನಲ್ಲಿ ಮೂಡುತ್ತಿದೆ.
ಈ ದಿನ ನಾನು ಮಾತನಾಡಬೇಕಿಂದಿರುವ ಮಾತುಗಳನ್ನು ಪ್ರಮುಖವಾದ ಎರಡು ಭಾಗಗಳಾಗಿ ವಿಂಗಡಿಸಿ ಮಾತನಾಡಲು ಬಯಸುತ್ತೇನೆ. ಮೊದಲನೆಯದು ಪ್ರೊ.ಕೃಷ್ಣಪ್ಪ ಅವರ ಹೋರಾಟದ ಬದುಕಿನ ನಡೆ ಮತ್ತು ನುಡಿಯನ್ನು ಕುರಿತ ಭಾಗ. ಎರಡನೆಯದು ಇಂದಿನ ದಲಿತರ ಪ್ರಮುಖ ಸಮಸ್ಯೆಗಳು ಮತ್ತು ಅದಕ್ಕೆ ನಾವು ತೋರಬೇಕಾದ ಪ್ರತಿಕ್ರಿಯೆಗಳು
-೨-
ಪ್ರೊ. ಕೃಷ್ಣಪ್ಪ ಅವರ ಬದುಕು  ಇಂದಿನ ನಮ್ಮ ನಿಮ್ಮ ಬದುಕಿಗಿಂತ ತುಂಬಾ ದುಸ್ಥಿತಿಯಲ್ಲಿತ್ತು. ಅವರ ದುಸ್ಥಿತಿಯ ಒಂದರೆಡು ವಿಷಯಗಳನ್ನು ಪ್ರಸ್ತಾಪಿಸುವುದಾದರೆ : ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಮತ್ತು ಆರ್ಥಿಕ ಬಲವಿರಲಿಲ್ಲ. ಮೂರು ಜನ ತಂಗಿಯರು ಹಾಗೂ ಮೂರು ಜನ ಸೋದರಿಯರ ಕೂಲಿ ಕುಟುಂಬದಲ್ಲಿ ಜೀವನ ನಡೆಸಿದವರು. ತಾವು ಬದುಕಿದ ಊರಲ್ಲಿದ್ದ ವಿಪರೀತ ಅಸ್ಪೃಶತಾವಾದಿಗಳ ನಡುವೆ ಬದುಕಿದವರು. ಮೆಡಿಕಲ್ ಓದಲು ಮನಸ್ಸಿದ್ದರೂ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹಿಂದೆ ಬಿದ್ದವರು. ದಲಿತ ಜನಾಂಗದಲ್ಲಿ ಹುಟ್ಟದ ಕಾರಣಕ್ಕೆ ತನ್ನ ಕೊನೆಗಾಲದವರೆಗೂ ಸಾಕಷ್ಟು ನೋವನ್ನುಂಡವರು. ಚಿತ್ರದುರ್ಗ ಜಿಲ್ಲೆಯ ಹರಿಹರದ ಬಸಪ್ಪ ಮತ್ತು ಚೌಡಮ್ಮನವರ ಹಿರಿಯ ಮಗನಾಗಿ ಪ್ರೊ.ಬಿ. ಕೃಷ್ಣಪ್ಪನವರು ೧೯೩೮, ಜೂನ್ ೯ ರಂದು ಜನಿಸಿದರು. ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿ ದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು. ಇಂಥ ಕಷ್ಟಕರವಾದ ಬದುಕನ್ನು ಸಾಗಿಸಿದ ಬಿಕೆ ಅವರು ಸಾಮಾನ್ಯರಂತೆ ತನಗೆ ಬಂದ ಬಾಳಿನ ಕರ್ಮವೆಂದು ಭಾವಿಸದ್ದರೆ ಈ ಹೊತ್ತು ನಾವೆಲ್ಲರು ಸೇರಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಶ್ರೀಯುತರು ಬಾಳಿನ ಪ್ರತೀ ನೋವಿನ ಸಂದರ್ಭದಲ್ಲೂ ತನ್ನ ನೋವನ್ನು ತನ್ನದು ಮಾತ್ರವೆಂದು ತಿಳಿಯದೇ ನನ್ನ ನೋವು ನನ್ನ ಸಮುದಾಯಗಳ ಎಲ್ಲರ ನೋವು ಎಂದು ಭಾವಿಸಿ, ಆ ನೋವಿಗೆ ಕಾರಣರಾದವರ ವಿರುದ್ಧ ಸಿಡಿದೆದ್ದು ಪ್ರತಿಭಟನಾ ಆಂದೋಳನಗಳನ್ನು ಕಟ್ಟಿ ಬೆಳೆಸಿದರು. ಇವರ ಅಂಥ ನೂರಾರು ಪ್ರಯತ್ನಗಳು ಕರ್ನಾಟಕದ ದಲಿತ ಸಮುದಾಯಗಳ ಬಿಡುಗಡೆಯ ಮಾರ್ಗಗಳಾದವು. ಕೃಷ್ಣಪ್ಪನವರು ದಲಿತರ ಆಶಾಕಿರಣವಾದರು.
ಇವರಿಗೆ ತನ್ನ ವಿದ್ಯಾಭ್ಯಾಸದ ಪ್ರತಿಫಲವಾಗಿ ಉತ್ತಮವಾದ ಸರ್ಕಾರಿ ನೌಕರಿಯೂ ಸಿಕ್ಕಿತೂ ಆಗ ಈಗಿನ ನಮ್ಮ ನೌಕರರಂತೆ ತಾನು ತನ್ನ ಕುಟುಂಬ ಸಂತೋಷದಿಂದ ಇದ್ದರೆ ಸಾಕು ಎಂದು ಯೊಚಿಸಬಹುದಿತ್ತು. ಆದರೆ ಕೃಷ್ಣಪ್ಪನವರು ಎಂದು ಹಾಗೆ ಯೋಚಿಸಲಿಲ್ಲ. ತನಗೆ ಬರಿತ್ತಿದ್ದ ಸಂಭಳದ ಬಹುಭಾಗವನ್ನು ತನ್ನ ಚಳವಳಿಯ ಓಡಾಟಗಳಿಗೆ ಬಳಸಿದರು. ಚಳುವಳಿಯ ನಾಯಕನಾಗಿ ಪಡೆದ ಜನಪ್ರಿಯತೆಯಿಂದ ದೊರೆಯುವ ರಾಜಕೀಯ ಲಾಭಗಳನ್ನು ಪಡೆದು ತಾನು ದೊಡ್ಡ ವಿಐಪಿಯಾಗಿ ಬೆಳೆಯಬಹುದಿತ್ತು. ಅದರ ಬದಲಿಗೆ ನಾನು ಮಾಡವುದೇನಿದ್ದರೂ ಅದು ಸಮುದಾಯದ ಉದ್ಧಾರಕ್ಕೆ ಮಾತ್ರ ಎಂಬ ಧೃಢವಾದ ನಂಬಿಕೆಯುಳ್ಳವರಾಗಿದ್ದರು. ಅಧಿಕಾರದ ಹಿಂದೆ ಬೀಳದೆ ತಮ್ಮ ಜನರ ಶ್ರೇಯೋಭಿವೃದ್ಧಿಯ ಬೆನ್ನು ಹತ್ತಿದವರು. ಪ್ರೊ.ಬಿ.ಕೆಯವರು ಶಾಸಕರೂ ಆಗಲಿಲ್ಲ, ಮಂತ್ರಿಯೂ ಆಗಲಿಲ್ಲ, ಅಧ್ಯಕ್ಷಗಿರಿಗಾಗಲೀ, ತಮ್ಮವರನ್ನು ಅಲ್ಲಿಗೆ ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶಸ್ತಿ ಪತ್ರಕ್ಕಾಗಲಿ, ಬೆಳೆಯುತ್ತಿರುವ ದಲಿತ ಶಕ್ತಿಯು ಬೃಹತ್ ರಾಜಕೀಯ ಶಕ್ತಿಯಾಗ ದಂತೆ ನಿಗ್ರಹಿಸುವ ತಂತ್ರದಲ್ಲಿ ಇಡಿಯಾದ ಸಂಘಟನೆಯನ್ನು ಚಿಂದಿ ಮಾಡಲು ವಸಾಹತು ಶಾಹಿಗಳು ನೀಡುವ ಎಂಜಲಿಗಾಗಲೀ ಲಾಬಿ ನಡೆಸಿದವರಲ್ಲ. ಸ್ವಾಭಿಮಾನದಿಂದ ಸಂಘರ್ಷ ಮಾಡಿದ್ದರು. ಸಂಘಟನೆಯ ವಿಷಯದಲ್ಲಿ ಸೈದ್ಧಾಂತಿಕವಾಗಿ ತುಂಬಾ ಗಂಭೀರತೆಯಿದ್ದ ವಿಚಾರಶೀಲ ವ್ಯಕ್ತಿಯಾಗಿದ್ದರು. ವೈಯಕ್ತಿಕವಾಗಿಯೂ ಅಪಾರ ಪ್ರಾಮಾಣಿಕರಾಗಿದ್ದರು. ಅವರು ಪರಿನಿಬ್ಬಾಣ ಹೊಂದಿದ ದಿನ ಅವರ ಮೃತ ಶರೀರವನ್ನು ದಫನ ಮಾಡುವುದಕ್ಕೂ ಅವರದ್ದೇ ಆದ ಸ್ವಂತ ಜಾಗ ಇರಲಿಲ್ಲ! ಹತ್ತಿರದ ಸ್ವಜಾತಿ ಬಾಂಧವರೊಬ್ಬರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಪ್ರತಿಯೊಬ್ಬರೂ ಬಿ.ಕೆ.ಯವರಿಂದ (ಸಂಘಟನೆಯಿಂದ) ವಿಚಾರದ ನೆರವು ಪಡೆದಿದ್ದಾರೆಯೇ ಹೊರತು ಅವರಿಗೆ ಸಂಘಟನೆ (ನಾವು) ಏನನ್ನೂ ನೀಡಲಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು.ಶೋಷಿತರ ಹಕ್ಕುಗಳಿ ಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ. ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.
ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆಸಿದ ಹೊರಾಟಗಳ ಸ್ವರೂಪವನ್ನು ಒಮ್ಮೆ ಚಾರಿತ್ರಿಕ ಅವಲೋಕನ ಮಾಡಿಕೊಳ್ಳಬೇಕು. ಶ್ರೀಯುತರು ನಡೆಸಿದ ಹೋರಾಟಗಳನ್ನು ಹೆಸರಿಸುವುದಾದರೆ:   
೧. ಕರ್ನಾಟಕದಲ್ಲಿ ಸಾರ್ವಜನಿಕ ಹೋಟೆಲ್‌ಗಳಲ್ಲಿ ದಲಿತರು ತೆಂಗಿನ ಚಿಪ್ಪಿನಲ್ಲಿ ಟೀ ಕಾಫಿ ಕುಡಿಯುವದರ ವಿರುದ್ಧ ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿ ಅದನ್ನು ನಿಷೇಧಿಸುವಂತೆ ಮಾಡಿದ್ದು ದಲಿತರ ಬದುಕಿನ ಮರ್ಯಾದೆ ಕಾಪಾಡಿದ ಕೀರ್ತಿ
೨. ದಲಿತರಿಗೆ ಯಾವುದೇ ಭೂ ಒಡೆತನವಿಲ್ಲದೆ ಕೇವಲ ಜೀತದಾಳಗಳಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರಿಗೂ ಭೂ ಒಡೆತನ ಬೇಕೆಂದು ಹೋರಾಟಗಳನ್ನು ಕಟ್ಟಿ ಸರ್ಕಾರಿ ಭೂಮಿಯನ್ನು ದಲಿತ ಭೂಹೀನರಿಗೆ ಹಂಚುವಂತೆ ಮಾಡಿದ್ದು ಕೃಷ್ಣಪ್ಪ ನವರ ಬಹುದೊಡ್ಡ ಸಾಧನೆ.


*ದಿನಾಂಕ ೦೬.೦೭.೨೦೧೪ ರಂದು ಭದ್ರಾವತಿಯಲ್ಲಿ ನಡೆದ ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ಮತ್ತು ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ನೀಡಿದ ಉಪನ್ಯಾಸ