Sunday 22 September 2013

ಜಾನಪದ ಪರಂಪರೆ : ಚರಿತ್ರೆಯ ನೆಲೆಗಳು

       ಇತಿಹಾಸವೆನ್ನುವುದು ಮಾನವನ ಒಟ್ಟಾರೆ ಜೀವನದ ಗತಿಸಿದ ಘಟನೆಗಳ ನೆನಪು. ಇದರಲ್ಲಿ ಮೌಖಿಕ ಇತಿಹಾಸ ಮತ್ತು ಬರಹದ ಇತಿಹಾಸ ಎಂದು ಎರಡು ಮಾರ್ಗಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೌಖಿಕ ಇತಿಹಾಸವೇ ಮೊದಲು ಎನ್ನಬಹುದು. ಮಾನವನು ಅಕ್ಷರ ಪೂರ್‍ವಕಾಲದಲ್ಲಿ ತನ್ನ ಜೀವನದ ಘಟನೆಗಳನ್ನು ತನ್ನ ಸ್ಮೃತಿಪಟಲದಲ್ಲಿ ದಾಖಲಿಸುತ್ತಿದ್ದ. ಅಕ್ಷರ ಯುಗ ಬಂದ ಅನಂತರ ಅಕ್ಷರ ಬಲ್ಲವರು ಆ ಘಟನೆಗಳನ್ನು ಅಕ್ಷರಗಳ ಮೂಲಕ ಹಿಡಿದಿಡುವುದನ್ನು ಪ್ರಾರಂಭಿಸಿದರು. ಅಕ್ಷರಗಳಿಂದ ಇತಿಹಾಸವನ್ನು ದಾಖಲು ಮಾಡುವಂತಹ ಸಂದರ್ಭದೊಳಗೇ ಮೌಖಿಕ ಇತಿಹಾಸವೂ ಕೂಡ ಬೆಳೆಯುತ್ತಿತ್ತು. ಬಹಳ ವಸ್ತುನಿಷ್ಠವಾಗಿ ಕಟ್ಟಲ್ಪಡುತ್ತಿದ್ದ ಇತಿಹಾಸ ಅಕ್ಷರ ಯುಗದ ಪ್ರಾರಂಭದಿಂದಾಗಿ ಪಕ್ಷಪಾತ ನಿಲುವುಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು. ಇದಕ್ಕೆ ಮತ್ತೊಂದು ಕಾರಣ ಇತಿಹಾಸ ರಚನೆ ಎನ್ನುವುದು ಪ್ರಭುತ್ವದ ವಶವಾಯಿತು. ಪ್ರಭುತ್ವದ ವಶವಾದ ಬರಹದ ಇತಿಹಾಸ ಪ್ರಭುತ್ವದ ಪರವಾಗಿ ವಾದಿಸುತ್ತಾ ಹೊರಟಿತು. ಇಲ್ಲಿ ಇತಿಹಾಸ ಮತ್ತು ನಿಷ್ಠತೆಯನ್ನು ಕಳೆದುಕೊಂಡು ಘಟನೆಯ ಯಾವುದೋ ಒಂದು ಮುಖವನ್ನು ಮಾತ್ರ ದಾಖಲಿಸುವಂತಾಯಿತು. ಈ ಇತಿಹಾಸದಿಂದ ಕಣ್ಮರೆಯಾದ ಅನೇಕ ಸಂಗತಿಗಳು ತುಂಬಾ ಮುಖ್ಯವಾದಂತಹವು. ಆದ್ದರಿಂದಲೇ ಆ ಸಂಗತಿಗಳು ಜನಪದರ ಮೌಖಿಕ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡವು. ಅಂಥ ಸಾಧ್ಯತೆಗಳನ್ನು ಕೆಲವು ಉದಾಹರಣೆಗಳ ಮೂಲಕ ಈ ಪ್ರಬಂಧದಲ್ಲಿ ಚರ್ಚಿಸಲಾಗಿದೆ.
ಪ್ರಸ್ತಾವನೆ
ಭಾರತದ ಚರಿತ್ರೆಯ ಚರ್ಚೆಯ ಸಂದರ್ಭಗಳಲ್ಲಿ ’ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ’ ಎಂಬ ಮಾತು ವಿದೇಶಿ ಹಾಗೂ ದೇಶಿ ವಿದ್ವಾಂಸರಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು. ಇದು ಬಹಳ ವರ್ಷಗಳ ಕಾಲ ಒಪ್ಪಿತ ಅಭಿಪ್ರಾಯವೇ ಆಗಿತ್ತು. ಸ್ವಲ್ಪ ಕಾಲಾನಂತರ ಈ ಅಭಿಪ್ರಾಯದ ಬಗ್ಗೆ ಜಿಜ್ಞಾಸೆ ಶುರುವಾಯಿತು. ಇದರಿಂದ ತಿಳಿದು ಬಂದ ಸಂಗತಿಯೆಂದರೆ ಬ್ರಿಟೀಷರು ಈ ದೇಶಕ್ಕೆ ಬಂದು ಆಳತೊಡಗಿದ ಮೇಲೆ ಅವರು ಈ ನಾಡಿನ ಇತಿಹಾಸ ಬರೆದರು. ಹಾಗೆ ಬರೆಯುವಾಗ ಅವರು ಲಿಖಿತ ಸಾಮಗ್ರಿಗಳನ್ನೇ ಆಧರಿಸಿಕೊಂಡರು. ಅದು ಪಶ್ಚಿಮದ ರೀತಿಯೂ ಆಗಿತ್ತು. ಎಷ್ಟೋ ಬಾರಿ ಲಿಖಿತ ಸಾಮಾಗ್ರಿಗಳು ಸಿಗದೇ ಇದ್ದಾಗ ಈ ನಾಡಿನ ಜನರಿಗೆ ಇತಿಹಾಸ ಪ್ರಜ್ಞೆ ಇಲ್ಲ್ಲ ಎಂದು ಅವರು ಗೊಣಗಿಕೊಂಡಿದ್ದಾರೆ.. ಅಂದರೆ ಬರೆಹದ ಚರಿತ್ರೆಯನ್ನು ಆರಂಭಿಸಿದ ವಿದೇಶಿ ವಿದ್ವಾಂಸರಿಗೆ ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಚರಿತ್ರೆ ಎಂದರೆ ಕೇವಲ ಬರೆಹದ ಚರಿತ್ರೆ ಮಾತ್ರ ಎಂಬುದಾಗಿ ನಂಬಲಾಗಿದೆ. ಈ ಮಾತಿನಲ್ಲಿ ಸತ್ಯಾಂಶ ಇಲ್ಲ  ಎಂಬುದನ್ನು  ಅರ್ಥಮಾಡಿಕೊಳ್ಳಲು ಬಹಳ ವರ್ಷ ಕಾಯಬೇಕಾಯಿತು. ಚರಿತ್ರೆಯ ಭಿನ್ನ ಆಕರಗಳನ್ನು ಶೋಧಿಸುವ ಸಂದರ್ಭದಲ್ಲಿ ಇದಕ್ಕೆ ಉತ್ತರ ಸಿಕ್ಕಿತು ಎನ್ನಬಹುದು. ಚರಿತ್ರೆ ಎನ್ನುವುದು ಕಟ್ಪಲ್ಪಡುವಂಥದ್ದು. ಹೀಗೆ ಕಟ್ಪಲ್ಪಡುವ ಚರಿತ್ರೆ ಒಂದು ಸತ್ಯವನ್ನು ಮಾತ್ರ ಹೇಳುತ್ತಿರುತ್ತದೆ. ಯಾವುದೇ ಒಂದು ಘಟನೆಗೆ ಒಂದೇ ಸತ್ಯ ಇರುವುದಿಲ್ಲ. ಇಂತಹ ಬಹುಮುಖ ಸತ್ಯಗಳನ್ನು ಹೊಂದಿರುವ ಘಟನೆಗಳನ್ನು ಕುರಿತ ಚರಿತ್ರೆಗಳು ಸಹ ಹಲವಾರು. ಈವರೆಗೂ ಸಿದ್ಧಗೊಂಡಿರುವ ಚರಿತ್ರೆಯನ್ನು ಪ್ರಮುಖವಾದ ಎರಡು ರೂಪಗಳಲ್ಲಿ ಗುರುತಿಸಬಹುದು. ಅವುಗಳಲ್ಲಿ ಒಂದು ಮನುಷ್ಯನ ನೆನಪಿನ ಶಕ್ತಿಯ ಮಿತಿಯಿಂದಾಗಿ ಹುಟ್ಟಿಕೊಂಡ ಬರಹದ ಚರಿತ್ರೆ. ಇನ್ನೊಂದು ಹಿಂದಿನಿಂದಲೂ ಚಾಲ್ತಿಯಲ್ಲಿದ್ದ  ಮೌಖಿಕ ಚರಿತ್ರೆ. 
ಮೌಖಿಕ ಚರಿತ್ರೆಯ ಪರಿಕಲ್ಪನೆ
ಇಂದು ಮನುಷ್ಯನ ನೆನಪಿನ ಶಕ್ತಿಯ ಮಿತಿಯಿಂದಾಗಿ ಹುಟ್ಟಿಕೊಂಡ ಬರಹದ ಚರಿತ್ರೆ (Wಡಿiಣಣeಟಿ ಊisಣoಡಿಥಿ) ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಮೌಖಿಕ ಚರಿತ್ರೆ (ಔಡಿಚಿಟ ಊisಣoಡಿಥಿ)ಯನ್ನು ಅನಧಿಕೃತ ಎನ್ನುವ ವಾತಾವರಣವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಗಿದೆ. ಬರೆಹದ ಇತಿಹಾಸವು ರಾಜರ ಹುಟ್ಟು, ಹೋರಾಟ, ಸಾವು ಎನ್ನುವ ಘಟನೆಗಳನ್ನು ಪ್ರಧಾನವಾಗಿಸಿಕೊಂಡು ಇವೇ ವಸ್ತುನಿಷ್ಠ ಎಂದು ಭಾವಿಸುತ್ತದೆ. ಸಮಾಜವನ್ನು ಮೇಲುಸ್ತರದ ಗ್ರಹಿಕೆಗಳಿಂದ ಪರಿಭಾವಿಸುತ್ತದೆ. ಇದು ಲಿಖಿತತೆಯನ್ನು ತನ್ನ ಮೂಲ ಬಂಡವಾಳವನ್ನಾಗಿಸಿಕೊಂಡಿದೆ. ಮೌಖಿಕಇತಿಹಾಸವು ಘಟನೆಗಳನ್ನು/ವಿವರಗಳನ್ನು  ಸಮಾಜದ ಕೆಳಸ್ತರದಿಂದ ಪರಿಭಾವಿಸುತ್ತಾ ರಾಜರದಷ್ಟೇ ಚರಿತ್ರೆ ಅಲ್ಲ; ಪ್ರತಿಯೊಂದು ವಸ್ತು, ವ್ಯಕ್ತಿಗೂ ಒಂದು ಇತಿಹಾಸವಿದೆ. ಪ್ರತಿಯೊಂದು ಘಟನೆಗೂ ಕಾರ್ಯಕಾರಣ ಸಂಬಂಧವಿದೆ ಎನ್ನುವ ತಿಳುವಳಿಕೆ ಇಲ್ಲಿ ಪ್ರಧಾನವಾಗಿರುತ್ತದೆ. ಈ ಆಲೋಚನಕ್ರಮ ಮೌಖಿಕ ತಿಳುವಳಿಕೆ, ದಾಖಲೆಗಳನ್ನು ತನ್ನ ಪ್ರಧಾನ ಆಕರ ಸಾಮಗ್ರಿಗಳಾಗಿಸುತ್ತದೆ. ಜೊತೆಗೆ ಯಾವುದೇ ಒಂದು ಘಟನೆಗೆ ಮುಕ್ತಾಯವಿಲ್ಲ ಎಂಬುದಾಗಿ ಭಾವಿಸುತ್ತದೆ. 
ಈವರೆಗೂ ನಾವು ಇತಿಹಾಸವೆಂದರೆ ಬರೆಹದ ಇತಿಹಾಸವೆಂಬ ಪರಿಮಿತಿಯ ಒಳಗಡೆ ಸುತ್ತಾಡಿದ್ದೇವೆ. ಆದ್ದರಿಂದಲೇ ನಮ್ಮ ಆಲೋಚನೆ ಏಕಮುಖೀಯವಾಗಿದೆ. ಮಾತಿನ ಇತಿಹಾಸದ ಬಗ್ಗೆಯೇ ಯೋಚಿಸಿರುವ ನಾವು ಮೌನಕ್ಕೂ ಒಂದು ಇತಿಹಾಸವಿದೆ ಎಂಬ ಸತ್ಯವನ್ನು ಗ್ರಹಿಸಲಾರದೇ ಹೋಗಿದ್ದೇವೆ. ’ಮೌನಂ ಸಮ್ಮತಿ ಲಕ್ಷಣಂ’ ಎನ್ನುವಾಗಲೇ ಮೌನವು ಅಸಮ್ಮತಿಯ, ವಿರೋಧದ, ಹತಾಶೆಯ ಲಕ್ಷಣವೂ ಏಕಾಗಿರಬಾರದು ಎಂಬುದನ್ನು ಅರಿಯದವರಾಗಿದ್ದೇವೆ. ರಾಜರದು, ಬರಹ ರೂಪದ್ದು ಇತಿಹಾಸ ಎಂದು ನಂಬಿದ್ದ ನಾವು, ಪ್ರತಿಯೊಬ್ಬನಿಗೂ ಒಂದು ಇತಿಹಾಸವಿದೆ. ಬರವಣಿಗೆಯ ಇತಿಹಾಸಕ್ಕಿಂತ ಭಿನ್ನವಾದ, ಬರವಣಿಗೆಯ ಇತಿಹಾಸದ ಕೊರತೆಗಳನ್ನು ತುಂಬಬಲ್ಲ ಸಾಮರ್ಥ್ಯವುಳ್ಳ ಮೌಖಿಕ ಇತಿಹಾಸ ನಮ್ಮ ನಡುವೆ ಇದೆ ಎಂಬ ಕಟು ವಾಸ್ತವವನ್ನು ತಿಳಿಯಬೇಕಾಗಿದೆ. ಇಂಥ ಪ್ರಧಾನ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವ ಹೊಸ ಆಲೋಚನ ಕ್ರಮವೇ ನವ ಇತಿಹಾಸ. ಇದರ ಆಲೋಚನಾ ಶಾಖೆಗಳು ಹಲವು. ಅವುಗಳಲ್ಲಿ ದೈಹಿಕ ಚರಿತ್ರೆ, ಮಹಿಳಾ ಚರಿತ್ರೆ, ಮೌಖಿಕ ಚರಿತ್ರೆ ಮೊದಲಾದವು ಮುಖ್ಯವಾಗುತ್ತವೆ. ಈ ಎಲ್ಲಾ ಶಾಖಾ ವಿಧಾನಗಳು ಕೆಳಸ್ತರದಿಂದಲೇ ಇಡೀ ಚರಿತ್ರೆಯನ್ನು ಕಟ್ಟಿಕೊಳ್ಳುವಲ್ಲಿ ಶ್ರಮಿಸುತ್ತವೆ. 
ಪ್ರಸ್ತುತ ಮೌಖಿಕ ಇತಿಹಾಸದ (ಔಡಿಚಿಟ ಊisಣoಡಿಥಿ) ಬಗ್ಗೆ ಸ್ವಲ್ಪ ವಿವರವಾದ ವಿಶ್ಲೇಷಣೆ ಮಾಡಬಹುದು. ಮೌಖಿಕ ಇತಿಹಾಸ ಎನ್ನುವುದು ಮೌಖಿಕ ಪರಂಪರೆಯ ಒಳಗೂ ಸೇರಿಕೊಂಡುಬಿಟ್ಟಿದೆ. ಇಂಥ ಇತಿಹಾಸವನ್ನು ಕಟ್ಟಿಕೊಳ್ಳುವಾಗ ಪ್ರಧಾನ ಆಕರ ಸಾಮಗ್ರಿ ಜಾನಪದ. ಜನಪದ ಸಾಹಿತ್ಯ, ಕಲೆ, ಭೌತಿಕ ವಸ್ತುಗಳೂ ಸೇರಿದಂತೆ ಒಟ್ಟಾರೆ ಜೀವನ ಕ್ರಮದ ವಿವಿಧ ಆಯಾಮಗಳು ಮೌಖಿಕ ಇತಿಹಾಸ ರಚನೆಗೆ ಸಹಕಾರಿ. ಈವರೆಗಿನ ಪ್ರಭುತ್ವದ ಕೂಸಾದ ಇತಿಹಾಸದ ಲೋಪಗಳನ್ನು ತಿದ್ದುತ್ತಾ, ಕೊರತೆಗಳನ್ನು ತುಂಬುತ್ತಾ ಮುನ್ನಡೆಯಲು ಪರಂಪರೆಯ ಮೌಖಿಕಾಭಿವ್ಯಕ್ತಿಗಳನ್ನು ಪರಿಗಣಿಸಬೇಕಾಗುತ್ತದೆ. ಇಲ್ಲಿಯವರೆಗಿನ ಪ್ರಧಾನ ಧಾರೆಯ ಇತಿಹಾಸಗಳು ರಾಜಕೀಯ ಚೌಕಟ್ಟನ್ನೇ ಪ್ರಧಾನವಾಗಿರಿಸಿಕೊಂಡು ಸಾಂಸ್ಕೃತಿಕ ಚೌಕಟ್ಟನ್ನು ನಿರ್ಲಕ್ಷಿಸಿವೆ. ಮತ್ತೊಂದು ಕಡೆ ಜಾನಪದ ದೃಷ್ಟಿ ಸಾಂಸ್ಕೃತಿಕವಾಗಿ ಹೆಚ್ಚು ಒಲವು ತೋರಿದರೂ ರಾಜಕೀಯದ ಕಡೆ ನಿರ್ಲಕ್ಷೆ ತೋರಿಲ್ಲ ಎಂಬುದು ಇಲ್ಲಿ ಮಹತ್ವದ ಸಂಗತಿ. 
ನಮ್ಮ ಪ್ರಧಾನಧಾರೆಯ ಇತಿಹಾಸಗಳು ಹೇಗೆ ತಪ್ಪುಗಳನ್ನು ಮಾಡುತ್ತಾ ಬಂದಿವೆ. ಅದಕ್ಕೆ ಮೌಖಿಕ ಪರಂಪರೆ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಕೆಲವು ಉದಾಹರಣೆ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ಬರಹದ ಇತಿಹಾಸಗಳು ’ರಾಜ ಪ್ರತ್ಯಕ್ಷ ದೇವತಾ’ ಎಂದರೆ, ಮೌಖಿಕ ಪರಂಪರೆ ’ರಾಜನ ಕಣ್ಣಿಗೆ ಬೀಳಬೇಡ’, ’ಅರಮನೆಯ ಮುಂದೆ ಹೋಗಬಾರದು’ ಎನ್ನುತ್ತದೆ. ಇವು ಒಂದು ರಾಜ ಪ್ರಭುತ್ವದ ಬಗ್ಗೆ ಅಭಿವ್ಯಕ್ತಿಗೊಂಡ ಎರಡು ಸತ್ಯಗಳು. ಇವುಗಳಲ್ಲಿ ನಾವು ’ರಾಜ ಪ್ರತ್ಯಕ್ಷ ದೇವತಾ’ ಎನ್ನುವ ಮಾತನ್ನು ಸ್ವೀಕರಿಸಿದ ಹಾಗೆ ಇನ್ನುಳಿದ ಮೌಖಿಕ ಪರಂಪರೆಯ ಎರಡು ಮಾತುಗಳನ್ನು ಸ್ವೀಕರಿಸಿಲ್ಲ ಎಂಬುದನ್ನು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾಗಿದೆ. ಇದೇ ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ಬಹು ಪ್ರಚಲಿತ ಹಾಗೂ ಜನಪ್ರಿಯ ’ಕಲ್ಗುಡ ಕಲ್ಲುರ್ಟಿ’ ಪಾಡ್ದನವನ್ನು ಗಮನಿಸಬಹುದು. ಗೊಮ್ಮಟೇಶ್ವರನ ಮೂರ್ತಿಯನ್ನು ಅತ್ಯಂತ ಅಭೂತಪೂರ್ವವಾಗಿ ಕೆತ್ತಿದವನು ಕಲ್ಕುಡ. ಇವನಿಗೆ ರಾಜ ಬಹುಮಾನ ನೀಡಿ ಗೌರವಿಸಿದ. ಈ ಅಂಶ ಗೊಮ್ಮಟೇಶ್ವರನ ಕುರಿತ ಶಾಸನ ಹಾಗೂ ಚರಿತ್ರೆಯ ಗ್ರಂಥಗಳಿಂದ ತಿಳಿದುಬರುತ್ತದೆ. ಆದರೆ ಪಾಡ್ದನ ಹೇಳುವಂತೆ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಿಕೊಂಡ ಹುಚ್ಚುದೊರೆ ತನಗಲ್ಲದೆ ಬೇರೆ ಯಾರಿಗೂ ಇಂಥ ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಬಲಗೈ ಹಾಗೂ ಬಲಗಾಲನ್ನು ಕತ್ತರಿಸುತ್ತಾನೆ. ಇಂತಹ ವೈರುಧ್ಯದ ಸಂಗತಿಗಳು ಹೇಗೆ ಏಕೆ ದಾಖಲಾದವು ಎಂಬುದರ ಬಗ್ಗೆ ಗಂಭೀರ ಅಧ್ಯಯನಗಳು, ಚಿಂತನ ಮಂಥನಗಳು ನಡೆಯಬೇಕಿದೆ. 
ಇಲ್ಲಿ ಗಮನಹರಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯೆಂದರೆ ಬರಹದ ಇತಿಹಾಸ ನಿರ್ಲಕ್ಷಿಸಿದ ಅನೇಕ ಐತಿಹಾಸಿಕ ಘಟನೆಗಳನ್ನು ಮೌಖಿಕ ಪರಂಪರೆ ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಾಗಾಗಿಯೇ ಪ್ರಧಾನ ಧಾರೆಯ ಇತಿಹಾಸ ಮದಕರಿನಾಯಕ, ಕಿತ್ತೂರು ರಾಣಿಚೆನ್ನಮ್ಮ, ಕೃಷ್ಣದೇವರಾಯ ಮೊದಲಾದ ದೊಡ್ಡವರೆಂದು ಕರೆದುಕೊಂಡವರ ವಿವರಗಳನ್ನು ಒದಗಿಸಿದರೆ, ಇಂತಹ ಹಿರಿಯರಿಗೆ ಬೆನ್ನೆಲುಬಾಗಿ ನಿಂತ ಗಾದ್ರಿಪಾಲನಾಯಕ, ಸಂಗೊಳ್ಳಿರಾಯಣ್ಣ, ಕುಮಾರರಾಮ, ಜುಂಜಪ್ಪನಂತಹ ಶೂರರನ್ನು ಕುರಿತು ಮೌಖಿಕ ಪರಂಪರೆ ಪರಿಚಯಿಸುತ್ತದೆ. ಈ ಎಲ್ಲಾ ಸಂಗತಿಗಳ ಬಗ್ಗೆ ಆಳವಾಗಿ ಚಿಂತಿಸುವ ಅಗತ್ಯ ತುಂಬಾ ಇದೆ. ಇಂತಹ ಆಲೋಚನೆಗೆ ಮೌಖಿಕ ಪರಂಪರೆಯ ಆಧಾರದಿಂದ ರೂಪುಗೊಂಡಿರುವ ಮೌಖಿಕ ಚರಿತ್ರೆಯ ಪರಿಕಲ್ಪನೆ ಸಾಕಷ್ಟು ಇಂಬುಕೊಡುತ್ತದೆ. ಇಂಥ ಮಹತ್ವಪೂರ್ಣವಾದ ಮೌಖಿಕ ಚರಿತ್ರೆಯನ್ನು ಕಟ್ಟಿಕೊಳ್ಳುವ ತುರ್ತು ಇದೆ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಕೆಲವು ವಿದ್ವಾಂಸರು ಮೌಖಿಕ ಚರಿತ್ರೆಯ ಸ್ವರೂಪಗಳನ್ನು ಗುರುತಿಸುವ ಪ್ರಯತ್ನಮಾಡಿದ್ದಾರೆ. ಅಂಥ ಒಂದೆರಡು ನಿದರ್ಶಗಳನ್ನು ಇಲ್ಲಿ ವಿವರಿಸಬಹುದು

ನಿದರ್ಶನ-೧ 
ಶರಣ ಚಳವಳಿ - ಮಂಟೆಸ್ವಾಮಿ ಕಾವ್ಯ

ಶರಣಚಳವಳಿ ೧೨ನೇ ಶತಮಾನದ ಬಹುದೊಡ್ಡ ಸಾಹಿತ್ಯಿಕ ಮತ್ತು ಸಾಮಾಜಿಕ ಕ್ರಾಂತಿ. ಇದರ ಬಗ್ಗೆ ಅಂದಿನಿಂದ ಇಂದಿನವರೆಗೂ ಅನೇಕಾನೇಕ ಬರೆಹದ ಇತಿಹಾಸಗಳು ದೊರೆಯುತ್ತವೆ. ಈ ಇತಿಹಾಸಗಳೆಲ್ಲ ಶರಣರು  ಸಮಾನತೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದ್ದನ್ನು, ಆಗಿನ ಕಲ್ಯಾಣ ಪಟ್ಟಣದ ಆದರ್ಶ ಗುಣಲಕ್ಷಣಗಳನ್ನು  ಹಾಗೂ ಆ ಚಳುವಳಿಯ ನಾಯಕರಾದ ಬಸವಣ್ಣ ಮೊದಲಾದ ಶರಣರ ನಡುವಿನ ಅನೋನ್ಯ ಸಂಬಂಧಗಳನ್ನು ದಾಖಲಿಸಿವೆ. ಆದರೆ ಇದರ ಬಗ್ಗೆ ಮೌಖಿಕ ಕಥನಗಳಲ್ಲಿ ದೊರೆಯುವ ಮಾಹಿತಿ ತೀರಾ ಭಿನ್ನವೆನಿಸುತ್ತದೆ. ಈ ಬಗ್ಗೆ ಪ್ರಸ್ತಾಪವಿರುವ ಮೌಖಿಕ ಕಥನಗಳಲ್ಲಿ ಮಂಟೇಸ್ವಾಮಿ ಜನಪದ ಮಹಾಕಾವ್ಯ ಗಮನಾರ್ಹವಾದುದು. ಆ ಕಾವ್ಯದಲ್ಲಿ ಬರುವ ವಿವರಗಳನ್ನು ಮುಂದಿನಂತೆ ಸಂಗ್ರಹಿಸಬಹುದು.  
ಮಂಟೇಸ್ವಾಮಿ ೧೨ನೇ ಶತಮಾನದಲ್ಲಿದ್ದ ಕೆಳವರ್ಗದ ಶಿವಶರಣ. ಬಸವಣ್ಣನ ಕಾಲದಲ್ಲೇ ಉಳುಕಾಗಿದ್ದ ಕಲ್ಯಾಣ ಪಟ್ಟಣದ ಶರಣ ಸಮೂಹವನ್ನು ತಿದ್ದಿ ಸರಿಪಡಿಸಲು ಕಲ್ಯಾಣ ಪಟ್ಟಣಕ್ಕೆ ಈತ ಹೊರಡುತ್ತಾನೆ. ಕಲ್ಯಾಣದಲ್ಲಿ ದಾಸೋಹಕ್ಕೆ ಮೊದಲು ಶುಭ್ರವಾಗಿರುವ ಮಹತ್ಮರು, ಶರಣರನ್ನು ಬಿಡು ಅನಂತರ ರೋಗಿ, ಭಿಕ್ಷುಕರನ್ನು ಬಿಡಬೇಕೆಂದು ಬಸವಣ್ಣನ ಆಜ್ಞೆಯಾಗಿರುತ್ತದೆ. ಇದನ್ನು ಮನಗಂಡ ಮಂಟೇಸ್ವಾಮಿ ಕುಷ್ಠರೋಗಿಯ ವೇಷಧಾರಿಯಾಗಿ ಕಲ್ಯಾಣ ಪಟ್ಟಣದ ಬಾಗಿಲಿಗೆ ಬರುತ್ತಾನೆ. ಬಾಗಿಲಲ್ಲಿದ್ದ ಕಟುಗರ ಸಂಗಯ್ಯ ಎನ್ನುವ ವ್ಯಕ್ತಿ ಮಂಟೇಸ್ವಾಮಿಯನ್ನು ತಡೆದು ನಿಲ್ಲಿಸುತ್ತಾನೆ. ಇದರಿಂದ ಕೋಪಗೊಂಡ ಮಂಟೇಸ್ವಾಮಿ ಬಸವಣ್ಣ ಮತ್ತು ನೀಲಾಂಬಿಕೆಯರಿಗೆ ಜ್ಞಾನೋದಯ ಮಾಡಿಸಿ, ಬಾಗಿಲಿಗೆ ನಮಗಿಂತ ಬಹುದೊಡ್ಡ ಶರಣ ಬಂದಿದ್ದಾನೆಂದು ತಿಳಿಯುವಂತೆ ಮಾಡುತ್ತಾನೆ. ಈ ವಿಷಯ ತಿಳಿದ ಬಸವಣ್ಣ-ನೀಲಾಂಬಿಕೆ ಅವರು ಬಾಗಿಲಿಗೆ ದಾವಿಸುತ್ತಾರೆ. ಅಷ್ಟೊತ್ತಿಗಾಗಲೇ ಮಂಟೇಸ್ವಾಮಿ ಹರಳಯ್ಯನ ತಿಪ್ಪೇಗುಂಡಿಯಲ್ಲಿ ಬಿದ್ದಿರುತ್ತಾನೆ. ಅದನ್ನು ಕಂಡ ಬಸವ ದಂಪತಿಗಳು ಸ್ವಾಮಿಯನ್ನು ಕೈ ಹಿಡಿದೆತ್ತಲು ಕೈ, ಕಾಲಿಡಿದೆತ್ತಲು ಕಾಲು, ರುಂಡವಿಡಿದೆತ್ತಲು ರುಂಡ ಕಿತ್ತು ಬರುತ್ತವೆ. ಅವುಗಳನ್ನೆಲ್ಲಾ ಪೊಟ್ಟಣ ರೀತಿ ಕಟ್ಟಿ ಹೊತ್ತು ತರುತ್ತಾರೆ. ಸ್ವಾಮಿಯ ಪವಾಡ ಪರಿಣಾಮದಿಂದ ಅವರು ಹೊತ್ತು ತರುವ ಆ ದೇಹದ ಭಾಗಗಳು ನೋಡುವ ಶರಣರಿಗೆ ಹೆಂಡದ ಗಡಿಗೆ, ಮಾಂಸದ ಪೊಟ್ಟಣದ ರೀತಿ ಕಾಣಲಾರಂಭಿಸುತ್ತವೆ. ಇಂತಹ ದೃಶ್ಯವನ್ನು ನೋಡಿದ ಕಲ್ಯಾಣದ ಮೇಲ್ವರ್ಗದ ಶರಣರು ನಾವು ಮತ್ತು ನಮ್ಮ ಲಿಂಗ ಬತ್ತಗೆಟ್ಟಂತಾಯಿತು ಎಂದು ಕಲ್ಯಾಣದಿಂದ ಓಡುತ್ತಾರೆ. ದಲಿತ ಶರಣರು ಮಾತ್ರ ಅಲ್ಲೇ ಇದ್ದರು. ಆಗ ಸ್ವಾಮಿ ಬಸವಣ್ಣನಿಗೆ ಬುದ್ಧಿವಾದ ಹೇಳುತ್ತಾ ನಿಜವಾದ ಶರಣರೆಂದರೆ ಇವರು (ದಲಿತರು). ಓಡಿ ಹೋದವರೆಲ್ಲ ಕಳ್ಳ ಜಂಗಮರು. ಉಳಿದವರನ್ನೇ ಶರಣರೆಂದು ನಂಬಿ ಗುರುಮಠ ಬೆಳೆಸು ಎನ್ನುವ ಮಾತುಗಳನ್ನು ಹೇಳುತ್ತಾನೆ. 
ಈ ಮೇಲಿನ ಸಾರಾಂಶ ಲಿಖಿತ ಇತಿಹಾಸಕ್ಕಿಂತ ವಿರುದ್ಧವಾದ, ಅಥವಾ ಅಲ್ಲಿ ದೊರೆಯದ ಅನೇಕ ಸತ್ಯಾಂಶಗಳನ್ನು ಹೊರಗೆಡಹುತ್ತಿದೆ. ಬಸವಣ್ಣ ಸಮಾನತೆಯ ಒಳಗೇನೆ ಎಂತಹ ಧ್ವಂಧ್ವಾತ್ಮಕವಾಗಿದ್ದ. ಹಾಗೆಯೇ ಎಂಥ ವೇಷಧಾರಿ ಜಂಗಮರು ಕಲ್ಯಾಣದಲ್ಲಿದ್ದರು, ಶಿವಶರಣರಲ್ಲಿದ್ದ ತಾರತಮ್ಯ ಮನೋಭಾವ ಯಾವ ತೆರನಾದುದು ಎನ್ನುವ ವಿಷಯಗಳನ್ನು ತಿಳಿಸುತ್ತಿದೆ. ಶಿವಶರಣರ ಈ ಜಾತಿ ತಾರತಮ್ಯ ನೀತಿಯಿಂದಾಗಿ ಕೆಳವರ್ಗದ ಶಿವಶರಣರಿಗೆ ಸರಿಯಾದ ಸ್ಥಾನ ಸಿಕ್ಕದೇ ಇದ್ದ ಕಾರಣದಿಂದಾಗಿ ತುಂಬಾ ಪ್ರಜ್ಞಾವಂತರಾದ ಮಂಟೇಸ್ವಾಮಿಯಂತಹ ಶರಣರು ಬಸವಣ್ಣನೂ ಸೇರಿದಂತೆ ಮೇಲ್ವರ್ಗದ ಶರಣರ ವಿರುದ್ಧ ದಂಗೆಯೆದ್ದು ಪರಿಸ್ಥಿತಿ ಸುಧಾರಿಸಿದ ಈ ಅಂಶ ಬಹುಶಃ ಬರಹದ ಮೂಲಕ ದಾಖಲಾಗುತ್ತ ಬಂದಿರುವ ಯಾವ ಇತಿಹಾಸದಲ್ಲೂ ಸಿಗಲಾರದು. ಆದ್ದರಿಂದಲೇ ಜಾನಪದ ಮತ್ತು ಇತಿಹಾಸದ ಸಂಬಂಧಗಳನ್ನು ಹೇಳುವಾಗ ’ಇತಿಹಾಸ ಎಲ್ಲಿ ಸೋಲುತ್ತದೆಯೋ ಅಲ್ಲಿ ಜಾನಪದ ನೆರವಿಗೆ ಬರುತ್ತದೆ’ ಎನ್ನುವ ವಿದ್ವಾಂಸರ ಮಾತು ಸತ್ಯಕ್ಕೆ ಹತ್ತಿರವಾದುದು. ಒಂದು ಕಾಲದ ವಸ್ತುನಿಷ್ಟ ಇತಿಹಾಸವನ್ನು ತಿಳಿಯಬೇಕಾದರೆ ಬರಹದ ಇತಿಹಾಸದ ಜೊತೆಗೆ ಅದೇ ಕಾಲದಲ್ಲಿ ರಚನೆಯಾದ ಮೌಖಿಕ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಏಕಪಕ್ಷಿಯ ನಿಲುವುಗಳು ಮಾತ್ರ ತಿಳಿಯುತ್ತವೆ. ಈವರೆಗೂ ರಚನೆಯಾಗಿರುವ ಇತಿಹಾಸಗಳ ರಚನೆಯೇ ಇದಕ್ಕೆ ಸಾಕ್ಷಿ. ಬಸವಣ್ಣ ಎಲ್ಲಾ ಶರಣರನ್ನು ತಿದ್ದಿ ಬೆಳಿಸಿದ ಸುದ್ದಿ ನೀಡುವ ಇತಿಹಾಸ ಎಂದೂ ಕೂಡ ದಲಿತ ಶರಣನೊಬ್ಬ ಬಸವಣ್ಣನನ್ನು ತಿದ್ದಿದ ಸುದ್ದಿಯನ್ನು ನೀಡಲಾರದು. ಅಂತಹ ಅದ್ಭುತ ಕೆಲಸ ಮೌಖಿಕ ಇತಿಹಾಸದಿಂದಲೇ ಸಾಧ್ಯ. ಇದನ್ನು ಮನಗಂಡಿರುವ ಅನೇಕ ಇತಿಹಾಸಕಾರರು ಮೌಖಿಕ ಚರಿತ್ರೆಯ ಕಡೆಗೆ ಗಮನ ನೀಡಿರುವುದು ಸ್ವಾಗತಾರ್ಹ. 
ಮೌಖಿಕ ಇತಿಹಾಸ, ಇತಿಹಾಸ ರಚನೆಗೆ ತುಂಬಾ ಸಹಕಾರಿ, ಅನಿವಾರ್‍ಯ ಕೂಡ ಎಂಬುದು ಸತ್ಯ. ಆದರೆ ಮೌಖಿಕ ಇತಿಹಾಸವನ್ನು ಇತಿಹಾಸ ರಚನೆಗೆ ಬಳಸಿಕೊಳ್ಳುವ ವಿದ್ವಾಂಸ ತುಂಬಾ ಪ್ರಜ್ಞಾವಂತನಿರಬೇಕು. ಕಾರಣ ಮೌಖಿಕ ಇತಿಹಾಸದಲ್ಲಿ ಅನೇಕ ಘಟನೆಗಳು ಐತಿಹ್ಯ-ಪುರಾಣಗಳಾಗಿ ಮಾರ್ಪಾಟಾಗಿರುತ್ತವೆ. ಈ ಐತಿಹ್ಯ-ಪುರಾಣಗಳಿಂದ ಐತಿಹಾಸಿಕ ಅಂಶಗಳನ್ನು ಬಿಡಿಸಿಕೊಳ್ಳುವ ಕ್ರಿಯೆ ತುಂಬಾ ಕಷ್ಟಕರ. ಆದ್ದರಿಂದ ಮೌಖಿಕ ಇತಿಹಾಸ ವಸ್ತುನಿಷ್ಟ ಇತಿಹಾಸದ ರಚನೆಗೆ ತುಂಬಾ ಸಹಕಾರಿ, ವಿದ್ವಾಂಸ ಮೌಖಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳುವಾಗ ಸ್ವಲ್ಪ ಎಡವಿದ್ದೇ ಆದಲ್ಲಿ ಅಷ್ಟೇ ಅಪಾಯಕಾರಿ. 
ನಿದರ್ಶನ-೨ 
ಭಗೀರತಿ - ಬಂದಮ್ಮ
ಕೆರೆಗೆಹಾರ ಕನ್ನಡದ ಜನಪ್ರಿಯ ಕಥನಗೀತೆ. ಇದರ ಪಾಠಾಂತರಗಳು ಕನ್ನಡ ನಾಡಿನಲ್ಲಿ ಅಷ್ಟೇ ಅಲ್ಲದೆ ನೆರೆಯ ಆಂದ್ರದಲ್ಲಿಯೂ ಸಿಗುತ್ತವೆ. ಈ ಕಥನಗೀತೆಯ ಬರೆಹದ ಪಾಠಾಂತರದಲ್ಲಿ ಸಮಾಜದ ಒಂದು ವರ್ಗದ ಉದಾರತೆ ಹಾಗೂ ತ್ಯಾಗ ಮನೋಭಾವಗಳನ್ನು ಬಿಂಬಿಸಲಾಗಿದೆ. ಇದರ ಕಥೆಯನ್ನು ಹೀಗೆ ಸಂಗ್ರಹಿಸಬಹುದು : ಕಲ್ಲನಕೇರಿ ಮಲ್ಲನಗೌಡ ಕೆರೆಯೊಂದು ಕಟ್ಟಿಸುತ್ತಾನೆ. ಕೆರೆಯಲ್ಲಿ ಸೆರೆಮುಕ್ಕ ನೀರಿಲ್ಲ . ಅದಕ್ಕೆ ಗೌಡ ಹೊತ್ತಿಗೆ ತೆಗೆಸುತ್ತಾನೆ. ಅದರಲ್ಲಿ ಗೌಡನ ಹಿರಿಸೊಸೆಯನ್ನು ಬಲಿಕೊಡಬೇಕೆಂದು ಹೇಳುತ್ತದೆ. ಇದರಿಂದ ಚಿಂತೆಗೊಳಗಾದ ಗೌಡ ಹಿರಿಸೊಸೆಯನ್ನು ಬಲಿಕೊಟ್ಟರೆ ತನ್ನ ವಂಶದ ನಾಶವಾಗುತ್ತದೆ ಎಂದು ಭಾವಿಸುತ್ತಾನೆ. ಕೊನೆಗೆ ತನ್ನ ಕಿರಿಸೊಸೆ ಭಗೀರತಿಯನ್ನು ಬಲಿಕೊಡಲು ತೀರ್ಮಾನಿಸುತ್ತಾನೆ. ಸೊಸೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಬಲಿಯಾಗುತ್ತಾಳೆ. ಇದರಿಂದ ಕೆರೆಗೆ ನೀರುಬರುತ್ತದೆ. ಈ ಕಥೆಗೆ ಅನೇಕ ಪ್ರತಿವಾದಗಳನ್ನು ಒಡ್ಡುವ ಮೂಖಿಕ ರೂಪದ ಪಾಠಾಂತರಗಳು ದೊರೆಯುತ್ತವೆ. ಅಂತಹ ಒಂದು ವಿಶಿಷ್ಟ ಪಾಠಾಂತರದ ಬಗ್ಗೆ ಗಂಭೀರವಾದ ಅಧ್ಯಯನಮಾಡಿರುವ ಎಸ್.ಆರ್. ಗುರುನಾಥ ಅವರು ’ಕೆರೆಗೆ ಹಾರವಾದ ಬಂದಮ್ಮನ ಇತಿಹಾಸ’ ಎನ್ನುವ ಪುಸ್ತಕ ಪ್ರಕಟಿಸಿದ್ದು ಅದರಲ್ಲಿ ಹಲವಾರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಊರಿನ ಗೌಡರು / ಪಟೇಲರು ಕೆರೆ ಕಟ್ಟೆಗಳನ್ನು, ಕೋಟೆ ಕೊತ್ತಲಗಳನ್ನು ಕಟ್ಟಿಸುವುದು, ಅವುಗಳು ಸುಭದ್ರವಾಗಿ ನಿಲ್ಲದೇ ಇರುವುದು, ಅದಕ್ಕೆ ಹೊತ್ತಗೆ ತೆಗೆಸುವುದು, ಅದರಲ್ಲಿ ಗೌಡನ / ಪಟೇಲನ ಸೊಸೆಯನ್ನು ಬಲಿಕೊಡಬೇಕೆಂದು ಬರುವುದು, ಕೊನೆಗೆ ಬಲಿ ಕೊಡುವುದು, ನಂತರ ಕೆರೆ ಕಟ್ಟೆ, ಕೋಟೆ ಕೊತ್ತಲುಗಳು ಸುಸೂತ್ರವಾಗುವುದು. ತೀರಾ ಸಾಮಾನ್ಯ ಕಥೆ. ಈ ಸಂದರ್ಭಗಳಲ್ಲಿ ಗೌಡ ನಿಜವಾಗಿ ತನ್ನ ಸೊಸೆಯನ್ನು ಬಲಿಕೊಟ್ಟನೇ? ಎಂಬುದು ಎಲ್ಲರಿಗೂ ಪ್ರಶ್ನೆಯಾಗಿತ್ತು. ಇದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಆಧಾರಗಳ ಕೊರತೆ ಇತ್ತು. ಗುರುನಾಥ್ ಅವರು ಅಂಥ ಪ್ರಶ್ನೆಗಳು ಅನುಮಾನಗಳು ಸರಿಯಾಗಿಯೇ ಇವೆ ಎಂಬುದನ್ನು ತಮ್ಮ ಅಧ್ಯಯನದುದ್ದಕ್ಕೂ ಸ್ಪಷ್ಟ ಆಧಾರಗಳೊಂದಿಗೆ ಸಾಬೀತುಮಾಡಿದ್ದಾರೆ. 
ಎಸ್.ಆರ್.ಗುರುನಾಥ್ ಅವರ ಅಧ್ಯಯನದಲ್ಲಿ ತಿಳಿದುಬರುವ ಸಂಗತಿಗಳೆಂದರೆ : ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಒಂದು ಗ್ರಾಮ. ಅದರ ಹೆಸರು ’ಎರಡು ಕೆರೆ’. ಈ ಗ್ರಾಮದ ಗೌಡ ಮರಿಗೌಡ ಅಂತ. ಈತ ಕಟ್ಟಿಸಿದ ಕೆರೆಯೊಂದಕ್ಕೆ ತನ್ನ ಸೊಸೆಯನ್ನು ಬಲಿಕೊಡಬೇಕಾದ ಪ್ರಸಂಗ ಬಂತು. ಇದು ಗೌಡರನ್ನು ಚಿಂತೆಗೀಡುಮಾಡಿತು. ಹಾಗಾಗಿ ಈ ಸಂಬಂಧ ಶಾನುಭೋಗರ ಸಲಹೆ ಕೇಳಿದ. ಶಾನುಭೋಗ ನೀಡಿದ ಸಲಹೆ ಹೀಗಿತ್ತು. ಗೌಡರ ಮನೆಯಲ್ಲಿ ’ತಿಮ್ಮ’ ಅನ್ನುವ ಒಬ್ಬ ಜೀತದಾಳು ಇದ್ದ. ಅವನು ಗೌಡನನ್ನು ಅಪ್ಪ ಎಂದೇ ಕರೆಯುತಿದ್ದ. ಇದನ್ನು ಅರಿತಿದ್ದ ಶಾನುಭೋಗರು ತಿಮ್ಮ ಹೇಗಿದ್ದರೂ ನಿಮ್ಮ ಮಗನಂತಲ್ಲವೇ? ಹಾಗಾದರೆ ಅವನ ಹೆಂಡತಿಯು ನಿಮ್ಮ ಸೊಸೆಯೇ. ಅವಳನ್ನೇ ಬಲಿಕೊಡಿ ಎಂದರು. ಇದು ಗೌಡರಿಗೂ ಹೌದೆನಿಸಿತು. ಪರಿಣಾಮ ತಿಮ್ಮನ ಹೆಂಡತಿ ತುಂಬ ಬಸುರಿಯಾಗಿದ್ದರೂ ಬಲಿ ಕೊಡಲಾಯಿತು. ನಂತರ ದಿನಗಳಲ್ಲಿ ಬಂದಮ್ಮನ ಬಲಿಯನ್ನು ತ್ಯಾಗ ಎಂದು ಬಣ್ಣಿಸಲಾಯಿತು. ಬಂದಮ್ಮನ ಹಾಡು ಕೂಡ ಸೃಷ್ಟಿಯಾಯಿತು. ಆದರೆ ಈ ಹಾಡು ತುಂಬಾ ದಿನ ಆ ಊರಿನ ಜನರ ಬಾಯಲ್ಲಿ ಉಳಿಯಲೇ ಇಲ್ಲ. ಬಂದಮ್ಮನ ಬದಲಿಗೆ ಭಗೀರಥಿ ಬಂದಳು. 
ಇದಿಷ್ಟು ಇತಿಹಾಸವನ್ನು ಲೇಖಕರು ಅತೀ ಶ್ರದ್ಧೆ ಹಾಗೂ ಶ್ರಮದಿಂದ ಶೋಧಿಸಿದ್ದಾರೆ. ಪ್ರಸ್ತುತ ಘಟನೆಗಳು ನಮ್ಮನ್ನು ದಿಘ್ಮೂಢರನ್ನಾಗಿಸುತ್ತವೆ. ಏಕೆಂದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಿಮ್ಮನಂತಹವರನ್ನು ಎಂದಿಗೂ ತನ್ನ ಸಂಬಂಧಿ ಎಂಬುದಾಗಿ ಭಾವಿಸಲಾರದ ವ್ಯವಸ್ಥೆಯೊಂದು ತನಗೆ ಬಂದ ಕಷ್ಟದಿಂದ ಪಾರಾಗಲು ಅತ್ಯಂತ ಸುಲಭವಾಗಿ ಸಂಬಂಧವನ್ನು ಆಗು ಮಾಡಿ ತಿಮ್ಮನ ಹೆಂಡತಿಯಂತಹ ಅಮಾಯಕರನ್ನು ಬಲಿ ನೀಡಿದ್ದು. ಹಾಗೇನೆ ಬಲಿಯಾದ ಹೆಣ್ಣನ್ನು ಸ್ಮರಿಸುವ ಹಾಡುಗಳು ಕಾಲಾನಂತರ ಮೇಲ್ವರ್ಗದ ಹಿತಕ್ಕೆ ಬಲಿಬಿದ್ದು ಕಾಲ್ಪನಿಕ ಭಗೀರಥ ಬಂದದ್ದು. ಪ್ರಸ್ತುತ ಸಂಗತಿಗಳು ನಮ್ಮನ್ನು ವಿವಿಧ ಚಿಂತನೆಗಳಿಗೆ ಪ್ರೇರೇಪಿಸುತ್ತವೆ. ಅಲಕ್ಷಿತ ಅಧ್ಯಯನಗಳು ಎತ್ತಿಕೊಂಡ ಗೌಡ ತನ್ನ ಸ್ವಂತ ಸೊಸೆಯನ್ನು ನಿಜವಾಗಿ ಬಲಿಗೊಟ್ಟನೆ? ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಒಂದು ಕಡೆ. ಮತ್ತೊಂದು ಕಡೆ ಮೌಖಿಕ ಅಭಿವ್ಯಕ್ತಿಗಳು ಆಳುವವರ್ಗ ಎಸಗುವ ಲೋಪಗಳನ್ನು ಮೀರಿ ಕೆಳವರ್ಗಗಳ ಪರವಾಗಿ ನಿಲ್ಲುತ್ತವೆ ಎಂಬ ವಾದಕ್ಕೆ ಪ್ರತಿಯಾಗಿ ಅವೂ ಕೂಡ ಮೇಲ್ವರ್ಗದ ಆಶಯಗಳಿಗೆ ಹೊಂದಿಕೊಳ್ಳುವುದು ವಿಚಿತ್ರವಾಗಿದೆ. 
ಮೇಲಿನ ಎರಡು ನಿದರ್ಶನಗಳನ್ನು ನೋಡಿದ ಮೇಲೆ ಇತಿಹಾಸ ರಚನಾಕಾರರು ತಪ್ಪದೇ ಮೌಖಿಕ ಆಕರಗಳ ಕಡೆ ಮುಖ ಮಾಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತದೆ. ಒಂದು ಕಾಲದ ಘಟನೆಯ ಇತಿಹಾಸ ಪರಿಪೂರ್ಣವಾಗಬೇಕಾದರೆ ರಾಜರ ನೆರಳಿನ ಬರೆಹದ ಆಕರಗಳ ಜೊತೆಗೆ ಜನ ಸಾಮಾನ್ಯರ ಬಾಯಿಮಾತಿನ ಆಕರಗಳು ಕೂಡ ಪರಿಗಣಿತವಾಗಬೇಕಿದೆ. ಆದರೆ ಹೀಗೆ ಮೌಖಿಕ ಆಕರಗಳ ಮೂಲಕ ಚರಿತ್ರೆಯನ್ನು  ಕಟ್ಟುವ ಕೆಲಸ ಅತ್ಯಂತ ಸವಾಲಿನ ವಿಷಯ. ಇಲ್ಲಿ ಹತ್ತು ಹಲವು ತೊಡಕುಗಳು ಎದುರಾಗುತ್ತವೆ. ಅಂತಹವುಗಳಲ್ಲಿ ಜಾನಪದಕ್ಕೆ ಸಹಜವಾಗಿ ಅಂಟಿಕೊಂಡಿರುವ ಅತಿಮಾನುಷತೆಯನ್ನು ಕಳಚುವುದು, ಇತಿಹಾಸಕಾರರು ಜಾನಪದ ವಿದ್ವಾಂಸರು ಅನುಸಂಧಾನ ಮಾಡಿಕೊಳ್ಳಬೇಕಾಗಿರುವುದು, ಇನ್ನೂ ಮೊದಲಾದವು. ಅಂತೂ ಇಂತಹ ಮಹತ್ವದ ಕಾರ್‍ಯವನ್ನು ಗಂಭೀರವಾಗಿ ತೆಗೆದುಕೊಂಡು ಪರಂಪರಾಗತ ಚರಿತ್ರೆಗೆ ಒಂದು ಹೊಸ ಆಯಾಮ ನೀಡಬೇಕಾಗಿದೆ.

ಪರಾಮರ್ಶನ ಗ್ರಂಥಗಳು
೧. ಕಾಳಿಂಗರಾಯನ ಕಾವ್ಯ, ಹೆಚ್.ವಿ. ನಾಗೇಶ್ (ಸಂ), ಕನ್ನಡ ವಿಶ್ವವಿದ್ಯಾನಿಲಯ, ಹಂಪಿ. ೧೯೯೮
೨. ಮರದೊಳಗಣ ಕಿಚ್ಚು, ರಹಮತ್ ತರೀಕೆರೆ, ಬೆಳ್ಳಿಚುಕ್ಕಿ ಟ್ರಸ್ಟ್, ಬೆಂಗಳೂರು. ೨೦೦೨
೩. ಮಂಟೇಸ್ವಾಮಿ (ಸಂ), ಹೊ.ಚಿ. ಬೋರಲಿಂಗಯ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ ಹಂಪಿ.೧೯೯೭
೪. ಕೂಡುಕಟ್ಟು, ಪುರುಷೋತ್ತಮ ಬಿಳಿಮಲೆ, ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ,೧೯೯೭
೫. ಎಸ್.ವಿ. ಪ್ರಭಾಕರ, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೦೦
೬. ಅವ್ಯಕ್ತ ಚರಿತ್ರೆ, ಮೊಗಳ್ಳಿ ಗಣೇಶ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.೨೦೦೯
೭. ಸ್ಥಳೀಯ ಚರಿತ್ರೆ ಅಧ್ಯಯನದ ತಾತ್ವಿಕತೆ ಮತ್ತು ಸ್ವರೂಪ, ಸಂ:ಲಕ್ಷ್ಮಣ ತೆಲಗಾವಿ, ೨೦೦೩,ಪ್ರಸಾರಾಂಗ, ಕನ್ನಡ         ವಿಶ್ವವಿದ್ಯಾನಿಲಯ ಹಂಪಿ.
೮. ಜಾನಪದ ಸಂಕಥನ, ಎಸ್.ಎಂ. ಮುತ್ತಯ್ಯ, ಅಕ್ಷಯ ಪ್ರಕಾಶನ, ಚಿತ್ರದುರ್ಗ,೨೦೦೭
೯. ಲಿಖಿತ ಅಲಿಖಿತ, ಎಸ್.ಎಂ. ಮುತ್ತಯ್ಯ, ಸೃಷ್ಟಿಪ್ರಕಾಶನ, ಬೆಂಗಳೂರು, ೨೦೦೫


ಡಾ. ಎಸ್.ಎಂ. ಮುತ್ತಯ್ಯ 

No comments:

Post a Comment