Monday 9 April 2012

ಮ್ಯಾಸಬೇಡರ ಮಳೆ ಜ್ಞಾನ

 ಫಾಸಿಲ್ಸ್ ನ 19 ನೇ ಅಖಿಲ ಭಾರತೀಯ ವಾರ್ಷಿಕ ಸಮ್ಮೇಳನ, 2012 ಜನವರಿ 27, 28, 29
ಪ್ರಬಂಧದ ವಿಷಯ : ಮ್ಯಾಸಬೇಡರ ಮಳೆ ಜ್ಞಾನ *
 ಸಾರಲೇಖ
                      
                    'ಮ್ಯಾಸಬೇಡ' ಎನ್ನುವುದು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ನೆಲೆಂತಿರುವ ವಿಶಿಷ್ಟವಾದ ಒಂದು ಬುಡಕಟ್ಟಾಗಿದೆ. ಇದು ತನ್ನದೇ ಆದ ಸಂಸ್ಕೃತಿಯ ವೈಲಕ್ಷಣಗಳೊಂದಿಗೆ ಎಲ್ಲರ ಗಮನ ಸೆಳೆಯುವ ಮೂಲಕ ಇಂದಿಗೂ ಬುಡಕಟ್ಟಿನ ಮೂಲ ಗುಣಗಳನ್ನು ಬಿಟ್ಟುಕೊಡದೇ ಬದುಕುತ್ತಿದೆ. ಆಧುನಿಕತೆಯ ಆರ್ಭಟಗಳ ನಡುವೆಯೂ ತನ್ನ ಪರಾಂಪರಿಕ ಜ್ಞಾನಗಳನ್ನು ನಂಬಿ ನಿರ್ವಸಾಹತೀಕರಣ ಪ್ರಕ್ರಿಯೆಯಲ್ಲಿ ಮುನ್ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಮ್ಯಾಸಬೇಡ ಸಮುದಾಯದ ಒಡಲಲ್ಲಿ ಉಸಿರಾಡುತ್ತಿರುವ ಇಂಥ ಪಾರಂಪರಿಕ ಜ್ಞಾನಗಳ ಬಗ್ಗೆ ಈವರೆಗೂ ಈ ಸಮುದಾಯದ ಬಗ್ಗೆ ನಡೆದಿರುವ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಸ್ತಾಪಗಳು ಇಲ್ಲದೇ ಇರುವುದು ಕಂಡುಬರುತ್ತದೆ.ಈ ಹಿನ್ನೆಲೆಯೊಳಗೆ ಪ್ರಸ್ತುತ ಪ್ರಬಂಧದಲ್ಲಿ ಮ್ಯಾಸಬೇಡರ ಪಾರಂಪರಿಕ ಜ್ಞಾನಗಳಲ್ಲಿ ಪ್ರಮುಖ ಶಾಖೆಯಾಗಿರುವ ಮಳೆ ಬಗೆಗಿನ ಜ್ಞಾನದ ಬಗ್ಗೆ ತಿಳಿಯುವ ಪ್ರಯತ್ನಮಾಡಲು ಉದ್ದೇಶಿಸಲಾಗಿದೆ.
                      ಮ್ಯಾಸಬೇಡರ ಬುಡಕಟ್ಟು ಅತೀ ಪ್ರಾಚೀನ ಪರಂಪರೆಯನ್ನು ಹೊಂದಿದ್ದು , ಅಂಥ ದೀರ್ಘಕಾಲದ ಬದುಕಿನಲ್ಲಿ ಅನೇಕ ರೀತಿಯ ಅವಸ್ತಾಂತರಗಳನ್ನು ಕಂಡಿದೆ. ವೃತ್ತಿಯಲ್ಲಿ ಆರಂಭಕ್ಕೆ ಬೇಟೆಗಾರರಾಗಿದ್ದ ಇವರು ನಂತರ ಪಶುಪಾಲಕರಾಗಿದ್ದರೆ, ತದನಂತರ ಕೃಷಿಕರಾಗಿ ಪರಿವರ್ತನೆಗೊಂಡಿದ್ದಾರೆ. ಈ ಮೂರು ವೃತ್ತಿಗಳಿಗೂ ಮತ್ತು ಮಳೆಗೂ ನಿಕಟ ಸಂಬಂಧವಿದ್ದು ನಿರಂತರವಾಗಿ ಮಳೆಯ ಅವಶ್ಯಕತೆಯಲ್ಲಿ ಜೀವನ ಸಾಗಿಸಿರುವ ಈ ಸಮುದಾಯ, ಮಳೆಯನ್ನು ಕುರಿತಂತೆ ತನ್ನದೇ ಆದ ಜ್ಞಾನವನ್ನು ಹೊಂದಿದೆ. ಈ ಜ್ಞಾನದಲ್ಲಿ ಸ್ವಲ್ಪಭಾಗ ಕಾಲ್ಪನಿಕವಾಗಿದ್ದರೆ, ಹೆಚ್ಚಿನ ಭಾಗ ಅನುಭವ ಜನ್ಯವಾದುದಾಗಿದೆ. ಇಲ್ಲಿ ಮುಖ್ಯವಾಗಿ ಮಳೆ ಹೇಗೆ ಬರುತ್ತದೆ? ಮಳೆ ಬರುವ,ಹೋಗುವ ಸೂಚನೆಗಳೇನು? ವಿವಿಧ ಮಳೆಗಳ ಗುಣಗಳು ಮತ್ತು ಅವುಗಳು ನೀಡಿರುವ ಹಾಗೂ ನೀಡುತ್ತಿರುವ ಅನುಭವಗಳೇನು?ಮಳೆ ಬರದೇ ಹೋದಾಗ ಮಾಡುತ್ತಿರುವ ಆಚರಣೆಗಳು ಮತ್ತು ಅವುಗಳ ಹಿಂದಿರುವ ಲೋಕದೃಷ್ಟಿ ಯಾವುದು? ಮಳೆ ಬೇಡವೆಂದಾಗ ಮಾಡುತ್ತಿರುವ ಆಚರಣೆಗಳು ಮತ್ತು ಅವುಗಳ ಹಿಂದಿರುವ ಲೋಕದೃಷ್ಟಿ ಯಾವುದು? ಮಳೆ ಸಂಬಂಧೀ ಸಾಹಿತ್ಯ, ನಂಬಿಕೆ ಮತ್ತಿತರ ನಿರೂಪಣೆಗಳೇನು ಎಂಬಿತ್ಯಾದಿ ಅಂಶಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ.
                                ಈ ಸಮುದಾಯ  ಮಳೆಬರುವ ಸೂಚನೆಗಳನ್ನು ಹವಾಮಾನದ ಲಕ್ಷಣಗಳ ಮೂಲಕ ಮತ್ತು ಕನಸಿನಲ್ಲಿ ಕಂಡ ಸಂಗತಿಗಳ ಮೂಲಕ ಗುರುತಿಸುತ್ತದೆ.ಸೂರ್ಯ ಹುಟ್ಟುವ ಜಾಗದಲ್ಲಿ ಮಿಂಚಿದರೆ ಮಳೆಬರುತ್ತದೆ ಎಂಬುದು ಅನಭವದ ಸೂಚನೆಯಾದರೆ,ಕನಸಿನಲ್ಲಿ ಕುರಿಗಳು,ಪೊಲೀಸರು ಕಂಡರೆ ಮಳೆಬರುತ್ತದೆ ಎಂಬುದು ಅನುಭಾವದ ಸೂಚನೆಯಾಗಿದೆ.ಹಾಗೆಯೇ ಮಳೆ ಬರದೇ ಹೋದಾಗ ದೇವರನ್ನು ಕೇಳುವ,ಕೋಲಾಟದ ಮೂಲಕ ಪರಮಾತ್ಮನ ಗಮನ ಸೆಳೆಯುವ,ಪುರಾಣ ಓದುವ ದೇವರನ್ನು ಬೇಡುವ ಕಾರ್ಯಗಳ ಹಿಂದೆ ಅಡಗಿರುವ ಈ ಸಮುದಾಯದ ಲೋಕದೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ವರ್ಷದ ಆರಂಭದಲ್ಲೇ ಮಳೆ ಬಗ್ಗೆ ದೇವರಲ್ಲಿ ಭವಿಷ್ಯ ಕೇಳುವ ದೃಷ್ಟಿಯಿಂದ ದೇವಸ್ಥಾನ ಮುಂದೆ ಕೊಡಹಿಡಿಯುವ,ಕೊಳಲೂದುವ ಆಚರಣೆಗಳು ನಿಜವಾಗಿಯೂ ಕತೂಹಲದಾಯಕವಾಗಿದ್ದು ಇವೆಲ್ಲವುಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ.ಸಮುದಾಯದ ಒಳಗೆ ಇಂಥ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲ್ಲಿದ್ದು ಇಂಥ ಎಲ್ಲಾ ಅಂಶಗಳನ್ನು ಕ್ಷೇತ್ರಕಾರ್ಯ ಹಾಗೂ ಆನುಷಂಗಿಕ ಆಕರಗಳ ಮೂಲಕ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಈ ಪ್ರಯತ್ನದಿಂದ ಹೊರಹೊಮ್ಮುವ ಫಲಿತಗಳು ಪ್ರಸ್ತುತ ಸಮುದಾಯಕ್ಕೆ ಒಂದು ಗೌರವವನ್ನು , ಹೊರಗಿನ ಸಮುದಾಯಗಳಿಗೆ ಅನುಸರಣಾ ಯೋಗ್ಯ ಸ್ಥಿತಿಯನ್ನು,ಸಮುದಾಯ ಅಧ್ಯಯನಗಳಿಗೆ ಒಂದು ಹೊಸ ಆಯಾಮವನ್ನು ತಂದು ಕೊಡಬಲ್ಲವು ಎಂಬುದು ಪ್ರಸ್ತುತ ಅಧ್ಯಯನದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
 * ವಿಳಾಸ: ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ),    ಶಿವಮೊಗ್ಗ- 577 203, ದೂ : 94486 40114,

1 comment:

  1. ಸರ್ ನಿಮ್ಮ "ಮ್ಯಾಸಬೇಡರ ಮಳೆ ಜ್ಞಾನ * ದ ರೀತಿ ಅವರ ದೇವರ ದನಗಳ ಕುರಿತು ಏನಾದರು ಸಂಶೋಧನೆಯಾಗಿದೆಯೇ? ಮನೋಹರ ತಿಪಟೂರು.

    ReplyDelete