Saturday, 4 July 2015
ಕನ್ನಡ ಜಾನಪದ ಜಗತ್ತಿನ ಅಧ್ಯಯನ ಕ್ಷೇತ್ರದಲ್ಲಿ ಕಳೆದ ೫೦-೬೦ ವರ್ಷಗಳಿಂದ ಜಾನಪದವನ್ನು ಅರ್ಥೈಯಿಸುವ ಪ್ರಯತ್ನಗಳು ನಡೆದಿದೆ. ಇವುಗಳಲ್ಲಿ ಜಾನಪದ ನಮ್ಮ ಅಸ್ಮಿತೆಯ ಪ್ರಶ್ನೆ. ಅದನ್ನು ಉಳಿಸಿ ಬೆಳಸಬೇಕು ಎಂಬ ಭಾವನೆ ಎದ್ದು ಕಾಣಿಸುತ್ತದೆ. ಈ ಉಳಿಸಿ ಬೆಳೆಸುವ ಆಶಯಗಳಲ್ಲಿ ಉಳಿಸುವ ಕೆಲಸ ಚನ್ನಾಗಿಯೇ ಆಗಿದೆ. ಆದರೆ ಬೆಳೆಸುವ ಕೆಲಸ ಸಮಾಧಾನಕರವಾದ ರೀತಿಯಲ್ಲಿ ಇಲ್ಲ. ಜಾನಪದವನ್ನು ಬೆಳೆಸುವ ಕ್ರಿಯೆಗೆ ಮುಖ್ಯವಾಗಿ ಬೇಕಿರುವುದು ಆ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದುದು. ಜಾನಪದ ಸೃಷ್ಟಿಗಳ ವಿವಿಧ ರೀತಿಯ ರಚನೆಗಳ ಹಿಂದೆ ಸಾಕಷ್ಟು ಸಂಕೀರ್ಣತೆಯಿದೆ. ಅವುಗಳನ್ನು ನಿರಚನೆಗೊಳಿಸಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂಥ ಪ್ರಯತ್ನಗಳು ನಮ್ಮ ಈವರೆಗಿನ ಆಧ್ಯಯನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ನಮ್ಮ ಜಾನಪದ ರಚನೆಗಳನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದು ಸಾಧ್ಯವಾಗದ ಹೊರತು ಅದನ್ನು ಸಮಕಾಲೀನ ಅಥವಾ ಭವಿಷ್ಯದ ಸಮಾಜಕ್ಕೆ ಅನ್ವಯಿಸುವುದಾಗಲಿ, ಅದನ್ನು ಬೆಳಸಿ ಮುಂದುವರೆಸುವುದಾಗಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಇನ್ನು ಮುಂದಾದರೂ ನಾವು ನಮ್ಮ ಜಾನಪದ ಸೃಷ್ಟಿಗಳನ್ನು ನಿಜವಾದ ನೆಲೆಗಳಲ್ಲಿ ಅರ್ಥೈಯಿಸುವ ಪ್ರಯತ್ನಗಳನ್ನು ಆರಂಭಿಸಬೇಕಿದೆ. ಈ ಪ್ರಯತ್ನದ ಭಾಗವಾಗಿ ಸಮಗ್ರ ಜಾನಪದದ ಒಂದು ಭಾಗವಾಗಿರುವ ಜನಪದ ಸಾಹಿತ್ಯವನ್ನು ’ಪ್ರತಿಮಾ ವಿಧಾನ’ ತತ್ವದ ಮೂಲಕ ಅರ್ಥೈಸುವ ಪ್ರಯತ್ನ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ನಡೆದ ಸರಣಿ ಅಂಬೇಡ್ಕರ್ ಜಯಂತಿ ಯ ಸಮಾರೋಪ ಸಮಾರಂಭದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ ಎಂಬ ಹೆಸರಲ್ಲಿ ಮಾತನಾಡಿದ ಮಾತುಗಳು *
ಡಾ. ಎಸ್.ಎಂ. ಮುತ್ತಯ್ಯ
ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಕೊನೆಯ ಕಾಲದಲ್ಲಿ ತನ್ನ ಚಳವಳಿ ಹಾಗೂ ಜನರು ತಲುಪಿರುವ ಅವಸ್ಥೆಯನ್ನು ಕುರಿತು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುವುದರ ಮೂಲಕ ನನ್ನ ಮಾತುಗಳನ್ನು* ಆರಂಭಿಸುತ್ತೇನೆ.
೧. "ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ. ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ"
೨. "ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ"
೩. "ನನ್ನ ನಂತರ, ನನ್ನ ಜೀವತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯೆದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!"
೪. "ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು...’, ‘ಹೋಗು... ಅವರಿಗೆ ಹೇಳು...’, ‘ಹೋಗು... ಅವರಿಗೆ ಹೇಳು..."(* ಬಾಬಾಸಾಹೇಬರ ಆಪ್ತಕಾರ್ಯದರ್ಶಿ ಸರ್ ನಾನಕ್ಚಂದ್ ರತ್ತು, "ಐಚಿsಣ ಜಿeತಿ ಥಿeಚಿಡಿs oಜಿ ಆಡಿ. ಂmbeಜಞಚಿಡಿ")
ಅಂಬೇಡ್ಕರ್ ಅವರ ಮೇಲಿನ ಮಾತುಗಳಿಂದ ವ್ಯಕ್ತವಾಗುವ ಸಂಗತಿಗಳು
೧. ನಾನು ನನ್ನ ಗುರಿ ತಲುಪಲು ಸಾಧ್ಯವಾಗಲಿಲ್ಲ ಎನ್ನುವ ಕೊರತೆ. ಅದನ್ನು ಮುಂದುವರೆಸಲು ಬೇಕಾದ ವಯಸ್ಸು ಮತ್ತು ಆರೋಗ್ಯ ನನ್ನ ಬಳಿ ಇಲ್ಲವಲ್ಲ ಎಂಬ ನಿರಾಸೆ
೨. ನನ್ನ ಹೋರಾಟದ ಫಲವಾಗಿ ದಕ್ಕಿದ ಕೆಲವಾದರೂ ಫಲಗಳನ್ನು ಪಡೆದು ತಮಗೆ ತಾವೇ ಸುಖ ಪಡುತ್ತಿದ್ದಾರೆ. ಅವರಿಗೆ ತಮ್ಮ ಹಿಂದಿರುವ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಾಗಾಗಿ ಅವರು ಹಾದಿತಪ್ಪಿದ ಅಯೋಗ್ಯರಾಗಿದ್ದಾರೆ
೩. ನನ್ನ ನಂತರ ಚಳುವಳಿಯನ್ನು ಮುನ್ನಡೆಸುವರು ಅಂದುಕೊಂಡಿದ್ದ ವ್ಯಕ್ತಿಗಳು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬದಲಿಗೆ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಹಾಗಾಗಿ ಅಂತಹ ಜವಾಬ್ದಾರಿ ಇರುವ ಯಾವ ವ್ಯಕ್ತಿಗಳು ಕಾಣುತ್ತಿಲ್ಲ
೪. ನಾನು ಚಳವಳಿಯನ್ನು ಬಹಳ ಕಷ್ಟಪಟ್ಟು ನನ್ನ ಜೀವನವಡೀ ಶತೃಗಳ ಜೊತೆ ಹೋರಾಡಿ ನೋವನ್ನು ಅನುಭವಿಸಿ ಕಟ್ಟಿದ ಚಳವಳಿಯನ್ನು ಸಮರ್ಥವಾಗಿ ಮುನ್ನಡೆಸಬೇಕು. ಮುನ್ನಡೆಸಲು ಸಾಧ್ಯವಾಗದಿದ್ದರೆ ಅದನ್ನು ಹಿಂದಕ್ಕೆ ತಳ್ಳಬಾರದೆಂಬುದನ್ನು ನನ್ನ ಜನ ತಿಳಿಯಬೇಕು
ಅಂದರೆ ಅಂಬೇಡ್ಕರ್ ವಿಚಾರ ಹಾಗೂ ಹೋರಾಟಗಳು ಅವರ ಕಾಲಕ್ಕೇ ಸಾಕಷ್ಟು ನಿಷ್ಕ್ರಿಯೆ ಹಾಗೂ ಭ್ರಷ್ಟಗೊಂಡಿದ್ದವು ಎಂಬುದು ನಾವು ಗಮನಿಸಬೇಕಾದ ಸಂಗತಿ . ಈ ಸಂದೇಶ ಇಂದು ನಮ್ಮನ್ನು ಇನ್ನಷ್ಟು ಚುಚ್ಚಿ ಎಚ್ಚರಿಸುತ್ತಿದೆ. ಅಂಬೇಡ್ಕರ್ ಅವರ ವಿಚಾರ ಮತ್ತು ಹೋರಾಟಗಳನ್ನು ಸಮರ್ಥವಾಗಿ ಮನ್ನಡೆಸಲು ಆಗಿಲ್ಲ ಎಂಬುದನ್ನು ನಾವು ಇಂಥಲ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ ಅಂಬೇಡ್ಕರ್ ಅವರು ಬಯಸಿದಂತೆ ಅವರ ಹೋರಾಟದ ರಥವನ್ನು ಇರುವಲ್ಲಿಯಾದರೂ ಉಳಿಸುವ ಕೆಲಸವನ್ನು ಮಾಡಿದ್ದೇವೆ ಎಂಬುದನ್ನು ಯೋಚಿಸಿದರೆ ಇದಕ್ಕೂ ಹೌದು ಎಂದು ಧೈರ್ಯವಾಗಿ ಹೇಳುವುದು ಕಷ್ಟವೆ. ಯಾಕೆ ಹೀಗೆ ಎಂದರೆ ಅಂಬೇಡ್ಕರ್ ಅವರ ಕಾಲಕ್ಕೆ ಕಾಣಿಸಿಕೊಂಡಿದ್ದ ಸ್ವ-ಹಿತಾಸಕ್ತಿ, ಅಧಿಕಾರ ಲಾಲಸೆ, ಜವಾಬ್ಧಾರಿಯಿಂದ ನುಣಚಿಕೊಳ್ಳುವ ಗುಣ, ಕಾಳಜಿ ಇಲ್ಲದಿರುವುದು ಇಂಥ ದುಷ್ಟ ಶಕ್ತಿಗಳು ಅಂದಿನಿಂದ ಇಂದಿನವರೆಗೂ ತನ್ನ ಭಾಹುಗಳನ್ನು ಇನ್ನಷ್ಟು ಉದ್ದಕ್ಕೆ ಚಾಚಿರುವುದನ್ನು ಕಾಣುತ್ತಿದ್ದೇವೆ.
ಇದರ ದುಷ್ಪರಿಣಾಮವೆಂದರೆ ಇಂದಿನ ಸಾಮಾನ್ಯ ದಲಿತರು ತಮ್ಮನ್ನು ಉದ್ಧರಿಸುತ್ತೇವೆಂದು ಬಂದ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆ, ರಾಜಕೀಯ ಪಕ್ಷವನ್ನು ಕೊನೆಗೆ ಸಂವಿಧಾನವನ್ನು ನಂಬಲಾರದ ಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ನಾವೇ ಕಾರಣವಾಗಿದ್ದರೂ ಆ ಗೂಬೆಯನ್ನ ಇನ್ಯಾರದೋ ಮೇಲೆ ಕೂರಿಸಿ ನಾವು ಮಾತ್ರ ಪಾರಾಗುತ್ತಿರುವುದು ಇಂದಿನ ಸಮಾನ್ಯ ದಲಿತರಲ್ಲಿ ಇನ್ನಷು ಗೊಂದಲ ಅನುಮಾನಗಳು ಮೂಡುವುದಕ್ಕೆ ಕಾರಣವಾಗಿದೆ.
ಇಂದು ದಲಿತರ ಉದ್ದಾರಕ್ಕಾಗಿ ನಡೆಯುತ್ತಿರುವ ಕೆಲಸಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸುವುದು ಉಚಿತ. ದಲಿತರ ಉದ್ಧಾರವೆಂದರೆ ಯಾರ ಒಬ್ಬರ ಅಣತಿಯಂತೆ ಒಬ್ಬರ ಕೈಯಲ್ಲೇ ನಡೆಯುವ ಕೆಲಸವಲ್ಲ. ಇದರಲ್ಲಿ ದಲಿತೇತರರು ಅಥವಾ ದಲಿತರನ್ನು ಸಮಾನತೆಯಿಂದ ಕಾಣುವ ಮನಸ್ಸಿಲ್ಲದ ಜನರು ಸೇರುತ್ತಾರೆ ಆದರೂ. ನಾನು ಇಲ್ಲಿ ಅವರ ದೋಷಗಳನ್ನು ಇಲ್ಲಿ ಹೇಳದೆ ನಮ್ಮ ಅಂದರೆ ದಲಿರನ್ನು ಉದ್ದರಿಸುತ್ತೇವೆಂದು ಸ್ಥಾಪಿಸಿಕೊಂಡ ನಿಯೋಗಗಳೇನಿವೆ ಅವುಗಳು ಮತ್ತು ಅವುಗಳನ್ನು ಮನ್ನೆಡೆಸುವ ಮುಂದಾಳುಗಳ ದೋಷಗಳ ಬಗ್ಗೆ ಪ್ರಸ್ತಾಪಿಸಲು ಇಷ್ಟಪಡುತ್ತೇನೆ. ಇಂದು ಅನೇಕರು ಒಪ್ಪಿರುವಂತೆ ‘ಸಾವಿರಾರು ವರ್ಷಗಳ ಅಸಮಾನತೆಯನ್ನು ಹೋಗಲಾಡಿಸಲು ಕಳೆದ ಮುಕ್ಕಾಲು ಶತಮಾನದ ವ್ಯವಸ್ತಿತ ಹೋರಾಟ ಹಾಗೂ ಕಾನೂನಿನ ಬೆಂಬಲಗಳು ಇದ್ದಗ್ಯೂ ದಲಿತರ ಸ್ಥಿತಿ ಇನ್ನೂ ಹಾಗೆ ಇದೆ ಎನ್ನುವುದಾದರೆ ಅದಕ್ಕೆ ಹೊರಗಿನ ಕಾರಣಗಳು ಎಷ್ಟಿವೆಯೋ ಒಳಗಿನ ಕಾರಣಗಳು ಅವುಗಳಿಗಿಂತ ಹೆಚ್ಚು ಇವೆ.’ ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಚರ್ಚೆಗಳಲ್ಲಿ ದಲಿತರ ಉದ್ದಾರಕ್ಕೆ ಅಡ್ಡಿಯಾಗಿರುವ ಹೊರಗಿನ ಕ್ರೂರ ಶಕ್ತಿಗಳ ಬಗ್ಗೆ ಚರ್ಚೆಯಾದಷ್ಟು ಒಳಗಿನ ಮುಖವಾಡದ ಕಾಳಜಿಯ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ. ಈಗಲಾದರೂ ಕೂಡ ನಾವೆಲ್ಲ ಧೈರ್ಯದಿಂದ ಅಂತ ವಿಷಗಳ ಬಗ್ಗೆ ಬಹಿರಂಗ ಚರ್ಚೆಯನ್ನು ಬೆಳೆಸುತ್ತಾ ನಿಜವಾದ ಕಾಳಜಿ ಹಾಗೂ ಬದ್ಧತೆ ಹೇಗಿರಬೇಕು ಎಂಬುದನ್ನು ಮನಗಾಣಬೇಕು ಬರೀ ಮನಗಂಡರಷ್ಟೇ ಸಾಲದು ಅದನ್ನು ಪಾಲನೆಮಾಡಬೇಕು.
ಈ ಹಿನ್ನೆಲೆಯಲ್ಲಿ ನಾನು ನಮ್ಮ ಕೆಲವೊಂದು ದೋಷಗಳನ್ನು ಪ್ರಸ್ತಾಪಿಸ ಬಯಸುತ್ತೇನೆ. ಇವುಗಳನ್ನು ನಾನೇ ಮೊದಲಿಗೇನು ಹೇಳುತ್ತಿಲ್ಲ. ಸಾಕಷ್ಟು ಜನ ಅಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ ಇಲ್ಲಿ ಎದುರಾಗುವ ತೊಂದರೆ ಎಂದರೆ ನಾವು ಯಾರಕಡೆ ಬೆರಳು ತೋರುತ್ತೇವೆಯೋ ಅವರು ಇದನ್ನು ಖಡಾಖಂಡಿತವಾಗಿ ಒಪ್ಪಲು ಸಿದ್ಧರಿಲ್ಲ. ಅವರು ಅದಕ್ಕೆ ವಿರುದ್ಧವಾದ ಇನ್ನೋಮದು ವಾದವನ್ನು ಮಂಡಿಸುತ್ತಾರೆ. ಅವರು ಮಂಡಿಸುವ ವಾದ ಸಹಜವಾಗಿ ಆಳುವ ವ್ಯವಸ್ಥೆ ಕಲಿಸಿದ ಪಾಠವೇ ಆಗಿರುತ್ತದೆ. ಇಂಥ ಸಂದರ್ಭಗಳ ಅರಿವಿದ್ದು ನಾನು ಮತ್ತೆ ಆ ಸತ್ಯವನ್ನೇ ಒತ್ತಿ ಹೇಳಬಯಸುತ್ತೇನೆ.
ಅಂದು ಅಂಬೇಡ್ಕರ್ ದಲಿತರ ಉದ್ಧಾರಕ್ಕೆ ಅಗತ್ಯವೆಂದಿದ್ದ ನಿಯೋಗಗಳು ಇಂದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಗೊಂಡಿವೆ. ಇಲ್ಲಿ ನಾನು ಮೂರು ಮುಖ್ಯ ನಿಯೋಗಗಳ ಬಗ್ಗೆ ವಿವರಿಸಲು ಪ್ರಯತ್ನಿಸುತ್ತೇನೆ ಅವುಗಳೆಂದರೆ ಶಿಕ್ಷಣ, ಹೋರಾಟ ಮತ್ತು ಸಂಸದೀಯ ರಾಜಕಾರಣ. ಅಂಬೇಡ್ಕರ್ ದಲಿತರ ವಿಮುಕ್ತಿಗೆ ಇವು ಸಮರ್ಥ ಸಾಧನಗಳೆಂದು ತಿಳಿದೇ ಈ ಬಗ್ಗೆ ತಮ್ಮ ಜೀವನದುದ್ದಕ್ಕೂ ಸಾಕಷ್ಟು ಹೋರಾಟ ನಡೆಸಿ ಒಂದು ಹಂತದ ಪರಿಣಾಮವನ್ನು ಉಂಟು ಮಾಡಿದ್ದರು.
ಶಿಕ್ಷಣ : ಪಾರಂಪರಿಕವಾಗಿ ಶಿಕ್ಷಣದಿಂದ ವಂಚಿತರಾದ ಶೋಷಿತ ಜನಸಮುದಾಯಗಳಿಗೆ ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನ ಮೂಲಕ ದತ್ತವಾದ ಹಕ್ಕುಗಳ ಮೂಲಕ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವುದಾಗಲೇ ಅನೇಕ ಸವಾಲು ಮತ್ತು ಸಮಸ್ಯೆಗಳು ಎದುರಾಗಿವೆ. ಅದರಲ್ಲಿಯೂ ಇಂದು ದಲಿತರ ಮತ್ತು ಶೋಷಿತ ವರ್ಗಗಳು ಶಿಕ್ಷಣದಲ್ಲಿ ಖಾಸಗೀಕರಣದ ದುಷ್ಪರಿಣಾಮಗಳನ್ನು ಅನುಭವಿಸುವಂತಾಗಿದೆ.
? ಶಿಕ್ಷಣ ಕೆಲವು ಉದ್ಯಮಪತಿಗಳು ಹಾಗೂ ರಾಜಕಾರಣಿಗಳ ಕೈವಶವಾಗಿದೆ. ಹಾಗಾಗಿಯೇ ಶಿಕ್ಷಣ ಕ್ಷೇತ್ರದ ಬಹುತೇಕ ಕಾನೂನುಗಳು ಸರ್ವರಿಗೂ ಶಿಕ್ಷಣವೆಂಬ ಸಿಹಿಮಾತಿನೊಳಗೆ ಹಣವಿದ್ದವರಿಗೆ ಮಾತ್ರ ಶಿಕ್ಷಣ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ
? ಸರ್ಕಾರಿ ಶಾಲೆಗಳ ಮೂಲಕ ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ ನೀಡುತ್ತೇವೆಂದು ಹೇಳುತ್ತಲೆ ಏನೇನು ಉಪಯೋಗಕ್ಕೆ ಭಾರದ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಇಲ್ಲೆಲ್ಲ ಗುಣಾತ್ಮಕ ಶಿಕ್ಷಣ ಸಿಗದೇ, ಶಿಕ್ಷಣದಿಂದ ಪಡೆಯಬೇಕಾಗಿದ್ದ ಅವಶ್ಯ ಜ್ಞಾನ ದೊರೆಯದೇ ಕೇವಲ ಅಕ್ಷರಸ್ಥ ನಿರುದ್ಯೋಗಿಗಳ ಕಾರ್ಖಾನೆಗಳಂತಾಗಿವೆ.
ಸಂಸದೀಯ ರಾಜಕಾರಣ : ಸಂಸದೀಯ ವ್ಯವಸ್ಥೆಯಲ್ಲಿ ತಾವು ನೇರವಾಗಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಉದ್ದಾರಕ್ಕೆ ತಾವೇ ಕಾರಣರಾಗುವುದು ಉತ್ತಮ ಎಂಬುದು ಅಂಬೇಡ್ಕರ್ ಅವರೇ ಶೋಧಿಸಿಕೊಂಡ ಸತ್ಯ. ಆದರೆ ಆ ವ್ಯವಸ್ಥೆಯಲ್ಲಿ ಪಾಲ್ಗೊಂಡರೂ ನಿರೀಕ್ಷಿತ ಫಲಿತಗಳು ಹೋಗಲಿ ಅದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಉದಾ : ಇಂದಿನ ಸಂಸದೀಯ ರಾಜಕಾರಣದಲ್ಲಿ ಯಾವುದೇ ರಾಜಕೀಯ ಪಕ್ಷ ದಲಿತರೊಬ್ಬರಿಗೆ ಟಿಕೆಟ್ ನೀಡಿದರೆ ಅದು ಸಾಧನೆ, ಅವರು ಅಲ್ಲಿಂದ ಗೆದ್ದು ಬಂದರೆ ಮಹಾನ್ ಸಾಧನೆ, ಸರ್ಕಾರ ರಚನೆಯಾಗಿ ಅವರಿಗೊಂದು ಸಚಿವ ಸ್ಥಾನ ನೀಡಿದರೆ ಮಹಾನ್ ಮಹಾನ್ ಸಾಧನೆ ಅಂದರೆ ದಲಿತರೊಬ್ಬರು ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರೆ ದಲಿತರ ಉದ್ದಾರಕರು ನಾವು ಎಂದು ಎಲ್ಲಾ ಪಕ್ಷಗಳು ಬಿಂಬಿಸಿಕೊಳ್ಳುತ್ತವೆ. ದುರಂತವೆಂದರೆ ಸ್ವತಃ ಆ ದಲಿತ ರಾಜಕಾರಣಿಯಿಂದಲೆ ನಮ್ಮ ಪಕ್ಷ ಎಷ್ಟು ದಲಿತ ಪರವಾಗಿದೆ ಎಂದು ಹೇಳಿಕೆ ಕೊಡಿಸುತ್ತಾರೆ. ಒಟ್ಟಾರೆ ಇಲ್ಲಿಗೆ ದಲಿತರ ಉದ್ದಾರದ ಕಥೆ ಮುಗಿಯಿತು. ಅಲ್ಲಿಂದ ಮುಂದೆ ನಿಜವಾಗಿ ಉದ್ದಾರವಾಗಲು ಮಾಡಬೇಕಿದ್ದ ಕೆಲಸಗಳು ಹಳೆಯ ಕಾನೂನಿನ ನೆರಳಲ್ಲಿ ನಾಮಕಾವಸ್ಥೆಗೆ ನಡೆಯುತ್ತವೆ. ಒಟ್ಟಾರೆ ಈ ಒಬ್ಬ ಮಂತ್ರಿಯಿಂದ ಇಡೀ ಜನಾಂಗವನ್ನು ನಿಯಂತ್ರಿಸುವ ಅಪಾಯಕಾರಿ ಸಂದರ್ಭಗಳನ್ನು ಎಲ್ಲಾ ರಾಜ್ಯಗಳಲ್ಲೂ ಕಾಣುತ್ತಿದ್ದೇವೆ. ಇನ್ನೂ ಅಪಾಯಕಾರಿ ಸಂಗತಿಗಳೆಂದರೆ ಮಠಕ್ಕೆ ಹಣನೀಡಿದರೆ, ಆ ಜನಾಂಗದ ಪುಣ್ಯಪುರುಷರ ದಿನವನ್ನು ಸರ್ಕಾರಿ ದಿನಾಚರಣೆಯಾಗಿ ಘೋಷಿಸಿದರೆ ಇವೆಲ್ಲವು ಸಮುದಾಯದ ಉದ್ಧಾರದ ನಿಜವಾದ ಕೆಲಸಗಳು
ಹೋರಾಟದ ರಾಜಕಾರಣ ? ಎಲ್ಲಾ ರೀತಿಯ ಶೋಷಕರಿಗೆ ಹೋರಾಟವೇ ಮುಕ್ತಿಯ ಹಾದಿ ಆ ಹೋರಾಟ ಬೀದಿಗಿಳಿದು ಹೋರಾಟ ಮಾಡುವುದಾಗಿರಬಹುದು, ಇಲ್ಲವೆ ವ್ಯವಸ್ಥೆಯೊಳಗಿಂದಲೇ ಹೋರಾಟ ಮಾಡುವುದು ಇರಬಹುದು. ಹೋರಾಟಕ್ಕೆ ಸಂಘಟನೆಗಳು ಬಹುಮುಖ್ಯ. ಈ ಹಿನ್ನೆಯಲ್ಲಿ ಹುಟ್ಟಿಕೊಂಡ ಯಾವುದೇ ಪ್ರದೇಶದ ಸಂಘಟನೆಗಳನ್ನು ನೋಡಿ ಅವು ಕೆಲವು ಸಾಮಾನ್ಯ ಕಾರಣಗಳಿಂದ ವಿಘಟನೆಗೊಂಡು ತಮ್ಮ ಶಕ್ತಿಯನ್ನು ಕಳೇದುಕೊಂಡಿವೆ ಇಲ್ಲ ವಿನಾಶದ ಅಂಚಿಗೆ ಸರಿದಿವೆ. ಆ ಸಾಮಾನ್ಯ ಕಾರಣಗಳು ಹೀಗಿರುತ್ತವೆ- ಸಂಘಟನೆಯಲ್ಲಿ ನನಗೆ ಗೌರವದ ಸ್ಥಾನವಿಲ್ಲ, ಸಂಘಟನೆಯ ಮುಖ್ಯ ಪ್ರವರ್ತಕರು ಪ್ರಭುತ್ವದ ಅಧಿಕಾರಲಾಲಸೆಗೆ ತಮ್ಮ ಸಂಘಟನೆಯನ್ನೇ ಬಲಿಕೊಡುತ್ತಾರೆ.
ದಲಿತರು ಮತ್ತು ಶೋಷಿತರು ಎದುರಿಸುತ್ತಿರುವ ಬಿಕ್ಕಟ್ಟುಗಳು
೧. ಐಂಡೆಂಟಿಟಿ : ಓಬಿಸಿ ರೈತ- ದಲಿತ ಕೃಷಿ ಕಾರ್ಮಿಕ , ದಲಿತ ಅಧಿಕಾರಿ- ಅದೇ ಅಧಿಕಾರಿಯ ಮನೆ ಕೆಲಸದವ, ಅಧಿಕಾರಿ- ಅವನ ಮೂಲ ಊರಿನ ಜನ, ಮೇಲ್ಚಲನೆ ಪಡೆದ ದಲಿತರು ತಮ್ಮ ಮೂಲ ಗುರುತನ್ನು ಹೇಳಿಕೊಳ್ಳಲು ಹಿಂಜರಿಕೆ
೨.ಸೈದ್ದಾಂತಿಕ : ಅಂಬೇಡ್ಕರ್ ವಿಚಾರಗಳಿಗೆ ವಿರುದ್ಧವಾಗಿರುವವರು ನಾವು ಅಂಬೇಡ್ಕರ್ವಾದಿಗಳೆಂದು ಹೇಳಿಕೊಳ್ಳವುದು. ಅಂಬೇಡ್ಕರ್ ಹೇಳಿದ ವಿಚಾರವನ್ನು ಇನ್ನೊಂದು ರೀತಿಯಲ್ಲಿ ಅರ್ಥೈಯಿಸುವುದು ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಉದಾ : ಅಂಬೇಡ್ಕರ್ ರಾಷ್ಟ್ರೀಯವಾದಿಯಾಗಿದ್ದರೆಂದು ವಾದಿಸುವುದು. ದಲಿತ ಬಂಡವಾಳಶಾಹಿತ್ವವನ್ನು ಪ್ರತಿಪಾದಿಸುವುದು. ಬ್ರಾಹ್ಮಣಶಾಹಿಯನ್ನು ಮಾತ್ರ ತೆಗಳಿ ಉಳಿದ್ದನ್ನು ಹಾಗೆ ಉಳಿಸಿಕೊಳ್ಳುವುದು. ಜಾಗತೀಕರಣವನ್ನು ಬೆಂಬಲಿಸುವುದು
೩. ನಾಯಕತ್ವ : ವೈಯುಕ್ತಿಕ ನಾಯತ್ವಕ್ಕೆ ಮನ್ನಣೆ. ದಲಿತ ನಾಯಕತ್ವ ಮುಖ್ಯ ಅದು ಹೇಗಾದರೂ ಫಲಿಸಲಿ ಅದು ಮೇಲ್ವರ್ಗದವರಿಂದ ದಾನ ಪಡೆದು ಅವರಿಗೆ ನಿಷ್ಟರಾಗಿ ನಡೆದರೂ ಸೈ
೪.ರಾಜಕಾರಣ : ದಲಿತರನ್ನು ರಾಜ ಕಾರಣ ಓಟ್ ಬ್ಯಾಂಕಾಗಿ ಹಿಡಿದಿಟ್ಟುಕೊಂಡಿದೆ. ಅಧಿಕಾರ ದಲಿತರ ಉದ್ದಾರಕ್ಕೆ ಅನಿವಾರ್ಯ ಅದನ್ನು ಹೇಗಾದರೂ ಪಡೆದು ಬಿಡಬಹುದು. ಹೋರಾಟದ ರಾಜಕಾರಣ- ಸಂಸದೀಯ ರಾಜಕಾರಣ
೫. ನೈತಿಕತೆ : ಬೌದ್ಧ ಧರ್ಮ ದಲಿತರಲ್ಲಿ ನೈತಿಕ ಜಾಗೃತಿಗೆ ಕಾರಣವಾಗಬೇಕು ಎಂದ ಅಂಬೇಡ್ಕರ್ ಮಾತು ಯಾವುದೇ ಮಾನ್ಯತೆ ಇಲ್ಲದೆ ಮತ್ತದೆ ಹಳೆಯ ಜಾಡಿನಲ್ಲಿ ನಡೆದಿದೆ
೬. ಸಂಘಟನೆ : ಜಾತಿಯನ್ನು ಮೀರಿದ ಚಳುವಳಿ ಮಾತ್ರ ಅಂಬೇಡ್ಕರ್ ಕಂಡ ಕನಸಿನ ಸಮಾಜವನ್ನು ಕಟ್ಟಬಹುದು ಆದರೆ ದಲಿತ ಚಳವಳಿಗಳು ಅದನ್ನು ಮೀರಲಾಗದೆ ಹಲವು ಜಾತಿಗಳನ್ನು ಸೇರಿಸಿಕೊಂಡು ಮುಂದುವರೆಯಲು ನೋಡಿದವು ಅದು ಹಿಂದಿನ ಹಾದಿಯ ಭಿನ್ನ ಜಾಡಾಯಿತು ಅಷ್ಟೇ
೭. ದಿನನಿತ್ಯದ : ಭೂಹೀನ ದಲಿತರ ಸಂಖ್ಯೆ ಹೆಚ್ಚಳ. ವಿಮೋಚನೆಗೆ ಇರುವ ಏಕೈಕ ದಾರಿ ಎನಿಸಿದ್ದ ಶಿಕ್ಷಣ ಖಾಸಗೀಕರಣ. ಮೀಸಲಾತಿ ನೀತಿ ವಿರೂಪಗೊಂಡು ಒಟ್ಟು ದಲಿತರಲ್ಲಿ ೯-೧೦% ರಷ್ಟು ಜನ ಮಾತ್ರ ಇದರ ಲಾಭ ಪಡೆದಿದ್ದಾರೆ.
ಅಂಬೇಡ್ಕರ್ ಅವರ ವಿಚಾರಗಳು ಇಂದು ಎಲ್ಲಾ ಪ್ರದೇಶ, ಧರ್ಮ, ಸಮುದಾಯ, ವರ್ಗ ಹಾಗೂ ವ್ಯಕ್ತಿಗಳಿಗೆ ಒಂದು ರಕ್ಷಣಾ ಕವಚವಾಗಿ ಬಳಕೆಯಾಗುತ್ತಿದೆ : ರಾಜಕಾರಣ, ಸಾಮಾಜಿಕ ಸಂಸ್ಥೆಗಳು, ನೌಕರರ ಸಂಘಟನೆಗಳು, ಅಕಾಡೆಮಿಕ್ಸ್, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು, ವೃತ್ತಿಪರ ಸಂಘಟನೆಗಳು, ದಲಿತ ಜನಾಂಗ, ಸರ್ಕಾರೇತರ ಸಂಸ್ಥೆಗಳು, ಚಳವಳಿಗಾರರು ಮತ್ತು ಬುದ್ಧಿ ಜೀವಿಗಳು, ಜನ ಸಾಮಾನ್ಯರು
ಬಂಧುಗಳೇ, ಇಂದು ನಾವು ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ಈ ಸಮಾಜದ ಶೋಷಿತ ಸಮುದಾಯಗಳ ಬಿಡುಗಡೆ ಆ ಮೂಲಕ ಅವುಗಳ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವಗಳು ಮೇಳೈಸಿದ ಸುಖ ಜೀವನದ ನಿರ್ಮಾಣದ ಬಗ್ಗೆ ಚಿಂತಿಸಿದ್ದೇವೆ.
? ಶೋಷಿತ ಸಮುದಾಯಗಳು ತಮಗಿರುವ ಅನಂತ ಅಡೆತಡೆಗಳನ್ನು ಡಾಟಿ ಮುನ್ನಡೆಯಬೇಕು ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾವಿಲ್ಲ. ಆದರೆ ಆ ಕೆಲಸ ಯಾರು? ಹೇಗೆ ? ಮಾಡಬೇಕು ಎಂಬುದಷ್ಟೇ ಇಲ್ಲಿರುವ ಬಹು ಮುಖ್ಯ ಪ್ರಶ್ನೆ ಈ ಬಗ್ಗೆ ನಾವು ಹೆಚ್ಚು ಗಂಭೀರವಾಗಿ ಚಿಂತಿಸಬೇಕಿದೆ.
? ಯಾಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಸಮಾಜವನ್ನು ಉದ್ದರಿಸಲೆಂದು ನಾನು ದುಡಿಯುತ್ತೇನೆ ಎಂದು ಮುಂದೆ ಬರುವ ಯಾವ ವ್ಯಕ್ತಿ ಅಥವಾ ಸಂಸ್ಥೆಯನ್ನು ನಂಬಿಕೆಯಿಂದ ನೋಡು ಕಾಲದಲ್ಲಿ ನಾವಿಲ್ಲ. ಏಕೆಂದರೆ ಈವರೆಗೂ ನಡೆದಿರುವ ಪ್ರಯತ್ನಗಳಲ್ಲಿ ಬಹುತೇಕ ಸಮುದಾಯಗಳನ್ನು ಉದ್ದಾರಮಾಡುವುದಕ್ಕಿಂತ ತಾವು ಸ್ವಂತ ಉದ್ದಾರವಾಗಿರುವದೇ ಹೆಚ್ಚು.
? ಅಂಬೇಡ್ಕರ್ ಅವರನ್ನು ನಾವು ಎಷ್ಟು ಗೌರವಿಸುತ್ತೇವೆ ಎಂದರೆ ಅವರ ವಿಚಾರಗಳ ಗ್ರಹಿಕೆ ಮತ್ತು ಆಚರಣೆಗಿಂತ ಅವರ ಕೀರ್ತಿ ಮತ್ತು ಪೂಜೆಯೇ ಮುಖ್ಯವಾಗಿದೆ.
? ವಿಮರ್ಶೆಯಿಲ್ಲದ ಆರಾಧನೆ ಅಂಬೇಡ್ಕರ್ ಮತ್ತು ಅವರ ಚಿಂತನೆಗಳಿಂದ ಪಡೆಯಬಹುದಾಗಿದ್ದ ಲಾಭಗಳನ್ನು ತಪ್ಪಿಸಿವೆ
* ಅಂಬೇಡ್ಕರ್ ತಮ್ಮ ಜೀವಮಾನದುದ್ದಕ್ಕೂ ಈ ದೇಶದ ಧೀನ ದಲಿತರ ಶೋಷಿತರ ಉದ್ಧಾರಕ್ಕಾಗಿ ದುಡಿದರು ಆದರೆ ಅವರ ಹೋರಾಟದ ಪ್ರಯತ್ನಗಳು ಕೂಡ ಅವರ ಕಾಲಕ್ಕೆ ಕೊನೆಗೊಳ್ಳಲಿಲ್ಲ. ಹಾಗಾಗಿ ಅವರು ಈ ಹೋರಾಟ ನಿರಂತರವಾಗಿರಬೇಕೆಂದು ಬಯಸಿದರು. ಆದರೆ ಅವರ ಮುಂದಿನ ತಲೆಮಾರಿನ ನಾವು ಅವರ ಹಾಗೆ ನಿಷ್ಟೆ ಹಾಗೂ ಬದ್ಧತೆಗಳಿಂದ ಹೋರಾಟಗಳನ್ನು ನಡೆಸಿದ್ದೇವೆ ? ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರವನ್ನು ಹೇಳಬೇಕಿದೆ.
ಅಂಬೇಡ್ಕರ್ ವಾದಿಗಳ ಮುಂದಿರುವ ಸವಾಲುಗಳು
ಅ. ಅಂಬೇಡ್ಕರ್ ವಾದದ ಪುನರ್ ವ್ಯಾಖ್ಯಾನ
೧. ಅಂಬೇಡ್ಕರ್ ವಾದವನ್ನು ದಲಿತ ಜನತೆಯ ಹೋರಾಟಕ್ಕೆ ಮಾರ್ಗದರ್ಶಿಯಾಗುವಂತೆ ಪುನರ್ ನಿರ್ಮಿಸುವುದು
೨. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಲ್ಲ. ದಲಿತರ ಗುರಾಣಿ, ರಕ್ಷಣಾ ಕವಚ
೩. ಇದು ಬಹಳ ದುರುಪಯೋಗವಾಗಿದೆ. ಮಲಿನ, ವಿರೂಪ, ಮೊಂಡು, ತುಕ್ಕು ಹಿಡಿದಿವೆ. ಅದನ್ನು ರಿಪೇರಿ ಹರಿತಗೊಳಿಸು
೪. ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ತಕ್ಕಂತೆ ನಿರ್ವಚಿಸಿಕೊಳ್ಳಬೇಕು. ಹೀಗೆ ಪುನರ್ ನಿರ್ಮಿಸಿಕೊಳ್ಳುವ ಹಾದಿಯಲ್ಲಿ ಅದರ ಮಿತಿಗಳನ್ನು ಅರಿತು ಅವನ್ನು ಮೀರಲು ಯತ್ನಿಸಬಹುದು. ಇಂಥ ಪುನರ್ ನಿರ್ಮಾಣವು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿರಬೇಕು
ಆ . ದಲಿತ ಚಳವಳಿಗಳ ವಿಮರ್ಶೆ
೧. ಮೂಲ ಉದ್ದೇಶ ಮತ್ತು ಗುರಿ ಏನು
೨. ಜಾತಿ ನಾಶವೇ/ ನಿರ್ಮಾಣವೇ
೩. ಜಾತಿಯಾಧಾರಿತ ಸಂಘಗಳನ್ನು ಕಟ್ಟಿ ಜಾತಿ ನಿರ್ಮೂಲನೆ ಮಾಡಬಹುದೇ
೪. ಎಲ್ಲವನ್ನು ಜಾತಿಯಿಂದ ಗ್ರಹಿಸುವ ನಮ್ಮಿಂದ ಜಾತಿ ಹೇಗೆ ನಾಶವಾಗುತ್ತದೆ
೫. ಜಾತಿ ವ್ಯವಸ್ಥೆಯನ್ನು ಸರಿಯಗಿ ಅರ್ಥಮಾಡಿಕೊಂಡಿದ್ದೇವೆಯೆ
೬. ನಮ್ಮ ನಿಜವಾದ ಶತೃಗಳು ಯಾರು
೭. ನಾವು ಯಾರ ಬಗ್ಗೆ ಹೋರಾಡುತ್ತೇವೆಯೋ ಅವರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇದೆಯೇ
ಇ. ಸಂಘಟನೆಗಳು ಪ್ರಭುತ್ವದ ಜೊತೆ ಯಾವ ರೀತಿಯ ಸಂಬಂಧವನ್ನು ಬೆಳಸಬೇಕು
೧. ಸಂವಿಧಾನದ ಅಣತಿಯಂತೆ ನಡೆಯುತ್ತವೆ ಎಂಬ ನಂಬಿಕೆಯೊಂದಿಗೆ ನಿಶ್ಚಿಂತೆಯಿಂದರದೆ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಎಷ್ಟು ವಿಚಾರಗಳು ಸಂವಿಧಾನದೊಳಗೆ ಸ್ಥಾನ ಪಡೆದವು ಎಂಬುದನ್ನು ಸರಿಯಾಗಿ ಚಿಂತಿಸಬೇಕು
೨. ದಲಿತರು ಭೂತದ ಗುಹೆಯೊಳಗೆ ಕುಳಿತಿದ್ದು ಅವರನ್ನು ವರ್ತಮಾನಕ್ಕೆ ಎಳೆದು ತಂದು ಭವಿಷ್ಯದ ಕಡೆಗೆ ಮುಖಮಾಡಿಸಬೇಕಿದೆ
ಸಮಾಜಕ್ಕೆ ಮರಳಿ ಕೊಡುವ ಪ್ರಕ್ರಿಯೆ
ನಮ್ಮಲ್ಲಿ ನಡೆದೆ ಇಲ್ಲ. ಅಷ್ಟೇ ಅಲ್ಲ ಇನ್ನು ಮುಂದೆ ಬರುವುದು ಕೂಡ ನಮಗೇ ಬೇಕೆಂಬ ವಿಚಿತ್ರ ಆಸೆ ನಮ್ಮದಾಗಿದೆ. ನಮ್ಮ ಈ ವಿಚಿತ್ರ ಮನೋಭಾವನೆಯೇ ದಲಿತರ ಹಿಂದುಳಿಯುವಿಕೆಗೆ ಒಂದು ಕಾರಣವಾಗಿದೆ.
* ವಿಳಾಸ : ಎಸ್.ಎಂ. ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ), ಶಿವಮೊಗ್ಗ- ೫೭೭೨೦೩, ದೂ : ೯೪೪೮೬೪೦೧೧೪, ಈ ಮೇಲ್ ? smmuಣhಚಿiಚಿh@gmಚಿiಟ.ಛಿom, ಬ್ಲಾಗ್ ? ಞiಟಚಿಡಿisಚಿmsಞಡಿuಣhi.bಟogsಠಿoಣ.ಛಿom
Tuesday, 27 January 2015
ತೊಗಲುಗೊಂಬೆಯಾಟ : ಪರಂಪರೆ ಮತ್ತು ಆಧುನಿಕತೆ*
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ಚಿತ್ರದುರ್ಗ ನಗರದಲ್ಲಿ ಇಂದು ಆಯೋಜನೆಗೊಂಡಿರುವ ಯಕ್ಷಗಾನ ಬಯಲಾಟ ರಂಗಸಂಭ್ರಮ ಎಂಬ ಈ ವಿಶಿಷ್ಟ ಕಾರ್ಯಕ್ರಮದ ಮೊದಲ ಗೋಷ್ಟಿಯ ಅಧ್ಯಕ್ಷರಾದ ಪ್ರೊ. ಎಚ್.ಲಿಂಗಪ್ಪನವರೆ, ಗೋಷ್ಟಿಯಲ್ಲಿ ಉಪಸ್ಥಿತರಿರುವ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರು ಹಿರಿಯರೂ ಆಗಿರುವ ಪಿ. ತಿಪ್ಪೇಸ್ವಾಮಿಯವರೇ, ಚಿತ್ರದುರ್ಗ ಶಿಕ್ಷಕರ ತರಬೇತಿ ಕೇಂದ್ರದ ಸಹ ನಿದೇರ್ಶಕರಾದ ಎಸ್.ಎನ್.ಕುಮಾರ್ ಅವರೆ, ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿರುವ ಎಲ್ಲಾ ಆಹ್ವಾನಿತ ಗಣ್ಯರೇ, ಕಲಾಸಕ್ತ ಬಂಧುಗಳೆ, ಮಾದ್ಯಮದ ಮಿತ್ರರೆ ನಿಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು.
ಬಂಧುಗಳೆ ನಮ್ಮ ಚಿತ್ರದುರ್ಗ ಇತಿಹಾಸ ಹಾಗೂ ಸಂಸ್ಕೃತಿಯ ವಿಷಯದಲ್ಲಿ ಶ್ರೀಮಂತ ಪರೆಂಪರೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಂಥ ಮಹತ್ವದ ನೆಲದಲ್ಲಿ ನಾಡಿನ ವಿಭಿನ್ನ ಜನಪದ ಕಲೆಗಳ ಬಗೆಗಿನ ಚರ್ಚೆ ಹಾಗೂ ಪ್ರರ್ಶನಗಳನ್ನು ಏರ್ಪಡಿಸುವುದರ ಮೂಲಕ ಈ ಭಾಗದ ಜನರಿಗೆ ಸಮಾಜಿಕ ಹಾಗೂ ಕಲಾ ಜಾಗೃತಿಯನ್ನು ಜೊತೆಗೆ ಮನೋರಂಜನೆಯನ್ನು ನೀಡಬಹುದಾದ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ, ಹಾಗೂ ಅವರ ಸದಸ್ಯರೆಲ್ಲರಿಗೂ ಚಿತ್ರದುರ್ಗ ಪ್ರದೇಶದ ಎಲ್ಲಾ ಜನರ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು.
ಸರ್ಕಾರ ಅಥವಾ ಸಂಘ ಸಂಸ್ಥೆಗಳ ವತಿಯಿಂದ ನಡೆಯುವ ಇಂಥ ಕಾರ್ಯಕ್ರಮಗಳಲ್ಲಿ ಕಲೆಗಳ ಬಗೆಗಿನ ಕೇವಲ ಚರ್ಚೆಯೋ ಅಥವಾ ಬರೀ ಪ್ರದರ್ಶನವೂ ನಡೆಸುವುದುಂಟು. ಆದರೆ ಈ ಕಾರ್ಯಕ್ರಮದಲ್ಲಿ ಕಲೆಯ ಬಗ್ಗೆ ಮಾಹಿತಿಪೂರ್ಣ ಚರ್ಚೆ ಹಾಗು ಕಲೆಯ ಪ್ರದರ್ಶನ ಒಟ್ಟೊಟ್ಟಿಗೆ ನಡೆಯುತ್ತಿರುವುದು ವಿಶೇಷ. ಇದರ ಭಾಗವಾಗಿ ಈ ದಿನ ಮಧ್ಯಾಹ್ನ ೨ ಗಂಟೆಗೆ ತುಮಕೂರು ಜಿಲ್ಲೆಯ ಪುಟ್ಟ ಶಾಮಯ್ಯ ಅವರ ತಂಡದ ವತಿಯಿಂದ ತೊಗಲುಗೊಂಬೆಯಾಟ ನಡೆಯಲಿದೆ. ಅದಕ್ಕೂ ಮೊದಲು ಈಗ ತೊಗಲುಗೊಂಬೆಯಾಟ ಕಲೆಯ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದೆ.
ತೊಗಲುಗೊಂಬೆಯಾಟದ ಸ್ವರೂಪ
ಹೆಸರೇ ಸೂಚಿಸುವಂತೆ ತೊಗಲಿನಿಂದ ಗೊಂಬೆಗಳನ್ನು ತಯಾರಿಸಿ ಅವುಗಳನ್ನು ವ್ಯವಸ್ಥಿತವಾಗಿ ಜೊಡಿಸಿ ರಂಗ ವೇದಿಕೆಯ ಮೇಲೆ ತಂದು ಅವುಗಳ ಮೂಲಕವೇ ಕಥೆಗಳನ್ನು ಪ್ರದರ್ಶಿಸಿ ತೋರಿಸುತ್ತಾರೆ. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ. ಆ ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಒಬ್ಬ ಅನುಭವೀ ಕಲಾವಿದ ಗೊಂಬೆಗಳನ್ನು ಪ್ರದರ್ಶಿಸಿದೆ ಉಳಿದ ಕಲಾವಿದರು ಪರದೆಯ ಹಿಂದೆ ಕುಳಿತು ಆಟಕ್ಕೆ ಅಗತ್ಯವಾದ ಧ್ವನಿ, ಸಂಗೀತ ಮತ್ತಿತರ ಸಹಾಯವನ್ನು ನೀಡುತ್ತಾರೆ. ಪ್ರದರ್ಶನಕ್ಕೆ ಬಿಳಿ ಪರದೆ, ಹಾರ್ಮೋನಿಯಂ, ಮೃದಂಗ, ತಾಳ, ಗೆಜ್ಜೆಗಳು ಅವಶ್ಯಕ. ಈ ಕಲಾವಿದರ ತಂಡ ಹಲವಾರು ಸಂದರ್ಭಗಳಲ್ಲಿ ಒಂದೇ ಕುಟುಂಬದ ಸದಸ್ಯರೇ ಆಗಿರುತ್ತಾರೆ ಎಂಬುದು ಗಮನಾರ್ಹ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಎತ್ತರದ ಮಂಟಪ ರಚಿಸಿ, ಉದ್ದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ. ಈ ಪ್ರದರ್ಶನಗಳು ರಾತ್ರಿ ಇಡೀ ನಡೆಯುವ ಕಾಲವೊಂದಿತ್ತು ಈಗ ಎರಡು ಮೂರು ಗಂಟೆಗಳ ಅವಧಿಗೆ ಸೀಮಿತಗೊಂಡಿದೆ.
ಉದ್ದೇಶಗಳು ಮತ್ತು ಸಂದರ್ಭಗಳು
ತೊಗಲುಗೊಂಬೆಯಾಟ ಮೊಟ್ಟ ಮೊದಲಿಗೆ ಆರಂಭಗೊಂಡಿದ್ದು ಭಕ್ತಿ ಮತ್ತು ಭಾವನೆಗಳ ಹಿನ್ನೆಲೆಯಲ್ಲಿ. ಹಾಗಾಗಿಯೇ ಈ ಆಟದಲ್ಲಿ ಪೌರಾಣಿಕ ಕಥೆಗಳು ಪ್ರಧಾನವಾಗಿದ್ದು ಅವುಗಳ ಮೂಲಕ ಭಕ್ತಿ ಪ್ರಚಾರದ ಉದ್ದೇಶವಿತ್ತು. ಈ ಕಲೆಯನ್ನು ಪ್ರದರ್ಶಿಸುವವರನ್ನು ದೈವ ಸ್ವರೂಪಿ ಎಂಬುದಾಗಿ ಭಾವಿಸಲಾಗಿತ್ತು. ಗೊಂಬೆ ಆಟದವರು ಊರು ಪ್ರವೇಶಿಸಿದರೆ ಅವರನ್ನು ಕೇವಲ ಹೊಟ್ಟೆ ಹೊರೆಯಲು ಬಂದ ಭಿಕ್ಷುಕರಂತೆ ಕಾಣುತ್ತಿರಲಿಲ್ಲ. ಗೊಂಬೆಯಾಟದವರು ಊರಿಗೆ ಪ್ರವೇಶಿಸಿದರೆ ಅವರು ಒಲೆ ಹಚ್ಚುತ್ತಿರಲಿಲ್ಲ. ಜಾತಿ ಶ್ರೇಣೀಕರಣ ಇವರಿಗೆ ಅಡ್ಡಿ ಉಂಟುಮಾಡುತ್ತಿರಲಿಲ್ಲ. ಕೊಡುವ ಧನ-ಧಾನ್ಯಗಳನ್ನು ಮೀಸಲಿರಿಸಿ ಗೌರವದಿಂದ ಸಮರ್ಪಿಸುತ್ತಿದ್ದರು. ತೊಗಲುಗೊಂಬೆಯಾಟಗಳು ಏರ್ಪಾಟಾಗುತ್ತಿದ್ದ ಸಂದರ್ಭಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಮಳೆ-ಬೆಳೆಗಾಗಿ, ಜನ ಜಾನುವಾರುಗಳ ಕ್ಷೇಮಕ್ಕಾಗಿ, ಊರಿನ ಉಲುಸಿಗಾಗಿ, ಸಂತಾನ ಪ್ರಾಪ್ತಿಗಾಗಿ, ಸ್ವರ್ಗ ಪ್ರಾಪ್ತಿಗಾಗಿ, ದೆವ್ವ ಪ್ರೇತಗಳ ಉಚ್ಛಾಟನೆಗಾಗಿ, ಹಬ್ಬ ಹರಿದಿನ, ಜಾತ್ರೆ-ಉತ್ಸವ ಮೊದಲಾದ ಧಾರ್ಮಿಕ ಆಚರಣೆಗಳ ಭಾಗವಾಗಿ ತೊಗಲುಗೊಂಬೆಯಾಟ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇಂಥ ಸಂದರ್ಭಗಳಲ್ಲೆಲ್ಲ ಈ ಕಲೆ ಶುದ್ಧ ದೈವ ಸ್ವರೂಪಿ ಕಾರ್ಯವಾಗಿತ್ತು. ಹಾಗಾಗಿಯೇ ಗೊಂಬೆಯಾಟದ ತಂಡಗಳನ್ನು ಕರೆಸಿ ಗೌರವದಿಂದ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಿ ಇರುವವರು ಗೊಂಬೆಗಳನ್ನು ಮಾಡಿಸಿ ಕೊಡುವ ಪರಿಪಾಟವೂ ಇತ್ತು. ವಿವಿಧ ಪುರಾಣ ಪಾತ್ರಗಳ ಗೊಂಬೆಗಳನ್ನು ಮಾಡಿಸಿಕೊಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇತ್ತು. ಇತಿಹಾಸದ ರಾಜಮನೆತನಗಳು ಈ ಗೊಂಬೆಯಾಟದ ಕಲಾವಿದರಿಗೆ ಮತ್ತು ಕಲೆಗೆ ರಾಜಾಶ್ರಯವನ್ನು ನೀಡಿರುವುದು ತಿಳಿದು ಬರುತ್ತದೆ. ಆದರೆ ನಂತರದ ಬದಲಾದ ಕಾಲ ಮಾನದ ಕಾರಣದಿಂದ ಈ ಕಲೆಯು ದೈವೀ ಆಯಾಮವನ್ನು ಕಳೆದುಕೊಂಡು ಕೇವಲ ಮನರಂಜನೆ ಹಾಗೂ ನೀತಿ ಬೋಧನೆಯ ಮಾದ್ಯಮವಾಗಿ ಬದಲಾಯಿತು. ಅದರ ಪರಿಣಾಮವಾಗಿ ವಿವಿಧ ಪುರಾಣಕಥೆಗಳ ಮೂಲಕ ಮನೋರಂಜನೆ ಹಾಗೂ ನೀತಿಬೋಧನೆಯನ್ನು ಮಾತ್ರ ಪ್ರಧಾನವಾಗಿಸಿಕೊಳ್ಳಲಾಯಿತು.
ಕಥೆಗಳ ಮೂಲ
ತೊಗಲುಗೊಂಬೆಯಾಟದ ಕಲೆಯ ಪ್ರದರ್ಶನಗಳಿಗೆ ಪ್ರಧಾನವಾಗಿ ರಾಮಾಯಣ, ಮಹಾ ಭಾರತ, ಭಾಗವತ ಮತ್ತಿತರ ಮೂಲಗಳಿಂದ ಕಥೆಗಳನ್ನು ಬಳಸಿಕೊಳ್ಳುತ್ತಾರೆ. ಆಧುನಿಕ ಸಂದರ್ಭಕ್ಕೆ ಅಗತ್ಯವಾಗಿರುವ ಜಾಗೃತಿ ಕಾರ್ಯಕ್ಕಾಗಿ ಈ ಕಲೆಯನ್ನು ಬಳಸಿಕೊಂಡಿದ್ದರ ಪರಿಣಾಮ ಆ ದೃಷ್ಟಿಯಿಂದ ಹಾಗೂ ಸ್ವತಃ ಕಲಾವಿದರ ಹೊಸಕಾಲಕ್ಕೆ ಅನುಗುಣವಾಗಿ ಕಲೆಯನ್ನು ಮರು ರೂಪಿಸುವ ಪ್ರಯತ್ನವಾಗಿ ಕೆಲವು ಸಾಮಾಜಿಕ ಹಾಗೂ ಐತಿಹಾಸಿಕ ಕಥಾ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಲಾ ಪ್ರದರ್ಶನಗಳಿಗೆ ಬಳಕೆಯಾಗುವ ವಸ್ತುಗಳನ್ನು ಈ ಮುಂದಿನಂತೆ ಕಾಣಿಸಬಹುದು.
ರಾಮಾಯಣ : ರಾವಣ ದಿಗ್ವಿಜಯ, ಕೌಸಲ್ಯ ಕಲ್ಯಾಣ, ಪಂಚವಟಿ, ಶತಕಂಠ ರಾವಣ, ಐರಾವಣ-ಮೈರಾವಣ, ವೈಕುಂಟ, ರಾಮಾಯಣ, ಲವ-ಕುಶ
ಮಹಾಭಾರತ : ಭೀಮಸೇನ ಪ್ರತಿಜ್ಞೆ, ಪಾಂಡವ ವಿಲಾಸ, ವಿರಾಟ ಪರ್ವ, ಕೃಷ್ಣಾರ್ಜುನರ ಕಾಳಗ
ಭಾಗವತ : ದೇವಿ ಮಹಾತ್ಮೆ, ಸಮುದ್ರ ಮಂಥನ, ಶಿವ ಜಲಂದರ, ತ್ರಿಪುರ ಸಂಹಾರ, ಕೃಷ್ಣ ಪಾರಿಜಾತ
ಇತರೆ : ರೇಣುಕಾ ಮಹಾತ್ಮೆ, ಸತ್ಯ ಹರಿಶ್ಚಂದ್ರ, ಭಕ್ತ ಮಾರ್ಕಂಡೇಯ
ಜನಪದ : ಚಿತ್ರಕೇತು ಮಹಾರಾಜ, ಸಾರಂಗಧರ, ಸುವರ್ಣವತಿ ಪರಿಣಯ, ಪ್ರಭಾವತಿ, ಮಂಜುಘೋಷ, ಕರಿಭಂಟನ ಕಾಳಗ, ನಗಿಸಿದವರ ಕಥೆ ವಿಧಿವಿಲಾಸ
ಐತಿಹಾಸಿಕ : ಪ್ರವಾದಿ ಬಸವೇಶ್ವರ, ಬಾಪು ಕಥೆ, ಸ್ವತಂತ್ರ ಹೋರಾಟ, ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಮಹಾತ್ಮ ಕಬೀರ,ಸಿಪಾಯಿ ದಂಗೆ
ಸಾಮಾಜಿಕ : ತಾಯಿ ಎದೆ ಹಾಲು, ಕುಟುಂಬ ಯೋಜನೆ, ಜನ ಸಂಖ್ಯಾ ನಿಯಂತ್ರಣ, ಕಬ್ಬಿನ ಮಹಾತ್ಮೆ, ತಂಬಾಕಿನ ದುಷ್ಪರಿಣಾಮ, ಬ್ರೂಣ ಹತ್ಯೆ
ಈ ರೀತಿ ಅನೇಕ ವಸ್ತು ವಿಷಯಗಳನ್ನು ತಮ್ಮ ಆಟದೊಳಗೆ ಸೇರಿಸಿಕೊಂಡು ಸಮಾಜದ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವುದು ತೊಗಲು ಗೊಂಬೆಯಾಟದ ಮಹತ್ವವನ್ನು ಸಾರುತ್ತದೆ. ಈ ಪ್ರಸಂಗಗಳಲ್ಲಿ ಕೆಲವನ್ನು ಕೆಲವು ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿ ಪ್ರದರ್ಶಿಸಲಾಗುತ್ತದೆ. ಉದಾ : ಲವ-ಕುಶ ಪ್ರಸಂಗ ಸಂತಾನ ಪ್ರಾಪ್ತಿಗೆ, ರಾಮಾಯಣದ ಸ್ವರ್ಗಾರೋಹಣ ಪ್ರಸಂಗ ಅಪರಕರ್ಮದ ಕೊನೆದಿನ ಸ್ವರ್ಗ ಪ್ರಾಪ್ತಿಗೆ, ಮಳೆಗಾಗಿ ವಿರಾಟಪರ್ವ, ಊರಿಗೆ ಉತ್ತಮ ಉಲುಸಾಗಲೆಂದು ದೇವಿ ಮಹಾತ್ಮೆ ಇತ್ಯಾದಿ
ಪ್ರಾಚೀನತೆ- ಪ್ರದೇಶ
ತೊಗಲುಗೊಂಬೆಯಾಟದ ಮೂಲ ಚೀನ ಎಂದು ಕೆಲವರು, ಭಾರತ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಬಹಳಷ್ಟು ಜನ ವಿದ್ವಾಂಸರು ಊಹಿಸಿರುವಂತೆ ಭಾರತವೇ ಈ ಕಲೆಯ ಮೂಲ ನೆಲ. ಇಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿರಬಹುದು. ಈ ಕಲೆ ಭಾರತದಲ್ಲಿ ಪುರಾಣ ಕಾಲಕ್ಕಿಂತ ಪೂರ್ವದಲ್ಲೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅನೇಕ ಪರಾವೆಗಳಿವೆ. ಇದರ ಪ್ರಾಚೀನತೆಯನ್ನು ಕ್ರಿ.ಪೂ.೩೦೦೦ ವರ್ಷಗಳಷ್ಟು ಹಿಂದಿನ ಭಗವದ್ಗೀತೆಯ ಕಾಲಕ್ಕೆ ಗುರುತಿಸಲಾಗಿದೆ. ಜರ್ಮನಿಯ ವಿದ್ವಾಂಸರು ಹೇಳುವಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೊಗಲುಗೊಂಬೆ ಆಟ ಶಬ್ದದ ಉಲ್ಲೇಖವಿದೆ. ಮಹಾಭಾರತ ಗ್ರಂಥದಲ್ಲೂ ಇದರ ಪ್ರಸ್ತಾಪವಿದೆ. ಈ ಆಟವನ್ನು ಕಿಳ್ಯೇಕ್ಯಾತರು ಸಮುದಾಯ ತಮ್ಮ ಪಾರಂಪರಿಕ ಕಲೆಯಾಗಿಸಿಕೊಂಡಿದ್ದು, ಈ ಕಿಳ್ಳೇಕ್ಯಾತರ ಮೂಲ ಪುರುಷ ಪಾಂಡವರ ಜೊತೆ ವನವಾಸ ಮಾಡಿದನೆಂಬುದು ನಂಬಿಕೆ. ಮೂಲತಃ ತಮಿಳುನಾಡಿನ ಮೂಲದ ಈ ಕಲೆ ಕರ್ನಾಟಕಕ್ಕೆ ಸಮುದಾಯಗಳ ಮೂಲಕ ವಲಸೆ ಬಂದಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡದ ಧನಪಾಲನ ತಿಲಕಮಂಜರಿ, ವಿದ್ಯಾರಣ್ಯರ ಪಂಚಾದಶಿ, ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ, ಭೀಮ ಕವಿಯ ಬಸವ ಪುರಾಣ, ನೇಮಿಚಂದ್ರನ ನೇಮಿನಾಥ ಪುರಾಣ ಗಳಲ್ಲಿ ತೊಗಲುಗೊಂಬೆಯಾಟದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಕನ್ನಡದ ವಚನಯುಗದಲ್ಲಿ ಅನೇಕ ವಚನಕಾರರು ಈ ಕಲೆಯ ಬಗ್ಗೆ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಲಕೇತ ಬೊಮ್ಮಯ್ಯ ಎಂಬ ವಚನಕಾರನಿದ್ದು ಅವನು ತೊಗಲುಗೊಂಬೆಯಾಟದ ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದವನಾಗಿರಬಹುದೆಂದು ಊಹಿಸಲಾಗಿದೆ.
ಭಾರತದ ಮಹಾರಾಷ್ಟ್ರ, ಓರಿಸ್ಸಾ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮೊದಲಾದ ರಾಜ್ಯಗಳಲ್ಲಿ, ಕರ್ನಾಟಕದ ಧಾರವಾಡ(ಕಿಳ್ಳೇಕ್ಯಾತರ ಆಟ), ಕೋಲಾರ,ಬಳ್ಳಾರಿ, ರಾಯಚೂರು ಬೀದರ್ (ತೋಲುಬೊಮ್ಮಲಾಟ), ಗುಲ್ಬರ್ಗಾ(ಕಟಬರಾಟ), ಬೆಳಗಾವಿ-ಕಾರವಾರ( ಚಿತ್ರಮರಾಟಿಗರು,ಕಥಾನಾಯಕರಾಟ), ಹಳೆ ಮೈಸೂರು ಭಾಗ (ಗೊಂಬೆರಾಮರಾಟ)ದ ಜಿಲ್ಲೆಗಳಲ್ಲಿ ಈ ಕಲೆ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಈ ಕಲೆಯನ್ನು ಉತ್ತುಂಗಕ್ಕೇರಿಸಿದ ಅನೇಕ ಕಲಾವಿದರಿದ್ದು ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ ಕರ್ನಾಟಕದ ಪ್ರಮುಖ ಕಲಾವಿದರು : ಹೊಂಬಯ್ಯ, ಗುಡ್ಡಪ್ಪ ಶಟವಾಜಿ, ಎಡ್ರಮ್ಮನಹಳ್ಳಿ ಭರಮಪ್ಪ, ಶಿಂದೆ ರಾಮಮೂರ್ತಿ, ಮೊರನಾಳದ ಭೀಮವ್ವ, ದೊಡ್ಡಬಾಳಪ್ಪ, ಬೆಳಗಲ್ಲು ವೀರಣ್ಣ, ಹನುಮಂತಯ್ಯ, ಹೊಂಬಯ್ಯ, ಅಪ್ಪಾಜಿ, ಬಡೇಲಡುಕಿನ ಕೆ. ತಿಪ್ಪೇಸ್ವಾಮಿ ಮೊದಲಾದವರು. ಇನ್ನೂ ಜಗತ್ತಿನ ಚೀನಾ, ಟರ್ಕಿ, ಗ್ರೀಸ್, ಥೈಲ್ಯಾಂಡ್, ಮಲೇಷಿಯ, ಇಂಡೋನೇಷಿಯಾ, ಪರ್ಷಿಯಾ, ಇಟಲಿ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತೊಗಲು ಗೊಂಬೆಯಾಟ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ವಿದೇಶಗಳಲ್ಲಿ ತೊಗಲುಗೊಂಬೆಯಾಟಕ್ಕೆ ಅನೇಕ ವೃತ್ತಿಪರ ಸಂಸ್ಥೆಗಳು ತೊಡಗಿಸಿಕೊಂಡಿವೆ.
ತೊಗಲು ಗೊಂಬೆಯಾಟದ ಇಂದಿನ ಸ್ಥಿತಿಗತಿ
ಎಲ್ಲಾ ಕಲೆಗಳಿಗೆ ಆಧುನಿಕತೆ ತಂದೊಡ್ಡಿದ ಸವಾಲು ಹಾಗೂ ಸಂಕಟಗಳನ್ನು ಈ ಕಲೆಗೂ ತಂದಿದೆ. ಒಂದು ಕಾಲಕ್ಕೆ ಅಪಾರ ಸಂಖೆಯ ಕಲಾವಿದರು ಮತ್ತು ಕಲಾ ತಂಡಗಳು ಇದದ್ದು ಈಗ ಕೇವಲ ನೂರರ ಒಳಗಿದೆ. ಒಂದು ಸಮೀಕ್ಷೆಯ ಪ್ರಕಾರ ೧೯೮೮ ರಲ್ಲಿ ೧೬೭ ತೊಗಲು ಗೊಂಬೆಯಾಟದ ತಂಡಗಳಿದ್ದು ಅವುಗಳ ಸಂಖ್ಯೆ ಈಗ ಕ್ಷೀಣಿಸಿ ಬೆರಳೆಣಿಕೆಯಷ್ಟಾಗಿವೆ. ಈ ಕಲೆಯಲ್ಲಿ ಅದ್ಭುತ ಸಾಧಕರೆನಿಸಿದ ಬೆಳಗಲ್ಲು ವಿರಣ್ಣ ಅವರ ಪ್ರಕಾರ ಕರ್ನಾಟಕದಲ್ಲಿ ಒಂದು ಕಾಲಕ್ಕೆ ೧೮೦ ಜನ ತೊಗಲುಗೊಂಬೆ ಕಲಾವಿದರಿದ್ದರು ಆದರೆ ಈಗ ೧೦೦ಕ್ಕೆ ಇಳಿದಿದೆ. ಆಧುನಿಕತೆಯ ವಿದುನ್ಮಾನ ಮಾಧ್ಯಮಗಳು ಮನರಂಜನೆಯ ಅನಂತ ಸಾಧ್ಯತೆಗಳನ್ನು ಸೃಷ್ಟಸಿರುವ ಹಿನ್ನೆಲೆಯಿಂದಾಗಿ ಈ ಆಟವನ್ನು ನೋಡುವ ಪ್ರೇಕ್ಷಕರ ಸಂಖ್ಯೆಯೂ ಕ್ಷೀಣಿಸಿದೆ. ಆಡಿಸುವ ಪ್ರಾಯೋಜಕರು ಇಲ್ಲವಾಗಿದ್ದಾರೆ. ಸರ್ಕಾರದ ಪ್ರೋತ್ಸಾಹವೂ ಅಷ್ಟಕ್ಕಷ್ಟೆ. ಈ ಎಲ್ಲಾ ಕಾರಣದಿಂದಾಗಿ ಈ ಕಲೆಯನ್ನು ನಂಬಿ ಬದುಕುವ ಕುಟುಂಬಗಳು ವೆಚ್ಚದಾಯಕವಾದ ಈ ಕಲೆಯನ್ನು ಮುಂದುವರೆಸಲು ಸಾಧ್ಯವಾಗದೆ ಬೇರೆ ವೃತ್ತಿಗಳನ್ನು ಹರಿಸಿ ಈ ಕಲೆಯಿಂದ ದೂರವಾಗಿವೆ. ಒಟ್ಟಾರೆ ಕಲೆಗಳನ್ನು ನೋಡಿ ಆಸ್ವಾದಿಸುವ ಜನ ಮತ್ತು ವಾತಾವರಣವಿಲ್ಲ. ಕಲೆಯನ್ನು ಮುಂದುವರೆಸುವ ಕಲಾವಿದರಿಲ್ಲ. ಕಲೆಗೆ ಬೇಕಾದ ಅಗತ್ಯ ಸಾಮಾಗ್ರಿ ಮತ್ತು ಕುಶಲತೆಯಿಲ್ಲ. ಆಧುನಿಕ ಸಂದರ್ಭಕ್ಕೆ ಅನುಗುಣವಾಗಿ ಇರುವ ಕಲೆಗೆ ಮರು ರೂಪಣೆಮಾಡುವ ಮನಸ್ಸು ಮತ್ತು ಕಾರ್ಯಗಳಿಲ್ಲ. ಈ ಕಲೆಗೆ ಬೇಕಾದ ಹಣ ಮತ್ತು ಜನ ಬೆಂಬಲ ಇಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದ ಪಾರಂಪರಿಕ ತೊಗಲು ಗೊಂಬೆಯಾಟ ನಾಶದ ಅಂಚಿಗೆ ತಲುಪಿದೆ.
ತೊಗಲು ಗೊಂಬೆಯಾಟ ಮತ್ತು ಪಾರಂಪರಿಕ ಜ್ಞಾನಗಳು
ತೊಗಲುಗೊಂಬೆಯಾಟದ ಕಲೆಯನ್ನು ಕೇವಲ ಕಲೆಯಾಗಿ ನೋಡುವಂತಿಲ್ಲ. ಅದರ ಹಿನ್ನೆಲೆಗೆ ಅಪಾರವಾದ ಜ್ಞಾನ ಸಂಪತ್ತಿದೆ. ಈ ದೃಷ್ಟಿಯಿಂದ ಗಮನಿಸಬೇಕಾದ ಸಂಗತಿಗಳೆಂದರೆ :
೧. ಗೊಂಬೆಗಳ ನಿರ್ಮಾಣ
೨. ಗೊಂಬೆಗಳ ಸಂರಕ್ಷಣೆ
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
೪. ಚಿತ್ರಕಲೆ
೫. ಬಣ್ಣ ತಯಾರಿಕೆ
೧. ಗೊಂಬೆಗಳ ನಿರ್ಮಾಣ
ಕಲಾವಿದರು ತೊಗಲುಗೊಂಬೆಯಾಟವನ್ನು ಪ್ರದರ್ಶಿಸಲು ಬೇಕಾಗುವ ಗೊಂಬೆ ತಯಾರಿಕೆಗೆ ಬೇರೆ ಯಾರನ್ನೂ ಆಶ್ರಯಿಸದೆ ತಾವೇ ಅಗತ್ಯವಿರುವ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಚರ್ಮವನ್ನು ಹದಮಾಡಿ ಅದಕ್ಕೆ ಒಂದು ರೂಪು ಕೊಡುವುದು ಸಾಮಾನ್ಯ ಕಾರ್ಯವಲ್ಲ. ಎಲ್ಲರಿಗೂ ಬರುವಂತಹದ್ದಲ್ಲ. ಅದನ್ನು ತಮ್ಮ ಅಪಾರ ಶ್ರಮ ಹಾಗೂ ಪ್ರಯತ್ನಗಳಿಂದ ಕಲಿಯಬೇಕಾಗುತ್ತದೆ. ಇದನ್ನು ಕಲಾವಿದರು ದೀರ್ಘಕಾಲದ ಪ್ರಯತ್ನದಿಂದಾಗಿ ಕಲಿಯುತ್ತಾರೆ. ಈ ಗೊಂಬೆತಯಾರಿಸುವ ಕುಶಲತೆ ಇದ್ದವರು ಕಲಾ ಪ್ರದರ್ಶನಗಳು ಕಡಿಮೆಯಾದರೂ ಚಿಂತಿಸಬೇಕಾಗಿಲ್ಲ ಇತ್ತೀಚೆಗೆ ಈ ರೀತಿಯ ಗೊಂಬೆಗಳಿಗೆ ಮಾರುಕಟ್ಟೆಯಲ್ಲಿ (ವಿಶೇಷವಾಗಿ ವಿದೇಶಿಯರಿಂದ) ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಈ ಗೊಂಬೆ ತಯಾರಿಸುವ ಕಲೆಯನ್ನು ಉಪ ಜೀವನಕ್ಕೆ ಆದಾರವಾಗಿಸಿಕೊಳ್ಳಲು ಸಾಧ್ಯವಿದೆ. ಇದು ಕಲೆಯ ಜೊತೆ ನಶಿಸಿದರೆ ಅಷ್ಟರ ಮಟ್ಟಿಗೆ ನಮ್ಮ ಪಾರಂಪರಿಕ ಜ್ಞಾನವನ್ನು ಕಳೆದುಕೊಂಡಂತೆ
೨. ಗೊಂಬೆಗಳ ಸಂರಕ್ಷಣೆ
ಕಲಾವಿದರು ತಾವು ತಯಾರಿಸಿದ ಗೊಂಬೆಗಳನ್ನು ಬಹು ದಿನಗಳವರೆಗೆ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಅದಕ್ಕಾಗಿ ಬಿದಿರಿನ ಪಟ್ಟಿಗೆಗಳ ತಯಾರಿ ಮತ್ತು ವಿವಿಧ ಗಿಡಮೂಲಿಕೆಗಳನ್ನು ಗೊಂಬೆಗಳಿಗೆ ಬಳಿಯುವುದು ಕಲಾವಿದರಿಗೆ ಪರಂಪರೆಯ ಅನುಭವದಿಂದ ಲಭ್ಯವಾದ ಜ್ಞಾನ. ಹಾಗಾಗಿ ಇಂಥ ಜ್ಞಾನವನ್ನು ಉಳಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಈ ಬಗ್ಗೆ ಗಂಭೀರವಾದ ಅಧ್ಯಯನಮಾಡಿ ಸಂರಕ್ಷಣಾ ಪುಟ್ಟಿ ತಯಾರಿಸುವ ಕೌಶಲ, ಗೊಂಬೆಗಳು ಹಾಳಾಗದಂತೆ ಸಂರಕ್ಷಿಸುವ ಆ ಗಿಮೂಲಿಕೆಗಳು ಯಾವುವು ಅವುಗಳನ್ನು ಬಳಸುವ ಕ್ರಮಗಳ ಬಗ್ಗೆ ತಿಳಿದು ಸಮಕಾಲೀನ ಸಮಾಜದ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳುವ ಅವಕಾಶವಿದೆ.
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
ತೊಗಲುಗೊಂಬೆಯಾಟದ ಪ್ರದರ್ಶನದಲ್ಲಿ ಸಂಗೀತದ ಪಾತ್ರ ಹಿರಿದು. ಇದಕ್ಕೆ ಬೇಕಾಗುವ ವಾದ್ಯಪರಿಕರಗಳು ಹಲವಾರು. ಮೃದಂಗ, ಮುಖವೀಣೆ, ಡೋಲು, ಪುಂಗಿ,ತಾಳ, ಪಾವರೆ,ಹಾರ್ಮೋನಿಯಂ, ಕೊಳಲು ವಾದ್ಯಗಳನ್ನು ಬಳಸುತ್ತಾರೆ. ಈ ವಾದ್ಯಗಳನ್ನು ತಾವೇ ತಯಾರಿಸಿಕೊಳ್ಳುವುದು ಸಾಮಾನ್ಯ. ಹಾಗೂ ಅವುಗಳನ್ನು ಸಮರ್ಥವಾಗಿ ನುಡಿಸುವ ಕಲೆಯೂ ಕೂಡ ಕಲಾವಿದರಿಗೆ ಕರಗತ. ಇಲ್ಲಿ ಬಳಸುವ ಸಂಗೀತ ವಾದ್ಯಗಳು ಈ ಕಲೆಯ ಹೊರತಾಗಿಯೂ ಬಳಸ ಬಹುದಾದವು. ಹಾಗಾಗಿ ಇವುಗಳ ತಯಾರಿಕೆ ಮತ್ತು ಬಳಕೆಯ ಕೌಶಲಗಳನ್ನು ಸಮರ್ಥವಾಗಿ ಉಳಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ವಾದ್ಯಗಳಲ್ಲಿ ಪಾವರೆ ವಾದ್ಯ ವಿಶಿಷ್ಟ. ಈ ವಾದ್ಯವನ್ನು ಕಂಚಿನ ಗಂಗಾಳದಿಂದ ಸಿದ್ದಗೊಳಿಸುತ್ತಾರೆ. ಗಂಗಾಳವನ್ನು ನೆಲದ ಮೇಲೆ ಬೋರಲು ಹಾಕಿ ಅದರ ಮೇಲೆ ಮಧ್ಯಭಾಗದಲ್ಲಿ ಮೇಣ ಮೆತ್ತಿ ಹಂಚಿ ಕಡ್ಡಿಯನ್ನು ಅದರಲ್ಲಿ ನೆಟ್ಟು ಎರಡೂ ಕೈಗಳಿಂದ ಉಜ್ಜಿದಾಗ ನಾದ ಹೊರಡುತ್ತದೆ. ಇಂಥ ವಾದ್ಯಗಳನ್ನು ಮುಂದುವರೆಸುವುದು ಪರಂಪರೆಯನ್ನು ಉಳಿಸುವ ಸಮರ್ಥವಾದ ಕಾರ್ಯವೆನಿಸುತ್ತದೆ.
೪. ಚಿತ್ರಕಲೆ
ತೊಗಲು ಗೊಂಬೆಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಚಿತ್ರಕಲೆ ಬಹು ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಚರ್ಮದ ಮೇಲೆ ರೇಖಾ ವಿನ್ಯಾಸ ಮಾಡುವುದು; ರೇಖಾ ವಿನ್ಯಾಸಕ್ಕನುಗುಣವಾಗಿ ಚರ್ಮವನ್ನು ಕತ್ತರಿಸುವುದು; ಬಣ್ಣ ತುಂಬುವುದು ಇತ್ಯಾದಿ ಕಾರ್ಯಗಳು ನಡೆಯುತ್ತವೆ. ಚರ್ಮವನ್ನು ತಮಗೆ ಬೇಕಾದ ಪಾತ್ರದ ಆಕಾರಕ್ಕೆ ಕತ್ತರಿಸಿಕೊಳ್ಳುವುದು ಮತ್ತು ಅದಕ್ಕೆ ಸರಿಯಾದ ಬಣ್ಣದ ಸಂಯೋಜನೆ ಮಾಡುವುದು ಬಹಳ ಮುಖ್ಯ. ಇಲ್ಲಿ ಕಲಾವಿದರ ಚಿತ್ರಕಲಾ ಕೌಶಲ್ಯ ಕಾಣುತ್ತದೆ. ಈ ಚಿತ್ರಕಲೆ ಕಲಾವಿದರ ಪಾರಂಪರಿಕ ಜ್ಞಾನದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಕಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡು ಸಾಗಿ ಬಂದಿದೆ. ಇಂಥ ಜ್ಞಾನವನ್ನು ಕಲೆಯ ಜೊತೆ ಕಳೆದುಕೊಳ್ಳುವುದೆಂದರೆ ನಮಗೆ ಆಗುವ ನಷ್ಟ ಎಂತಹದ್ದು ಎಂಬುದನ್ನು ಚಿಂತಿಸಿದರೆ ಗಾಬರಿ ಹುಟ್ಟಿಸುತ್ತದೆ.
೫. ಬಣ್ಣ ತಯಾರಿಕೆ
ಗೊಂಬೆಗೆ ಲೇಪಿಸು ಬಣ್ಣವನ್ನು ಸ್ವತಃ ಕಲಾವಿದರೇ ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿಕೊಳ್ಳುವುದು ವಿಶೇಷ. ಈ ಕಲೆಯಲ್ಲಿ ಮುಖ್ಯವಾಗಿ ಬಳಸಲ್ಪಡುವ ಬಣ್ಣಗಳೆಂದರೆ ಕೆಂಪು, ಕಪ್ಪು, ಹಳದಿ, ನೀಲಿ, ಸಿಂಧೂರ, ಪಚ್ಚೆ ನೀಲಿ ಇತ್ಯಾದಿ. ಇಷ್ಟೊಂದು ಬಣ್ಣಗಳನ್ನು ತಯಾರಿಸಲು ಕಲಿತ ಇವರ ಜ್ಞಾನ ಎಷ್ಟೊಂದು ಕುತೂಹಲಕಾರಿ? ಈ ರೀತಿ ಪಾರಂಪರಿಕ ಮಾರ್ಗದಲ್ಲಿ ತಯಾರಿಸಿದ ಬಣ್ಣಗಳ ಹೊಳಪು ಮತ್ತು ದೀರ್ಘಕಾಲ ತಾಜಾತನವನ್ನು ಕಾಪಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಹೊಸಕಾಲದ ರಸಾಯನಿಕಗಳನ್ನು ಬಳಸಿದ ಬಣ್ಣಗಳನ್ನು ಬಳಸಿದ ಕಲಾವಿದರಿಗೆ ಅದರ ಪರಿಣಾಮಗಳು ತಿಳಿದವೆ. ಹೊಳಪು ದೀರ್ಘಕಾಲ ಬಾಳಿಕೆ ಬೇಕೆಂದರೆ ಸಾಂಪ್ರದಾಯಿಕ ರೀತಿಯಲ್ಲಿಯೆ ಬಣ್ಣ ತಯಾರಿಕೊಳ್ಳಬೇಕೆಂಬುದು ಸ್ವತಃ ಕಲಾವಿದರ ಅನಿಸಿಕೆ. ಇಲ್ಲಿ ಬಳಸುವ ಪ್ರತಿಯೊಂದು ಬಣ್ಣವನ್ನು ತಯಾರಿಸಲು ಬಳಸಬೇಕಾದ ವಸ್ತುಗಳು ಯಾವುವು ಮತ್ತು ಅದನ್ನು ತಯಾರಿಸು ವಿಧಾನ ಯಾವುದು ಎಂಬುದು ಕಲಾವಿದರೆಲ್ಲರಿಗೂ ಗೊತ್ತಿರುವ ಸತ್ಯವೆ. ಅದರ ಕೆಲವು ಮಾದರಿಗಳನ್ನು ಗಮನಿಸುವುದಾದರೆ :
೧. ಕಪ್ಪು ಬಣ್ಣ ಬೇಕೆಂದರೆ ದೀಪದ ಕಾಡಿಗೆ ಅಥವ ತೆಂಗಿನ ಕಾಯಿಯ ಚಿಪ್ಪನ್ನು ಸುಟ್ಟು ಕರಕು ಮಾಡಿಕೊಳ್ಳಬೇಕು. ಇದನ್ನು ಪುಡಿಮಾಡಿ ನೀರಿನಲ್ಲಿ ಬೆರಸಿ ಅದಕ್ಕೆ ಜಾಲಿಯ ಅಂಟನ್ನು ಬೆರಸ ಬೇಕು. ಅನಂತರ ಅದನ್ನು ಚನ್ನಾಗಿ ಕದಡಿ ಆರುದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಬಿಳಿಬಟ್ಟೆಯಲ್ಲಿ ಸೋಸಬೇಕು. ಹೀಗೆ ತಯಾರಾದ ಕಪ್ಪು ಬಣ್ಣ ವರ್ಷಗಟ್ಟಲೆ ಕೆಡುವುದಿಲ್ಲ.
೨. ಸಿಂಧೂರ ಬಣ್ಣ ಬೇಕೆಂದಾಗ ಮದರಂಗಿ ಮತ್ತು ಸುಣ್ಣವನ್ನು ಬೆರಸಿ ಅದಕ್ಕೆ ಬೇವಿನ ಅಂಟನ್ನು ಸೇರಿಸಿ ಕೆಲವು ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಉಪಯೋಗಿಸುತ್ತಾರೆ
ಹೀಗೆ ತಮಗೆ ಬೇಕಾದ ಎಲ್ಲಾ ತರಹದ ಬಣ್ಣಗಳನ್ನು ತಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಬಗೆಬಗೆಯ ಎಲೆ, ಹೂವು, ಅಂಟುಗಳ ಸಹಾಯದಿಂದ ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಗುಣಮಟ್ಟದಲ್ಲಿ ತಯಾರಿಸಿಕೊಳ್ಳುತ್ತಾರೆ. ಆಧುನಿಕ ಕಾಲದ ಬಣ್ಣಗಳಿಗಿಂತ ಹೆಚ್ಚು ಹೊಳಪು ಮತ್ತು ಬಾಳಿಕೆ ಇರುವ ಬಣ್ಣಗಳನ್ನು ತಯಾರಿಸು ಜ್ಞಾನ ನಮ್ಮಲ್ಲಿರುವಾಗ ಹೆಚ್ಚು ಖರ್ಚಿನ ದೀರ್ಘಕಾಲ ಬಾಳಿಕೆ ಬರದ ಬಣ್ಣಗಳನ್ನು ಯಾಕೆ ಉಪಯೋಗಿಸಬೇಕು ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ.
ನಮ್ಮ ಮುಂದಿರುವ ಸಾಧ್ಯತೆಗಳು
ತೊಗಲುಗೊಂಬೆಯಾಟ ವಿನಾಶದ ಕಡೆಗೆ ಸಾಗಿರುವಾಗ ಅದನ್ನು ಉಳಿಸಬೇಕಾದ ಬಗೆಗಳ ಬಗ್ಗೆ ಚಿಂತಿಸಬೇಕಾದುದು ಇಂದಿನ ತುರ್ತು. ಈ ಬಗ್ಗೆ ಅನೇಕ ವಿದ್ವಾಂಸರು ಬಹಳ ಗಂಭೀರವಾದ ಆಲೋಚನೆಗಳನ್ನು ನಡೆಸಿದ್ದಾರೆ. ಈ ಕುರಿತು ೧೯೮೯ ಫೆಬ್ರವರಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗ ನಡೆಸಿದ ೧೬ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ’ತೊಗಲುಗೊಂಬೆಯಾಟದ ಮೇಲೆ ಆಧುನಿಕತೆಯ ಪರಿಣಾಮ ಮತ್ತು ನವೀಕರಣದ ಸಾಧ್ಯತೆಗಳು’ ಎನ್ನುವ ವಿಷಯ ಕುರಿತು ಮಾತನಾಡುತ್ತಾ ಹಿ.ಚಿ. ಬೋರಲಿಂಗಯ್ಯ ಅವರು ಹೀಗೆ ಹೇಳಿದ್ದಾರೆ :
ಯಾವುದೇ ಕಲೆಗೆ ಹೆಚ್ಚು ಬೆಲೆಸಾಗಬೇಕಾದರೆ ಮತ್ತು ವ್ಯವಸ್ಥಿತವಾಗಿ ನಿಲ್ಲಬೇಕಾದರೆ ವಿದ್ಯಾವಂತರು ಅದರಲ್ಲಿ ಪ್ರವೇಶ ಮಾಡುವುದು ಅನಿವಾರ್ಯ. ಅಂದರೆ ವಿದ್ಯಾವಂತ ಇಲ್ಲಿ “ಕೋರಿಯಾಗ್ರಾಫರ್” ಆಗಿ ಕೆಲಸ ಮಾಡುವುದಷ್ಟೇ ಅಲ್ಲದೆ ಅವರ ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳುವವನಾಗಬೇಕು. ಆದ್ದರಿಂದ ಈ ವಿದ್ಯಾವಂತರು ಹಳ್ಳಿಗಳಲ್ಲಿ ಬೆಳೆದು ಕಲೆಯ ಬಗ್ಗೆ ನಿಜವಾದ ಅಭಿಮಾನ ಇರುವವರಾಗಬೇಕು. ಕಲೆಯ ಪರಂಪರೆಯ ಹಿನ್ನೆಲೆಯ ಸುಧಾರಣೆ ಹೇಗೆ ಮಾಡಬೇಕೆಂಬ ಪರಿಜ್ಞಾನವುಳ್ಳವರಾಗಿರಬೇಕು. ಕರಾವಳಿಯ ಯಕ್ಷಗಾನ ಪ್ರವೇಶದ ನಂತರ ನವೀಕರಣಗೊಂಡ ರೀತಿ ನಮ್ಮೆಲ್ಲರಿಗೂ ಗೊತ್ತೇ ಇದೆ. ಈ ಕ್ಷೇತ್ರಕ್ಕೆ ವಿದ್ಯಾವಂತರು ಪ್ರವೇಶ ಮಾಡುವುದರಿಂದ ಎರಡು ಲಾಭಗಳಿವೆ. ಒಂದು ಕೆಲವು ಅಂಧ ಸಂಪ್ರದಾಯಗಳು ಮತ್ತು ಶೋಷಣಾ ಮೂಲವಾದ ಆಚರಣೆಗಳಿಂದ ಕಲಾವಿದರನ್ನು ಅಥವಾ ಒಟ್ಟಾರೆ ಜನಪದರನ್ನು ವಿಮುಕ್ತಿಗೊಳಿಸುವುದು, ಎರಡು ಹಿಂದೆಯೇ ಹೇಳಿದಂತೆ ಕಲೆಯ ಸುಧಾರಣೆ ಮಾಡುವುದು. ಈ ಮಾತಿಗೆ ಅನೇಕ ವಿರೋಧಗಳು ಬರಬಹುದು ಆದರೆ ಇಂದಿನ ವಿಜ್ಞಾನ ಯುಗದಲ್ಲಿಯೂ ಧರ್ಮ. ದೇವರು ಮತ್ತು ಆಚರಣೆಗಳ ಹಿನ್ನೆಲೆಯಲ್ಲಿಯೇ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಪ್ರಗತಿ ವಿರೋಧಿ ಧೋರಣೆಯೇ ಆಗುತ್ತದೆ. ಅಜ್ಞಾನ ಮತ್ತು ಬಡತನದಿಂದ ನರಳುತ್ತಿರುವ ಭಾರತದಂತ ದೇಶದಲ್ಲಿ ಶೋಷಣಾರಹಿತವಾದ ಸಮಾಜವೊಂದರ ನಿರ್ಮಾಣವಾಗಬೇಕು ಮತ್ತು ಈ ದೇಶದ ಜನರ ಸಂಸ್ಕೃತಿಯ ಪ್ರಮುಖ ಅಂಗಗಳಾದ ಜಾನಪದ ಕಲೆ ಮತ್ತು ಸಾಹಿತ್ಯ ಸಂಗೀತಗಳು ಉಳಿಯಬೇಕು. ಇದು ದೃಂದದಲ್ಲಿರುವ ಮನಸ್ಸೊಂದರ ಆಲೋಚನೆ ಅನ್ನಿಸಿದರೂ ಈ ಎರಡೂ ಆಗಬೇಕಾದುದು ಅಗತ್ಯ. ಇದರ ಜೊತೆಗೆ ಇನೆರಡು ಅಂಶಗಳನ್ನು ಅವರು ಪ್ರಸ್ತಾಪಿಸುತ್ತಾರೆ. ಅವುಗಳೆಂದರೆ- ಸಂಘ -ಸಂಸ್ಥೆಗಳು ಜಾನಪದಕ್ಕಾಗಿಯೇ ಹುಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಸರ್ಕಾರ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ರೀತಿ.
ಪಾಶ್ಚಾತ್ಯ ದೇಶಗಳಂತೆ ಶುದ್ದ ಮನೋರಂಜನೆ ಕಲೆಯಾಗಿಸಿ ವಾಣಿಜ್ಯೀಕರಣಗೊಳಿಸಬೇಕೆ?
ಹೌದು ಈ ಕಲೆಯಯನ್ನು ಮಾತ್ರವಲ್ಲ ಯಾವುದೇ ಕಲೆ ಇಂದಿನ ಸಮಾಜದಲ್ಲಿ ಉಳಿಯಬೇಕಾದರೆ ಅದು ವಾಣಿಜ್ಯೀಕರಣಗೊಳ್ಳಲೇ ಬೇಕು. ಇಲ್ಲವಾದರೆ ಅದಕ್ಕೆ ಉಳಿಗಾಲವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಈ ಕಲೆಯನ್ನು ವಿದೇಶಗಳು ಸ್ವೀಕರಿಸಿ ತಮ್ಮ ಪರಿಸರ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಹೊಂದಿಸಿಕೊಂಡು ಶುದ್ದಾಂಗವಾಗಿ ವಾಣಿಜ್ಯೀಕರಣಗೊಳಿಸಿದೆ. ಹಾಗಾಗಿ ಅಲ್ಲಿ ಗೊಂಬೆಯಾಟಕ್ಕಾಗಿ ಹಲವಾರು ವೃತ್ತಿಪರ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸಾಕಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದು ಬರುತ್ತದೆ. ಈ ಮಾದರಿಯನ್ನು ನಾವು ಸಂಪೂರ್ಣ ಅನುಕರಿಸಬೇಕೆಂದು ಹೇಳಿದರೆ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ ನಮ್ಮ ನೆಲೆದಲ್ಲಿ ಈ ಕಲೆ ಕೇವಲ ಮನೋರಂಜನೆಗೆ ಮೀಸಲಾದ ಕಲೆಯಲ್ಲ. ಬದಲಿಗೆ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ, ಪ್ರೇಕ್ಷಕರಿಗೆ ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವ, ಮಾನವನ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ರೂಪವಾಗಿರುವ ಕಲೆಯಾಗಿದೆ. ಆದ್ದರಿಂದ ನಮ್ಮ ಈ ನೆಲೆದ ತೊಗಲುಗೊಂಬೆಯಾಟ ಕೇವಲ ಮನೋರಂಜನೆಯಾಗದೆ ತನ್ನ ಮೂಲೋದ್ದೇಶಗಳ ಜೊತೆಗೆ ಆಧುನಿಕ ಸಮಾಜಕ್ಕೆ ಮನೋರಂಜನೆಯೊದಗಿಸುವ ಮೂಲಕ ವಾಣಿಜ್ಯೀಕರಣ ಗೊಳ್ಳಬೇಕಿದೆ.
ವಿದ್ಯಾವಂತ ಯುವ ಜನತೆ ಈ ಕಲಾ ಲೋಕಕ್ಕೆ ಪ್ರವೇಶಿಸಿ ಹೊಸ ರೂಪ ಕೊಡಲು ಪ್ರಯತ್ನಿಸಬೇಕೆ?
ಹೌದು ವಿದ್ಯಾವಂತ ಯುವ ಜನ ಪರಂಪರೆ ಮತ್ತು ಅದರ ಜ್ಞಾನಗಳ ಬಗ್ಗೆ ತೀವ್ರವಾದ ತಾತ್ಸಾರ ಹಾಗೂ ನಿರ್ಲಕ್ಷೆ ಮಾಡುತಿದ್ದು ಇದರಿಂದ ಪಾರಂಪರಿಕ ಕಲೆ ಸಾಹಿತ್ಯ ಮತ್ತಿತರ ಜ್ಞಾನ ಧಾರೆಗಳ ಮುಂದುವರಿಕೆಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಹಾಗಾಗಿ ಈ ಸಮುದಾಯ ಜನಪದ ಕಲೆಯಂತಹ ಕ್ಷೇತ್ರಕ್ಕೆ ಆಸಕ್ತಿಯಿಂದ ಪ್ರವೇಶ ಪಡೆದು ನಿಷ್ಟೆ ತೋರಿದರೆ ಖಂಡಿತಾ ಈ ಕಲೆ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮುಂದುವರೆಯುತ್ತದೆ. ಅನಕ್ಷರಸ್ಥ ಕಲಾವಿದರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಈ ಕಲೆಯನ್ನು ಮುಂದುವರೆಸಬಹುದು. ಇಲ್ಲಿ ವಿದ್ಯಾವಂತ ಯುವಕರು ಮಾತ್ರವಲ್ಲ ಇಡೀ ಯುವ ಸಮುದಾಯ ಅಂದರೆ ಹೊಸ ತಲೆಮಾರಿನ ಜನ ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗಬೇಕು ಹೀಗೆ ಆಗುವುದಾದರೆ ತೊಗಲು ಗೊಂಬೆಯಾಟ ಇನ್ನಷ್ಟು ಕಾಲ ನಮ್ಮ ನಡುವೆ ರಿಲೆವೆಂಟಾಗಿ ಉಳಿಯಬಲ್ಲದು.
ಶಿಕ್ಷಣದ ಮಾದ್ಯಮವಾಗಿ ಬಳಸಿ ಕೊಳ್ಳಬೇಕೆ?
ಇಂದು ಶಿಕ್ಷಣ ಕ್ಷೇತ್ರ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಸಮರ್ಥವಾಗಿದೆ. ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಬಹಳಷ್ಟು ಸಹಾಯವನ್ನು ಪಡೆದು ಮನ್ನೆಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಹಳೆಯ ಕಾಲದ ಉಳಿಕೆಯಾಗಿರುವ ತೊಗಲುಗೊಂಬೆಯ ಕಲೆಯನ್ನು ಶಿಕ್ಷಣ ಮಾದ್ಯಮಲ್ಲಿ ಬಳಸಿಕೊಳ್ಳುವುದೆಂದರೆ ಅಸಂಬದ್ಧವೆನಿಸಬಹುದು. ಆದರೆ ಮಕ್ಕಳ ಮನಸ್ಸಿಗೆ ಈ ಗೊಂಬೆಯಾಟ ತೀವ್ರ ಕೂತೂಹಲ ಮೂಡಿಸುವುದರಿಂದ ಇವುಗಳ ಮೂಲಕ ಕಲಿಕೆ ಸುಗಮವಾಗಬಲ್ಲದು.
ನಮ್ಮ ದೇಶ ಸಂಪ್ರದಾಯಬದ್ದವಾಗಿರುವ ಕಾರಣ ಕಲೆಯನ್ನು ಸಾಂಪ್ರದಾಯಿಕ ನೆಲೆಯಲ್ಲಿ ಮುಂದುವರೆಸಬೇಕೆ?
ಕಾಲಕ್ಕೆ ಹೊಂದಿಕೊಂಡಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಕಲೆಯನ್ನು ಉಳಿಸಬೇಕೆಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಬರುತ್ತವೆ. ಗೊಂಬೆಯಾಟದ ಮೂಲಕ ಹೊಸ ಕಾಲದ ಕಥೆ ಹೇಳುವ ಪ್ರಯತ್ನ ಮಾಡುವುದು ಕಲೆಯ ಪುನರುಜ್ಜೀವನದ ನಿಟ್ಟಿನಲ್ಲಿ ನಡೆಯುವ ಒಳ್ಳೆಯ ಪ್ರಯತ್ನವೇನೊ ನಿಜ. ಆದರೆ ಹೀಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಜಾನಪದ ಕಲೆಗಳು ಕಳೆದು ಹೋದದ್ದೆ ಹೆಚ್ಚು. ತಂತ್ರಜ್ಞಾನವನ್ನು ಬಳಸಿಕೊಂಡು ತೊಗಲುಗೊಂಬೆಗೆ ಜೀವ ತುಂಬುವ ಪ್ರಯತ್ನಗಳಾಗುವ ನಿಟ್ಟಿನ ಚಿಂತನೆಗಳು ಸದ್ಯದ ಅಗತ್ಯ.- ಕುಮಾರ ಎಸ್.
ಗೊಂಬೆಯಾಟವನ್ನು ಹೇಗೆ ಹೊಸಕಾಲಕ್ಕೆ ಹೊದಿಸಿಕೊಂಡು ಮುಂದುವರೆಸಬೇಕೆಂಬುದಕ್ಕೆ ಇಂದುಶ್ರೀ ಅವರು ಮಾಡುತ್ತಿರುವ ಡಿಂಕು ಪ್ರಯೋಗ ಮಾದರಿಯೆನಿಸುತ್ತದೆ. ಸಂಗೀತ ಮಾತು ಮತ್ತಿತರ ಅಂಶಗಳಲ್ಲಿ ಆಧುನಿಕ ಸಾಧ್ಯತೆಗಳನ್ನು ಬಳಸಿಕೊಂಡು ಮುಂದುವರೆಸ ಬೇಕಾಗುತ್ತದೆ. ಇದಕ್ಕೆ ಆಧುನಿಕ ವಿಜ್ಞಾ ತಂತ್ರಜ್ಞಾನದ ತಿಳುವಳಿಕೆ ಬೇಕಾಗುತ್ತದೆ.
-ಡಾ. ಎಸ್.ಎಂ. ಮುತ್ತಯ್ಯ
ಚಿತ್ರಗಳು : ಅಂತರ್ಜಾಲದ ಮೂಲದಿಂದ
* ದಿನಾಂಕ : ೧೭.೦೧.೨೦೧೫ ರಂದು ಚಿತ್ರದುರ್ಗದಲ್ಲಿ ನಡೆದ ಯಕ್ಷಗಾನ ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧ
Monday, 26 January 2015
ಬಯಲಾಟದ ನಾದ ಬ್ರಹ್ಮ ಮದ್ದಳೆ ಸಣ್ಣಪಾಲಯ್ಯ
![]() |
| ಮದ್ದಳೆ ಸಣ್ಣ ಪಾಲಯ್ಯ |
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಲಗೇತನಹಟ್ಟಿ ಗ್ರಾಮದ ಬಯಲಾಟದ ಕಲಾವಿದ ಮದ್ದಳೆ ಸಣ್ಣಪಾಲಯ್ಯ ಅವರಿಗೆ ೨೦೧೩-೧೪ ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಈ ಸಂದರ್ಭದ ನೆಪದಲ್ಲಿ ಸುಮಾರು ೭೫ ವರ್ಷದ ಹಿರಿಯ ಕಲಾ ಜೀವಿಯ ಬಗೆಗಿನ ಅವಲೋಕನ ಇಲ್ಲಿದೆ
![]() |
| ತನ್ನ ಶಿಷ್ಯರ ಜೊತೆಯಲ್ಲಿ ಕಲಾವಿದ ಸಣ್ಣ ಪಾಲಯ್ಯ |
ಇವರ ಒಂದು ವಿಶೇಷವೆಂದರೆ ನಲಗೇತನಹಟ್ಟಿ ಸುತ್ತಲಿನ ಬಯಲಾಟದ ಪ್ರದರ್ಶನಗಳನ್ನು ಸಣ್ಣಪಾಲಯ್ಯ ಅವರನ್ನು ಬಿಟ್ಟು ಊಹಿಸಿಕೊಳ್ಳುವುದು ಕಷ್ಟ. ತನ್ನ ಹಟ್ಟಿಯಲ್ಲಿ ಮಾತ್ರವಲ್ಲದೆ ಸುತ್ತ ಮುತ್ತಲಿನ ಹಲವಾರು ಊರುಗಳಲ್ಲಿ ಬಯಲಾಟದ ಪ್ರದರ್ಶನಗಳಲ್ಲಿ ಮದ್ದಳೆ ವಾದಕನಾಗಿ ಭಾಗವಹಿಸಿ ಅವರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ತನ್ನ ಮದ್ದಳೆಯ ಮೂಲಕ ನೂರಾರು ಪ್ರದರ್ಶನಗಳಿಗೆ ಸಾಥ್ ನೀಡಿದ್ದು ಅವುಗಳಲ್ಲಿ ಪ್ರಧಾನವಾಗಿ ಗಿರಿಜಾ ಕಲ್ಯಾಣ, ಇಂದ್ರಜಿತ್ ಕಾಳಗ, ತಾಮ್ರಧ್ವಜ, ರಾಮಾಂಜಿನಯ ಯುದ್ದ, ಐರಾವಣ-ಮೈರಾವಣ, ಶಶಿರೇಖ ಭರಣಿ, ದುಶ್ಯಾಸನನ ಕಾಳಗ, ಪಾರ್ಥಪಾಚಾಂಲಿ, ಕಾಳಾಸುರ, ಸಂಪೂರ್ಣ ರಾಮಾಯಣ, ಬಬ್ರುವಾಹನ, ರತಿಕಲ್ಯಾಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಷ್ಟು ಕಥೆಗಳಲ್ಲಿ ಒಂದೊಂದು ಕಥೆ ಹತ್ತಾರು ಪ್ರದರ್ಶನಗಳನ್ನು ಕಂಡಿದ್ದಿದೆ. ಅವೆಲ್ಲವುಗಳಿಗೆ ಮದ್ದಳೆ ಬಾರಿಸಿದ ಸಣ್ಣಪಾಲಯ್ಯ ಈ ಎಲ್ಲಾ ಪ್ರದರ್ಶನಗಳಲ್ಲೂ ನಾನು ಅತ್ಯುತ್ತಮವಾಗಿ ಬಾರಿಸಿದ್ದೇನೆ ಎಂದು ಹೇಳಲಾರೆ ಆದರೆ ಹೆಚ್ಚು ಪ್ರದರ್ಶನಗಳಲ್ಲಿ ಚನ್ನಾಗಿಯೇ ಬಾರಿಸಿದ್ದೇನೆ. ಪ್ರದರ್ಶನಗಳು ಕಳಪೆಯಾದಾವೆಂದಾಗ ತಾನು ’ಕುಣಿಯಲಾರದೆ ಮದ್ಲೆಕಾರನನ್ನು ಗೋಳು ಹೊಯ್ದು ಕೊಂಡರು’ ಎನ್ನುವ ಗಾದೆ ಮಾತಿನಂತೆ ಅದರ ಅಪಕೀರ್ತಿಯನ್ನು ನನ್ನ ಹೆಗಲಿಗೆ ಏರಿಸಿದ್ದಿದೆ. ಇಂತಹ ಟೀಕೆಗಳು ಬಂದಾಗ ನಾನು ಯಾರಿಗೂ ಎದುರಾಡದೆ ನನ್ನ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ ಎಂಬ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮದ್ದಳೆಯ ಬಗ್ಗೆ ಯಾವುದೇ ಶಾಸ್ತ್ರೀಯ ಜ್ಞಾನವನ್ನು ಕಲಿಯದೇ ಇದ್ದರು ಮದ್ದಳೆಯ ಜಂಪೆ, ಸಾಂಗತ್ಯ, ಅರ್ಧರೇಖ, ಆಟತಾಳ, ಕುಕ್ಕತಾಳ ಮೊದಲಾದ ಮಟ್ಟುಗಳ ಬಗ್ಗೆ ಅವರಲ್ಲಿರುವ ಅನುಭವ ಜ್ಞಾನ ಬೆರಗು ಮೂಡಿಸುವಂಥಹದ್ದು.
![]() |
| ಮದ್ದಳೆ ನುಡಿಸುತ್ತಿರುವ ಕಲಾ ಜೀವಿ ಸಣ್ಣ ಪಾಲಯ್ಯ |
ಇಂತಹ ಅಪರೂಪದ ಈ ಕಲಾವಿದನ ಬದುಕು ಸುಖಕರವಾಗಿಲ್ಲ. ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಆರ್ಥಿಕ ಬಲ ಈ ಕಲೆಯಿಂದ ಒದಗಿಬರಲಿಲ್ಲ. ಮೊದಲಿಂದಲೂ ಇವರಿಗೆ ತಾಲೀಮು, ಪ್ರದರ್ಶನ ಎಲ್ಲಾ ಸೇರಿ ಕಲಾವಿದರಿಂದ ಸಿಗುತ್ತಿದ್ದ ಸಂಭಾವನೆ ಕೇವಲ ೨೦ ರಿಂದ ೫೦ ರೂಗಳು ಮಾತ್ರ. ಈಗ ಅದು ೨೫೦ ರಿಂದ ೫೦೦ ರೂಗಳಿಗೆ ಸೀಮಿತಗೊಂಡಿದೆ. ಇದರ ಜೊತೆಗೆ ಕೆಲವೊಮ್ಮೆ ಒಂದು ಜೊತೆ ಬಟ್ಟೆ. ಈ ವಿಷಯದಲ್ಲಿ ಯಾರನ್ನು ಜುಲ್ಮೆಮಾಡದ ಇವರು ಕೊಟ್ಟಷ್ಟರಲ್ಲೇ ತೃಪ್ತಿ ಕಂಡವರು. ಯಾರನ್ನು ಇಂತಿಷ್ಟೆ ಎಂದು ಬಾಯಿಬಿಟ್ಟು ಕೇಳಿದ ಉದಾಹರಣೆಗಳೆ ಇಲ್ಲ ಎಂಬುದು ಇವರ ಒಡನಾಡಿ ಕಲಾವಿದರ ಅಂಬೋಣ. ಸಂಭಾವನೆಯ ವಿಷಯ ಹೀಗಾದರೆ ಇನ್ನೂ ಸರ್ಕಾರ ಸಂಘ ಸಂಸ್ಥೆಗಳಿಂದ ಕಲೆಗಾಗಿ ಸಿಗುವ ಯಾವುದೇ ಸೌಕರ್ಯಗಳು ಕೂಡ ಇವರ ಪಾಲಿಗೆ ಸಿಗಲಿಲ್ಲ ಎಂಬುದು ಬೇಸರದ ಸಂಗತಿ. ಈಗ ಸುಮಾರು ಎಪ್ಪತ್ತು ವರ್ಷ ವಯಸ್ಸಾದರೂ ಸರ್ಕಾರದಿಂದ ಸಿಗುವ ಮಾಶಾಸನ ಕೂಡ ಇವರಿಗೆ ಇನ್ನೂ ಸಿಕ್ಕಿಲ್ಲ ಎಂಬುದು ಕಲಾಪ್ರಪಂಚದ ದೌರ್ಭಾಗ್ಯವೇ ಸರಿ.
ಹಿರಿಯರೆಲ್ಲರು ತಮ್ಮ ಪರಂಪರೆಯ ಕಲೆಯ ಬಗ್ಗೆ ಈ ಹೊಸಕಾಲದ ಯುವಕರು ನಿರಾಸಕ್ತರಾಗಿದ್ದಾರೆ ಎಂದು ಕೊರಗುತ್ತಿರುವುದು ಸಾಮಾನ್ಯವಾದ ಸಂಗತಿ. ಆದರೆ ಸಣ್ಣಪಾಲಯ್ಯ ಈ ಬಗ್ಗೆ ಹೊಂದಿರುವ ಅಭಿಪ್ರಾಯವೇ ಬೇರೆಯಾಗಿದೆ.ಅವರು ಹೇಳುವಂತೆ ಹೀಗಿನ ಯುವಕರು ನಮಗಿಂತ ಹೆಚ್ಚು ಶಕ್ತಿಶಾಲಿಗಳು ಅವರು ಈ ಕಲೆಯನ್ನು ಯಾವುದಾರೂ ರೂಪದಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಧೃಡವಾದ ಮಾತನ್ನಾಡುತ್ತಾರೆ. ಇದಕ್ಕೆ ಪೂರಕವಾಗಿ ಅನೇಕ ಯುವ ಕಲಾವಿದರು ತನ್ನ ಬಳಿ ತೀವ್ರ ಆಸಕ್ತಿಯಿಂದ ಬಂದು ಕಲಿಯುತ್ತಿರುವುದನ್ನು ನೆನಪಿಸಿಕೊಳ್ಳುತ್ತಾರೆ.
ಇಂತಹ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ತನ್ನ ೧೫ನೇ ವರ್ಷದಿಂದ ಇಲ್ಲಿಯವರೆಗೆ ಅಂದರೆ ಅರ್ದಶತಮಾನಕ್ಕೂ ಹೆಚ್ಚು ಕಾಲ ಬಯಲಾಟ ಕಲೆಯ ಸೇವಕರಂತೆ ಕೆಲಸಮಾಡಿದ್ದ ಈ ಕಲಾವಿದನನ್ನು ಗುರುತಿಸಿ ೨೦೧೩-೧೪ ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿರುವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಬೆಳಗಲ್ ವೀರಣ್ಣ ಹಾಗೂ ಎಲ್ಲಾ ಸದಸ್ಯರು ವಿಶೇಷವಾಗಿ ಡಾ. ಬಿ.ಎಂ. ಗುರುನಾಥ ಅವರು ಖಂಡಿತವಾಗಿ ಅಭಿನಂದನಾರ್ಹರು.
ಇಂಥ ಹಿರಿಯ ಹಾಗೂ ಅಲಕ್ಷಿತ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಖಂಡಿತವಾಗಿಯೂ ಇಂದಿಗೆ ಮಾಡಲೇಬೇಕಾದ ಕೆಲಸವಾಗಿದೆ. ಹೀಗೆ ಗುರುತಿಸಿ ಗೌರವಿಸಿದ ಕಲಾವಿದರ ಕಲೆಯ ಪ್ರಾವೀಣ್ಯತೆಯನ್ನು ಬಳಸಿಕೊಳ್ಳಬೇಕು. ಬಯಲಾಟದಂತಹ ಕಲೆಯನ್ನು ಯಾವುದೇ ಮುಜುಗರವಿಲ್ಲದೆ ಯುವಕರು ಪ್ರದರ್ಶನಗಳನ್ನು ನೀಡುವಂತಾಗಬೇಕು. ಅದಕ್ಕೆ ಈ ಹಿರಿಯ ಕಲಾವಿದರನ್ನು ಮಾರ್ಗದರ್ಶನಕ್ಕಾಗಿ ಬಳಸಿಕೊಳ್ಳಬೇಕು. ಆ ಮೂಲಕ ಬಯಲಾಟ ಕಲೆಯ ಉದ್ಧಾರವಾಗಬೇಕು ಎಂಬುದು ಸಾಂಕೃತಿಕ ಲೋಕದ ಆಶಯವಾಗಿದೆ.
ಚಿತ್ರಗಳು ಮತ್ತು ಬರೆಹ - ಡಾ. ಎಸ್.ಎಂ. ಮುತ್ತಯ್ಯ
Sunday, 28 December 2014
ಶಿಕ್ಷಕರ ದಿನಾಚರಣೆ
ಡಾ. ಎಸ್.ಎಂ.ಮುತ್ತಯ್ಯ
ತಮಗೆಲ್ಲರಿಗೂ ಇಂದಿನ ಶಿಕ್ಷರ ದಿನಾಚರಣಾ ಸಮಾರಂಭದ ಶುಭಾಷಯಗಳು ನನ್ನ ಕೆಲವು ವಿಚಾರಗಳನ್ನು ಇಷ್ಟೊಂದು ಜನ ಶಿಕ್ಷಕರ ನಡುವೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಶಿಕ್ಷಣ ಎಂಬುದು ಮಾನವನ ಜೀವನಕ್ಕೆ ಬಹಳ ಮಹತ್ವದ್ದು. ಮನುಷ್ಯನ ಸರ್ವೋತೋಮುಖ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ಇಂಥ ಮಹತ್ವದ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ-ಮೌಲ್ಯಗಳ ರವಾನೆದಾರರಾದ ಶಿಕ್ಷಕರ ಪಾತ್ರ ಅತ್ಯಂತ ಪ್ರಧಾನವಾದುದು. ಇದು ನಿರಂತರವಾದ ಮತ್ತು ಸಾರ್ವತ್ರಿಕ ಪ್ರಕ್ರಿಯೆ ಕೂಡಾ ಆಗಿದೆ. ಈ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ ೫ ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿ ಸೆಪ್ಟೆಂಬರ ೫, ೧೯೬೨ ರಿಂದ ಶಿಕ್ಷಕರ ದಿನವನ್ನು ಆಚರಿಸುವ ಪದ್ದತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನೆ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯನ್ನು ಕಳೆದ ಕಳೆದ ೫೨ ವರ್ಷಗಳಿಂದ ಆಚರಿಸುತ್ತಾ ಬಂದಿರುವ ನಾವು ಸಹಜವಾಗಿಯೇ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಮಾಡಿರುವ ಸಾಧನೆಗಳನ್ನು ಹಾಗೂ ಅವರು ತಲುಪಿದ ಉನ್ನತ ಸ್ಥಿತಿಯನ್ನು ಸ್ಮರಿಸುವುದು. ಶಿಕ್ಷಕ ವೃತ್ತಿಯ ಶ್ರೇಷ್ಟತೆಯನ್ನು ಹೇಳುವುದು. ಅಲ್ಲಲ್ಲಿ ಔಪಚಾರಿಕವಾಗಿ ಶಿಕ್ಷಕರು ತಮ್ಮ ಮೂಲ ಉದ್ದೇಶಗಳನ್ನು ಮರೆತಿರುವ ಬಗ್ಗೆ ಪ್ರಸ್ತಾಪಿಸುವುದು. ಒಟ್ಟಾರೆ ಎಲ್ಲರು ಉತ್ತಮ ಶಿಕ್ಷಕರಾಗಬೇಕೆಂದು ಕರೆಕೊಡುವುದು ಇಂಥ ಸಾಂಪ್ರದಾಯಿಕ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ. ಸ್ವತಃ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಪರಿವರ್ತಿಸಿದ ದಿನ ಬಹಳ ಖುಷಿಯಾಗಿದ್ದು ತನ್ನ ಜನ್ಮ ದಿನ ವೈಯುಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿತ್ತಿದೆ ಎಂಬ ಕಾರಣಕ್ಕೆ. ವೈಯುಕ್ತಿಕವಾದುದು ಒಬ್ಬರ ಸಾಧನೆಗಳನ್ನು ಸ್ಮರಣೆಮಾಡುವುದರ ಮೂಲಕ ಜನರ ಮನಸ್ಸಲ್ಲಿ ಉಳಿಸ ಬಹುದಷ್ಟೇ ಆದರೆ ಅವರ ಆ ಕಾರ್ಯಗಳು ಮುಂದುವರೆಯಲಾರವು. ಸಾಮೂಹಿಕತೆ ಇದಕ್ಕೆ ವಿರುದ್ಧವಾದುದು. ಇದರಲ್ಲಿ ಒಬ್ಬರ ಉನ್ನತ ಕಾರ್ಯಗಳು ಸ್ಮರಣೆಗೆ ಸೀಮಿತಗೊಳ್ಳದೆ ಸ್ಮರಣೆಯ ಆಚೆಗೆ ಮುಂದುವರೆಯುವ ಪ್ರಯತ್ನವಿರುತ್ತದೆ. ರಾಧಾಕೃಷ್ಣನ್ ಅವರು ತಮ್ಮ ಸಾಧನೆಗಳು ಮುಂದಿನ ಕಾಲಕ್ಕೆ ಉಳಿದು ಬೆಳೆಯಬೇಕು ಎಂಬ ಕಾರಣಕ್ಕೆ ತನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಒಪ್ಪಿಗೆ ಸೂಚಿಸಿದರು. ಹಾಗಾಗಿಯೇ ಶಿಕ್ಷಕರ ದಿನಾಚರಣೆ ಎಂಬುದು ರಾಧಾಕೃಷ್ಣ ಅವರ ಸಾಧನೆಗಳ ಪ್ರಸಂಶೆ ಮಾತ್ರವಾಗದೆ, ಅವರ ಆ ಮಹಾನ್ ಶಕ್ತಿಯನ್ನು ನಾವೆಲ್ಲರೂ ಅನುಸರಿಸಿ ಅಂಥ ಇನ್ನಷ್ಟು ಸಾಧನೆಗಳನ್ನು ಮಾಡುವುದರ ಮೂಲಕ ಶಿಕ್ಷಕ ವೃತ್ತಿಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆಯಬೇಕು. ಆದರೆ ಇಂದು ನಾವೆಲ್ಲರೂ ಪ್ರಮಾಣಿಕವಾಗಿ ಹೇಳುವುದಾದರೆ ಅಂಥ ಪಥದ ವಿಸ್ತರಕರು ಬೇಡ ಕೇವಲ ಪಥಿಕರಾದರೂ ಆಗಿದ್ದೇವೆ ? ಎಂಬುದಾಗಿ ಪ್ರಶ್ನಿಸಿಕೊಳ್ಳಬೇಕು
ಆದರೆ ನಾವು ಈ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ನಮ್ಮ ಸಮಾಜದಲ್ಲಿ ಆಚರಿಸುವ ಎಲ್ಲಾ ದಿನಾಚರಣೆಗಳು ಹೀಗೆ ಇವೆ ಎಂಬ ಕಾರಣಕ್ಕೆ ನಮ್ಮ ಇಂಥ ತಪ್ಪು ನಡೆಗಳಿಗೆ ಸಮರ್ಥನೆ ಪಡೆಯಬೇಕಿಲ್ಲ. ಪಡೆಯಬಾರದು ಕೂಡ. ಏಕೆಂದರೆ ನಾವೆಲ್ಲ ಭವಿಷ್ಯವನ್ನು ರೂಪಿಸುವ ಜ್ಞಾನಿಗಳನ್ನು, ಉತ್ತಮ ಜೀವನ ನಡೆಸುವ ಪ್ರಜೆಗಳನ್ನು, ಶಿಕ್ಷಕರನ್ನು ರೂಪಿಸುವ ಶಿಕ್ಷಕರನ್ನೇ ತಯಾರು ಮಾಡುವ ಮಹತ್ವದ ಮೌಲ್ಯಯುತವಾದ ಕೆಲಸವನ್ನು ಮಾಡುವ ನಾವೇ ಇಂಥ ಕೆಲಸಮಾಡುವುದು ಸರಿಯಲ್ಲ. ಆದ್ದರಿಂದ ಈ ನೆಪದಲ್ಲಿ ನಾನು ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಿತಿ ಹಾಗೂ ಅವರ ವೃತ್ತಿಯ ಮುಂದಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸಲು ಇರುವ ಸಾಧ್ಯತೆಗಳ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಲು ಇಚ್ಚಿಸುತ್ತೇನೆ.
ಶಿಕ್ಷಕರ ಈಗಿನ ಸ್ಥಿತಿ
ಗುರು ಶಿಷ್ಯ ಪರಂಪರೆಗೆ ಹೆಸರಾದ ಈ ಭವ್ಯ ಭಾರತದಲ್ಲಿ ಶಿಕ್ಷಕರ ಇಂದಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಇಂದಿನ ಸಮಾಜದಲ್ಲಿ ಶಿಕ್ಷಕರಿಗೆ ಶಿಷ್ಯರಿಂದಾಗಲಿ ಅಥವಾ ಅವರ ಪೋಷಕರಿಂದಾಗಲಿ ಯಾವುದೇ ದೊಡ್ಡ ಗೌರವವನ್ನು ಪಡೆಯುವ ಸಂದರ್ಭಗಳಿಲ್ಲ.
ಶಿಕ್ಷಕರನ್ನು ಕಾರಣಕ್ಕೆ ಅತ್ಯಂತ ಗುಮಾನಿಯಿಂದ ತಾತ್ಸಾರದಿಂದ ಕಾಣುವ ಸಂದರ್ಭಗಳೇ ಹೆಚ್ಚಾಗಿವೆ.
ಇದಕ್ಕೆ ಅನೇಕರು ಹೇಳುವಂತೆ ಕಾರಣಗಳು ಹೀಗಿವೆ:
ಶೇಕಡವಾರು ಶಿಕ್ಷಕರು ಇಂದು ಸಂಯಮ, ಸಹನೆ, ಆದರ್ಶ, ಪ್ರೀತಿ, ವಾತ್ಸಲ್ಯ ಎಂಬ ಬಹುಮುಖ್ಯ ಮೌಲ್ಯಗಳನ್ನು ಮರೆತಿರುವುದಂತೂ ಅಪ್ಪಟ ಸತ್ಯ.
ಶಿಕ್ಷಕರು ಪಾಠ ಹೇಳುವ ಕೆಲಸಕ್ಕಿಂತ ಬಿಸಿಯೂಟ ನಿರ್ವಹಣೆ, ಜನಗಣತಿ ಕಾರ್ಯ, ಮತದಾರರಪಟ್ಟಿ ಪರಿಷ್ಕರಣೆ, ವರದಿ ತಯಾರಿಸುವುದು, ಕಚೇರಿ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿರುವವರಗೆ ಮಾತ್ರ ನಮ್ಮ ಜವಾಬ್ದಾರಿ ಅಲ್ಲಿಂದ ಹೊರಗೆ ಹೋದರೆ ನಮಗೂ ಅವರಿಗೂ ಏನೂ ಸಂಬಂಧವಿಲ್ಲ ಎಂಬ ಭಾವನೆ. ಶಾಲೆಯ ಒಳಗಾದರೂ ಪಾಠ ವಿಷಯಗಳಿಗೆ ಮಾತ್ರ ವಿದ್ಯಾರ್ಥಿ ಸಂಬಂಧ ಎಂಬ ಮನೋಭಾವ
ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗದಿರುವುದು, ಶಾಲೆಯಲ್ಲಿದ್ದರೂ ಸರಿಯಾದ ಕ್ರಮದಲ್ಲಿ ತರಗತಿಗಳನ್ನು ತೆಗೆದು ಕೊಳ್ಳದಿರುವುದು
ಅವುಗಳ ಜಾಗದಲ್ಲಿ, ರಾಜಕಾರಣ, ಜಾತಿ ಪ್ರೀತಿ ಬೆಳೆಸಿಕೊಳ್ಳುವುದು
ಹಿರಿಯ ಅಧಿಕಾರಿಗಳ ಜೊತೆ ನಂಟು, ಒಳಗೊಳಗೇ ಏನೋ ಒಡಂಬಡಿಕೆ,
ಅಸೋಸಿಯೇಷನ್ಗಳ ಹೆಸರಲ್ಲಿ ಓಡಾಟ, ಪಾಠ ಮಾಡುವುದಕ್ಕಿಂತ ಶಿಕ್ಷಕರ ಸಮಸ್ಯೆಗಳ ಹೈಲೈಟ್ ಮಾಡೋದು
ಸರಕಾರ ಸಂಬಳ ಕೊಡುವುದೇ ಪಾಠ ಮಾಡಲು ಎಂಬುದನ್ನೇ ಮರೆತು, ತಮ್ಮ ಸಂಬಳ ಸಾರಿಗೆ ಬಡ್ತಿಗಳ ವಿಷಯಕ್ಕೆ ತಿಂಗಳಲ್ಲಿ ಹದಿನಾಲ್ಕು ದಿವಸವೂ ಬಿಎಓ ಆಫೀಸುಗಳಿಗೆ ಅಲೆದಾಟ
ಈಗೀಗಂತೂ, ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಯಲ್ಲಿ ತಮಗೂ ಪಾಲಿರಬೇಕೆಂಬ ಉದ್ದೇಶದಿಂದ ನಾನಾ ರೀತಿಯ ತಂತ್ರಗಳನ್ನು ಮಾಡುವುದು
ಆಯಾ ದಿನದ ಪಾಠ ಮಾಡುವ ಕೆಲಸವನ್ನು ಹೆಚ್ಚು ಶ್ರಮವಿಲ್ಲದೇ ಮಾಡಿ ಮುಗಿಸುವುದಷ್ಟೇ ತಮ್ಮ ಶಿಕ್ಷಕ ವೃತ್ತಿಯ ಸೀಮಿತ ಎಂದು ಅರಿತುಕೊಂಡಂತಿದೆ.
ಮಕ್ಕಳು ಗಲಾಟೆ ಮಾಡುತ್ತಿದ್ದರೆ ಪಾಠ ಮಾಡಲು ಹೇಗಾಗುತ್ತದೆ. ಅದಕ್ಕಾಗಿ ಈ ಶಿಕ್ಷಕರು ಶಿಕ್ಷಿಸಲು ಮುಂದಾಗುತ್ತಾರೆ. ಸಿಟ್ಟಿನ ಭರದಲ್ಲಿ ತಮ್ಮ ದಂಡನೆಯ ಸ್ವರೂಪ ಹೇಗಿರುತ್ತದೆ ಎಂದರೆ ಅರಿಯಲಾಗದಷ್ಟು ವಿವೇಚನೆ ಕಳಕೊಂಡು ಬಿಡುತ್ತಾರೆ.
ಕಲಿಯಲು ಶಾಲೆಗಳಿಗೆ ಬಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಅನೇಕ ಶಿಕ್ಷಕರ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ
ಶಿಕ್ಷಕರ ಮುಂದಿರುವ ಸವಾಲುಗಳು
ಶಿಕ್ಷಕ ವೃತ್ತಿಯ ಪ್ರಮಾಣಿಕತೆ ಮತ್ತು ಗೌರವಗಳು ಇಂದು ಪಾತಾಳಕ್ಕೆ ಕುಸಿದಿದ್ದು ಅವುಗಳನ್ನು ಶಾಪಮುಕ್ತಗೊಳಿಸಿ ಮೇಲೆತ್ತಬೇಕಿದೆ. ಅದಕ್ಕಾಗಿ ಶಿಕ್ಷಕರು ಮಾಡಬೇಕಿರುವ ಅಗತ್ಯವಾದ ಕಾರ್ಯಗಳು
ಮೊದಲಿಗೆ ನಮ್ಮ ವೃತ್ತಿಗಿರುವ ಪ್ರಾಮುಖ್ಯತೆಯನ್ನು ಮನಗಾಣಬೇಕಿದೆ. ಅಷ್ಟೇ ಅಲ್ಲ ಅದನ್ನು ತಮ್ಮ ಕಾರ್ಯಗಳ ಮೂಲಕ ಪ್ರಕಟಮಾಡಬೇಕಿದೆ.
ನಾವು ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿದ್ದೇವೆ. ಶಿಕ್ಷಕರೇ ಅಪ್ರಸ್ತುತ ಎಂಬ ವಾತವರಣ ನಿರ್ಮಾಣವಾಗುತ್ತಿದೆ. ಎಜುಸ್ಯಾಟ್ ಮೂಲಕ ಸಿಗುತ್ತಿರುವ ಪಾಠಗಳು, ಅಂತರ್ಜಾಲದಲ್ಲಿ ಯಾವುದೇ ವಿಷಯದ ಬಗ್ಗೆ ಅನಂತವಾದ ಮಾಹಿತಿ ಸಿಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಕಾಲಕ್ಕೆ ಅನುಗುಣವಾದ ವಿಷಯಜ್ಞಾನ ಹಾಗೂ ಸಂವಹನ ತಂತ್ರ, ಕಲಿಕೆಯ ಮಾದರಿಗಳನ್ನು ಹುಡುಕಿಕೊಳ್ಳಬೇಕಿದೆ. ಬೆಳಗಿನ ವಿಷಯ ಸಂಜೆಗೆ ಹಳತೆನಿಸುವ ಈ ಕಾಲದಲ್ಲಿ ದಿನದಿನವೂ ಹೊಸಹೊಸದನ್ನು ಕಲಿತರೆ ಮಾತ್ರವೇ ನಮ್ಮ ಅಸ್ತಿತ್ವ ಉಳಿಯುತ್ತದೆ. ಇಲ್ಲವಾದರೆ ಎಲ್ಲರಿಂದಲೂ ಛೀ ಥೂ ಎನಿಸಿಕೊಂಡು ಸಂಬಳಕ್ಕೆ ಮಾತ್ರ ದುಡಿಯುವ ನಿಸ್ತೇಜ ಕಾರ್ಮಿಕರಾಗುತ್ತೇವೆ.
೧. ಕಥೆ : ಶಿಕ್ಷಕರಿಗೆ ಇರುವ ಅರ್ಹತೆಯ ಬಗ್ಗೆ ಒಂದು ಘಟನೆ : ಒಂದು ಹೈಸ್ಕೂಲ್ ನಲ್ಲಿ ಒಬ್ಬ ಇಂಗ್ಲೀಷ್ ಶಿಕ್ಷಕಿ
ತನ್ನ ಒಂದು ತರಗತಿಯಲ್ಲಿ ಸ್ವಂತ ಕವನ ಬರೆಯುವ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಆ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕವನಗಳನ್ನು ಬರೆದು ತರುತ್ತಾರೆ. ಅವುಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕಿ ಅವುಗಳಿಗೆ ಎ,ಬಿ,ಸಿ ಎಂದು ಗ್ರೇಡ್ ಗಳನ್ನು ನೀಡಿ ಮರುದಿನ ತರಗತಿಯಲ್ಲಿ ಹಂಚುತ್ತಾರೆ. ಅದರಲ್ಲಿ ಒಬ್ಬ ಹುಡುಗನ ಕವನದ ಪ್ರತಿ ಇರುವುದಿಲ್ಲ. ಅದಕ್ಕಾಗಿ ಎಲ್ಲರಿಗೂ ಪ್ರತಿಗಳನ್ನು ನೀಡಿಯಾದ ಮೇಲೆ ನನ್ನ ಪ್ರತಿ ಇಲ್ಲವೆಂದು ಕೇಳುತ್ತಾನೆ. ಶಿಕ್ಷಕಿ ವಿಪರೀತ ಸಿಟ್ಟು ಬಂದು ಹುಡಗನ್ನು ಬಾಯಿಗೆ ಬಂದಂತೆ ಬಯ್ಯುತ್ತಾಳೆ. ಅವರಿಗೆ ಇಷ್ಟೊಂದು ಸಿಟ್ಟು ಬರಲು ಕಾರಣ ಆ ಹುಡುಗ ಬೇರೆ ಯಾರೋ ಪ್ರಸಿದ್ಧ ಕವಿಯ ಕವನವನ್ನು ನಕಲುಮಾಡಿ ತಂದಿದ್ದಾನೆ. ಅವನೊಬ್ಬ ವಂಚಕ ಎಂಬ ಅವರ ತಿಳುವಳಿಕೆ. ಆದರೆ ಆ ಹುಡುಗ ನಿಜವಾಗಿ ತಾನೆ ಬರೆದಿದ್ದ. ಇದನ್ನು ತನ್ನ ಶಿಕ್ಷಕಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ. ಆದರೆ ಇದರಿಂದ ಶಿಕ್ಷಕಿಗೆ ಕೋಪ ಇನ್ನಷ್ಟು ಜಾಸ್ತಿಯಾಯಿತು. ಹುಡುಗನಿಗೆ ಇದರಿಂದ ತುಂಬಾ ಬೇಸರವಾಯಿತು. ಅಂದಿನಿಂದ ಆ ಶಿಕ್ಷಕಿಯ ಬಗ್ಗೆ ಒಂದು ರೀತಿಯ ಅಸಹನೆಯನ್ನು ಬೆಳೆಸಿಕೊಂಡ. ಈ ಅಸಹನೆ ಅವನು ಆ ಶಾಲೆಯನ್ನು ಬಿಟ್ಟ ನಂತರವೂ ಮುಂದುವರೆಯಿತು. ಯಾರಾದರೂ ಆ ಶಿಕ್ಷಕಿಯ ಹೆಸರನ್ನು ಹೇಳಿದರೆ ಸಾಕು ಅವನಿಗೆ ಕೋಪಬರುತ್ತಿತ್ತು. ಶಿಕ್ಷಕಿಯನ್ನು ಬಯ್ಯುತ್ತಿದ್ದ. ಮುಂದೆ ಆ ಹುಡುಗ ಜಗತ್ಪ್ರಸಿದ್ದ ಸಾಹಿತಿಯಾದ ಆತನ ಕೀರ್ತಿ ಎಷ್ಟಿತ್ತು ಎಂದರೆ ಅವನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಕರೆಯುವುದಾದರೆ ಮೂರು ತಿಂಗಳು ಮುಂಚಿತವಾಗಿ ತಿಳಿಸಬೇಕಿತ್ತು. ಈ ಸಂದರ್ಭದಲ್ಲೂ ತನ್ನ ಶಿಕ್ಷಕಿಯನ್ನು ನೆನಪಿಸಿಕೊಂಡರೆ ಅವನಿಗೆ ಸಿಟ್ಟು ಬರುತ್ತಿತ್ತು. ಇತ್ತ ಶಿಕ್ಷಕಿ ತನ್ನ ವೃತ್ತಿಯನ್ನು ಮಾಡುತ್ತಿದ್ದಾಗಲೆ ಗುಣಪಡಿಸಲಾರದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾಳೆ. ಆಸ್ಪತ್ರೆಗೆ ಸೇರುತ್ತಾಳೆ. ಹೀಗೆ ಇರುವಾಗ ಒಂದು ದಿನ ತನ್ನ ಹಳೆಯ ಆ ಶಿಷ್ಯನನ್ನು ನೋಡಬೇಕೆಂದು ಆಪೇಕ್ಷಿಸುತ್ತಾಳೆ. ಆಕೆಯ ಪತಿ ಹೇಗೋ ಹರಸಾಹಸ ಮಾಡಿ ಆತನ ಪೋನ್ ನಂಬರ್ ಪಡೆದು ಪೋನ್ ಮಾಡಿ ನಿಮ್ಮ ಇಂಥ ಶಿಕ್ಷಕಿಯ ಪತಿ ನಾನು ನಿಮ್ಮ ಶಿಕ್ಷಕಿಗೆ ಇಂಥ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾಳೆ. ಈಗ ನಿಮ್ಮನ್ನು ನೋಡಬೇಕೆಂದು ಬಯಸುತ್ತಿದ್ದಾಳೆ. ನೀವು ಬರಲು ಆಗುತ್ತದೆಯೇ ಎಂದು ಕೇಳುತ್ತಾನೆ. ತನ್ನ ಹಳೆಯ ಶಿಕ್ಷಕಿಯ ಹೆಸರು ಕೇಳಿದ ತಕ್ಷಣ ಅವನು ಸಿಟ್ಟಿಗೇಳುತ್ತಾನೆ. ಅಷ್ಟೇ ಅಲ್ಲ ನಾನು ಬರಲಾಗುವುದಿಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಡುತ್ತಾನೆ. ಪತಿ ಎಷ್ಟು ಪ್ರಯತ್ನಿಸಿದರೂ ಅವನು ಒಪ್ಪುವುದಿಲ್ಲ. ಅನಂತರ ಕೆಲವು ದಿನಗಳಾದ ಮೇಲೆ ಮತ್ತೊಮ್ಮೆ ಆತನಿಗೆ ಪೋನ್ ಮಾಡಿ ನಿಮ್ಮ ಶಿಕ್ಷಕಿ ನಿಮ್ಮನ್ನು ನೋಡಲೇ ಬೇಕೆಂದು ಹಟ ಮಾಡುತ್ತಿದ್ದಾಳೆ. ಅವಳು ಇನ್ನು ಬಹಳ ಕಾಲ ಬದುಕಲಾರಳು ಹಾಗಾಗಿ ತಾವು ದೊಡ್ಡ ಮನಸ್ಸು ಮಾಡಿ ಬರಬೇಕೆಂದು ವಿನಮ್ರವಾಗಿ ಬೇಡಿಕೊಳ್ಳುತ್ತಾನೆ. ಕೊನೆಗೆ ಶಿಕ್ಷಕಿಯ ಕೊನೆಯ ದಿನಗಳು ಎನ್ನುವ ಕಾರಣಕ್ಕೆ ಬರಲು ಒಪ್ಪುತ್ತಾನೆ. ಒಂದಿ ದಿನ ಶಿಕ್ಷಕಿಯನ್ನು ಸೇರಿಸಲಾಗಿದ್ದ ಆಸ್ಪತ್ರೆಗೆ ಬರುತ್ತಾನೆ. ಶಿಕ್ಷಕಿ ಸಂಪೂರ್ಣ ಸವೆದು ಹೋಗಿದ್ದಾಳೆ. ನೋಡಿ ಇವನಿಗೆ ಬಹಳ ಬೇಸರವಾಗುತ್ತದೆ. ಮಾತುನಾಡುವ ಸ್ಥಿತಿಯಲ್ಲಿ ಇಲ್ಲದ ಅವಳು ಹಾಸಿಗೆಯಲ್ಲಿ ಮಲಗಿಕೊಂಡೆ ಇವನನ್ನೇ ನೋಡುತ್ತಿದ್ದಾಳೆ. ಕೊನೆಗೆ ತನ್ನ ಪತಿಯನ್ನು ಕರೆದು ಅಲ್ಲಿನ ಔಷಧಿ ಇಡುವ ಕಪಾಟಿನಲ್ಲಿ ಒಂದು ಪೇಪರ್ ಇದೆ ಕೊಡಿ ಎಂದು ಕೇಳುತ್ತಾಳೆ. ಪತಿ ತಂದು ಕೊಡುತ್ತಾನೆ. ಆಗ ಆ ಪತ್ರಿಕೆಯನ್ನು ಅವನ ಕೈಗೆ ಕೊಡುತ್ತಾಳೆ. ಅದನ್ನು ನೋಡಿದರೆ ಆ ದಿನ ಅವನೇ ಬರೆದುಕೊಟ್ಟಿದ್ದ ಕವನದ ಪ್ರತಿ. ಅದರಲ್ಲಿ ಮೌಲ್ಯಮಾಪನ ಮಾಡಿ ಅದಕ್ಕೆ ಎ+ ಗ್ರೇಡ್ ನೀಡಲಾಗಿತ್ತು. ಅದನ್ನು ನೋಡಿ ಅವನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ತಲೆ ಎತ್ತಿ ನೋಡಿದರೆ ಶಿಕ್ಷಕಿ ತಾನು ಅಂದು ಮಾಡಿದ ಅಪರಾಧಕ್ಕೆ ಪ್ರಾಯಶ್ಚಿತ್ತ ಪಡುವಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. - ಈ ಕಥೆಯ ಮೂಲಕ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿಯುತ್ತದೆ. ನಾವು ಬೆಳೆಯುವ ಸಸಿಗಳನ್ನು ಪೋಷಿಸುವವರು. ಆ ಸಂದರ್ಭಕ್ಕೆ ನಾವು ಯಾವುದೇ ಒಂದು ಸಣ್ಣ ತಪ್ಪು ಮಾಡಿದರೂ ಅದು ಬೆಳೆಯುವ ಪೈರಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸಮಯ ಬಂದರೆ ಆ ಸಸಿ ಅಲ್ಲಿಯೇ ಮರಟಿ ಹೋಗಬಹುದು. ಇಂಥ ಮಹತ್ವದ ಕೆಲಸ ನಮ್ಮದು. ನಿಜವಾದ ಶಿಕ್ಷಕರಾದರೆ ನಾವು ನಮ್ಮ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವನ್ನು ಯಾವತ್ತಾದರೂ ಒಂದು ದಿನ ಒಪ್ಪಿಕೊಳ್ಳುತ್ತೇವೆ. ನಿಜವಾದ ವಿದ್ಯಾರ್ಥಿಯಾದರೆ ಸಾವಿನ ಸಂದರ್ಭದಲ್ಲಾದರೂ ತನ್ನನ್ನು ನೋಡುವುದರಿಂದ ಅವರ ಮನಸ್ಸು ನೆಮ್ಮದಿ ಪಡೆಯುತ್ತದೆ ಎಂಬ ಕಾರಣಕ್ಕೆ ಶಿಕ್ಷಕರು ಮಾಡಿರುವ ಅಪರಾಧವನ್ನು ಕ್ಷಮಿಸುತ್ತಾನೆ.
***************************************************************************
+ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ದಿನಾಂಕ ೦೫.೦೯.೨೦೧೪ ರಂದು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾಡಿದ ಭಾಷಣ
ಕರ್ನಾಟಕ ಅಂಬೇಡ್ಕರ್ : ಪ್ರೊ. ಬಿ. ಕೃಷ್ಣಪ್ಪ
-ಡಾ.ಎಸ್.ಎಂ.ಮುತ್ತಯ್ಯ
-೧-
ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿರುವ ವೇದಿಕೆಯ ಮೇಲಿರುವ ಹಾಗೂ ನಮ್ಮ ಮುಂದೆ ಆಸೀನರಾಗಿರುವ ಎಲ್ಲಾ ಬಂಧುಗಳೇ ತಮಗೆಲ್ಲರಿಗೂ ಪ್ರೀತಿ ಪೂರ್ವಕ ನಮಸ್ಕಾರಗಳು.
ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುವುದಕ್ಕೆ ನನಗೆ ಅತ್ಯಂತ ಸಂತಸವೆನಿಸುತ್ತದೆ. ಇದು ಎಲ್ಲಾ ಸಮಾರಂಭಗಳಲ್ಲಿ ಭಾಷಣಕಾರರು ಹೇಳುವಂತೆ ಬರೀ ಉಪಚಾರಕ್ಕೆ ಹೇಳಿದ ಮಾತಲ್ಲ. ಇದಕ್ಕೆ ಸ್ಪಷ್ಟವಾದ ಎರಡು ಕಾರಣಗಳಿವೆ :
ಮೊದಲನೆಯದಾಗಿ ಈ ಸಮಾರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದೇವೆ. ಪ್ರೊ.ಬಿಕೆ ಅವರು ತಮ್ಮ ಅಸ್ಸೀಮ ಹೋರಾಟವನ್ನು ಆರಂಭ ಮಾಡಿದ್ದು ಈ ಭದ್ರಾವತಿಯಿಂದಲೇ. ಈ ನಗರ ಇಲ್ಲಿರುವ ವಿ.ಐ.ಎಸ್.ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳಿಂದ ಎಷ್ಟು ಪ್ರಸಿದ್ಧಿಯೋ ಕೃಷ್ಣಪ್ಪನವರು ’ದಲಿತ ಸಂಘರ್ಷ ಸಮಿತಿ’ ಯನ್ನು ಮೊದಲು ಕಟ್ಟಿದ್ದು ಈ ಊರಿಂದಲೇ ಎಂಬುದರಿಂದಲೂ ಅಷ್ಟೇ ಪ್ರಸಿದ್ಧಿಪಡೆದಿದೆ. ಇಂಥ ಚಾರಿತ್ರಿಕ ಮಹತ್ವವಿರುವ ಈ ನೆಲದಲ್ಲಿ ನಿಂತು ಕೃಷ್ಣಪ್ಪನವರ ವಿಚಾರ ಧಾರೆಗಳನ್ನು ಮೆಲಕು ಹಾಕುವುದು ಮಾತನಾಡುವವರಿಗೆ ಒಂದು ರೀತಯಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ.
ಇನ್ನೂ ಎರಡನೆಯ ಕಾರಣವೆಂದರೆ ಈ ದಿನದ ಸಮಾರಂಭದಲ್ಲಿ ದಲಿತ ನೌಕರರ ಜಾಗೃತಿ ದಿನವೆಂದು ಕರೆದಿರುವುದು. ಈ ಹೊತ್ತಿನ ದಲಿತರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಮುಖ್ಯವಾದುದು ಎಂದರೆ ತಮ್ಮ ಸಮುದಾಯಗಳಲ್ಲಿ ಜಾಗೃತ ಪ್ರಜ್ಞೆ ಇಲ್ಲವಾಗಿರುವುದು. ಮೇಲ್ವರ್ಗದ ಸಮುದಾಯಗಳು ದಲಿತ ಸಮುದಾಯದವರನ್ನು ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕಿಂತ ದೊಡ್ಡ ಸತ್ಯವೇನೆಂದರೆ ಶೋಷಣೆ ಮಾಡುತ್ತಿದ್ದಾರೆ ಎಂಬುದೆ ದಲಿತರಿಗೆ ತಿಳಿಯದಂತಾಗಿರುವುದು. ಮೇಲ್ವರ್ಗದವರು ನಾವು ಶೇಷ್ಟ್ರರೆಂದು ಕರೆದುಕೊಂಡು ನೀವು ದಲಿತರು ಕನಿಷ್ಟವೆಂದು ಹೇಳಿದರೆ ಅದನ್ನು ಪ್ರಶ್ನಿಸದೇ ವಿಧೇಯತೆಯಿಂದ ಒಪ್ಪಿಕೊಂಡಿರುವುದು. ಇದೆಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ದುರ್ಬಲ ವರ್ಗಗಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದು ಉದ್ಧಾರವಾದ ದಲಿತರು ತಮ್ಮದೇ ಗುಂಪಿನ ದಲಿತರನ್ನು ಶೋಷಿಸುತ್ತಿರುವುದು. ಹಾಗೆಯೇ ದಲಿತರನ್ನು ಶೋಷಿಸುವವರಗೆ ಬಂಬಲವಾಗಿ ನಿಲ್ಲಿತ್ತಿದ್ದಾರೆ. ಹಾಗೆಯೇ ನಮ್ಮ ದಲಿತ ಸಮುದಾಯಗಳ ಯುವ ಪೀಳಿಗೆಯ ಜನ ದಲಿತರಾಗಿ ಹುಟ್ಟಿ ದಲಿತರಾಗಿರುವ ಕಾರಣಕ್ಕೆ ಸಿಗುವ ಎಲ್ಲಾ ಅವಮಾನಗಳನ್ನು ಉಂಡು, ಸಿಗುವ ಸೌಲಭ್ಯಗಳನ್ನು ಅನುಭವಿಸಿಯೂ ಕೂಡ ನಾವು ದಲಿತರೆಂದು ಧೈರ್ಯದಿಂದ ಹೇಳಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಈ ಎಲ್ಲದಕ್ಕೂ ಇರಬಹುದಾದ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಸರಿಯಾದ ಜಾಗೃತಿ ಇಲ್ಲದಿರುವದೇ ಕಾರಣ. ಈ ಸಂದರ್ಭದಲ್ಲಿ ನಮ್ಮೊಳಗೆ ಗೈರು ಹಾಜರಿಯಾಗಿರುವ ಜಾಗೃತಿಯನ್ನು ಮೂಡಿಸಿಕೊಳ್ಳಬೇಕಾದುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ. ಇಂಥ ಅಗತ್ಯವನ್ನು ಮನಗಂಡು ಆ ಕುರಿತು ಚರ್ಚಿಸಲು,ಆತ್ಮಾವಲೋಕನ ಮಾಡಿಕೊಳ್ಳಲು ಸೇರಿರುವ ಈ ಸಭೆಯನ್ನು ಕುರಿತು ಮಾತನಾಡುವುದೆಂದರೆ ಮಾತಾಡುವವರಿಗೆ ಖಂಡಿತಾ ಅತ್ಯಂತ ಖುಷಿಯ ಸಂಗತಿ. ಯಾರೂ ಶಾಲೆಗೆ ಬರುತ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಂದಾಗ ಶಿಕ್ಷರಲ್ಲಿ ಉಂಟಾಗುವ ಸಂತಸದ ಭಾವ ನನ್ನಲ್ಲಿ ಮೂಡುತ್ತಿದೆ.
ಈ ದಿನ ನಾನು ಮಾತನಾಡಬೇಕಿಂದಿರುವ ಮಾತುಗಳನ್ನು ಪ್ರಮುಖವಾದ ಎರಡು ಭಾಗಗಳಾಗಿ ವಿಂಗಡಿಸಿ ಮಾತನಾಡಲು ಬಯಸುತ್ತೇನೆ. ಮೊದಲನೆಯದು ಪ್ರೊ.ಕೃಷ್ಣಪ್ಪ ಅವರ ಹೋರಾಟದ ಬದುಕಿನ ನಡೆ ಮತ್ತು ನುಡಿಯನ್ನು ಕುರಿತ ಭಾಗ. ಎರಡನೆಯದು ಇಂದಿನ ದಲಿತರ ಪ್ರಮುಖ ಸಮಸ್ಯೆಗಳು ಮತ್ತು ಅದಕ್ಕೆ ನಾವು ತೋರಬೇಕಾದ ಪ್ರತಿಕ್ರಿಯೆಗಳು
-೨-
ಪ್ರೊ. ಕೃಷ್ಣಪ್ಪ ಅವರ ಬದುಕು ಇಂದಿನ ನಮ್ಮ ನಿಮ್ಮ ಬದುಕಿಗಿಂತ ತುಂಬಾ ದುಸ್ಥಿತಿಯಲ್ಲಿತ್ತು. ಅವರ ದುಸ್ಥಿತಿಯ ಒಂದರೆಡು ವಿಷಯಗಳನ್ನು ಪ್ರಸ್ತಾಪಿಸುವುದಾದರೆ : ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಮತ್ತು ಆರ್ಥಿಕ ಬಲವಿರಲಿಲ್ಲ. ಮೂರು ಜನ ತಂಗಿಯರು ಹಾಗೂ ಮೂರು ಜನ ಸೋದರಿಯರ ಕೂಲಿ ಕುಟುಂಬದಲ್ಲಿ ಜೀವನ ನಡೆಸಿದವರು. ತಾವು ಬದುಕಿದ ಊರಲ್ಲಿದ್ದ ವಿಪರೀತ ಅಸ್ಪೃಶತಾವಾದಿಗಳ ನಡುವೆ ಬದುಕಿದವರು. ಮೆಡಿಕಲ್ ಓದಲು ಮನಸ್ಸಿದ್ದರೂ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹಿಂದೆ ಬಿದ್ದವರು. ದಲಿತ ಜನಾಂಗದಲ್ಲಿ ಹುಟ್ಟದ ಕಾರಣಕ್ಕೆ ತನ್ನ ಕೊನೆಗಾಲದವರೆಗೂ ಸಾಕಷ್ಟು ನೋವನ್ನುಂಡವರು. ಚಿತ್ರದುರ್ಗ ಜಿಲ್ಲೆಯ ಹರಿಹರದ ಬಸಪ್ಪ ಮತ್ತು ಚೌಡಮ್ಮನವರ ಹಿರಿಯ ಮಗನಾಗಿ ಪ್ರೊ.ಬಿ. ಕೃಷ್ಣಪ್ಪನವರು ೧೯೩೮, ಜೂನ್ ೯ ರಂದು ಜನಿಸಿದರು. ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿ ದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು. ಇಂಥ ಕಷ್ಟಕರವಾದ ಬದುಕನ್ನು ಸಾಗಿಸಿದ ಬಿಕೆ ಅವರು ಸಾಮಾನ್ಯರಂತೆ ತನಗೆ ಬಂದ ಬಾಳಿನ ಕರ್ಮವೆಂದು ಭಾವಿಸದ್ದರೆ ಈ ಹೊತ್ತು ನಾವೆಲ್ಲರು ಸೇರಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಶ್ರೀಯುತರು ಬಾಳಿನ ಪ್ರತೀ ನೋವಿನ ಸಂದರ್ಭದಲ್ಲೂ ತನ್ನ ನೋವನ್ನು ತನ್ನದು ಮಾತ್ರವೆಂದು ತಿಳಿಯದೇ ನನ್ನ ನೋವು ನನ್ನ ಸಮುದಾಯಗಳ ಎಲ್ಲರ ನೋವು ಎಂದು ಭಾವಿಸಿ, ಆ ನೋವಿಗೆ ಕಾರಣರಾದವರ ವಿರುದ್ಧ ಸಿಡಿದೆದ್ದು ಪ್ರತಿಭಟನಾ ಆಂದೋಳನಗಳನ್ನು ಕಟ್ಟಿ ಬೆಳೆಸಿದರು. ಇವರ ಅಂಥ ನೂರಾರು ಪ್ರಯತ್ನಗಳು ಕರ್ನಾಟಕದ ದಲಿತ ಸಮುದಾಯಗಳ ಬಿಡುಗಡೆಯ ಮಾರ್ಗಗಳಾದವು. ಕೃಷ್ಣಪ್ಪನವರು ದಲಿತರ ಆಶಾಕಿರಣವಾದರು.
ಇವರಿಗೆ ತನ್ನ ವಿದ್ಯಾಭ್ಯಾಸದ ಪ್ರತಿಫಲವಾಗಿ ಉತ್ತಮವಾದ ಸರ್ಕಾರಿ ನೌಕರಿಯೂ ಸಿಕ್ಕಿತೂ ಆಗ ಈಗಿನ ನಮ್ಮ ನೌಕರರಂತೆ ತಾನು ತನ್ನ ಕುಟುಂಬ ಸಂತೋಷದಿಂದ ಇದ್ದರೆ ಸಾಕು ಎಂದು ಯೊಚಿಸಬಹುದಿತ್ತು. ಆದರೆ ಕೃಷ್ಣಪ್ಪನವರು ಎಂದು ಹಾಗೆ ಯೋಚಿಸಲಿಲ್ಲ. ತನಗೆ ಬರಿತ್ತಿದ್ದ ಸಂಭಳದ ಬಹುಭಾಗವನ್ನು ತನ್ನ ಚಳವಳಿಯ ಓಡಾಟಗಳಿಗೆ ಬಳಸಿದರು. ಚಳುವಳಿಯ ನಾಯಕನಾಗಿ ಪಡೆದ ಜನಪ್ರಿಯತೆಯಿಂದ ದೊರೆಯುವ ರಾಜಕೀಯ ಲಾಭಗಳನ್ನು ಪಡೆದು ತಾನು ದೊಡ್ಡ ವಿಐಪಿಯಾಗಿ ಬೆಳೆಯಬಹುದಿತ್ತು. ಅದರ ಬದಲಿಗೆ ನಾನು ಮಾಡವುದೇನಿದ್ದರೂ ಅದು ಸಮುದಾಯದ ಉದ್ಧಾರಕ್ಕೆ ಮಾತ್ರ ಎಂಬ ಧೃಢವಾದ ನಂಬಿಕೆಯುಳ್ಳವರಾಗಿದ್ದರು. ಅಧಿಕಾರದ ಹಿಂದೆ ಬೀಳದೆ ತಮ್ಮ ಜನರ ಶ್ರೇಯೋಭಿವೃದ್ಧಿಯ ಬೆನ್ನು ಹತ್ತಿದವರು. ಪ್ರೊ.ಬಿ.ಕೆಯವರು ಶಾಸಕರೂ ಆಗಲಿಲ್ಲ, ಮಂತ್ರಿಯೂ ಆಗಲಿಲ್ಲ, ಅಧ್ಯಕ್ಷಗಿರಿಗಾಗಲೀ, ತಮ್ಮವರನ್ನು ಅಲ್ಲಿಗೆ ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶಸ್ತಿ ಪತ್ರಕ್ಕಾಗಲಿ, ಬೆಳೆಯುತ್ತಿರುವ ದಲಿತ ಶಕ್ತಿಯು ಬೃಹತ್ ರಾಜಕೀಯ ಶಕ್ತಿಯಾಗ ದಂತೆ ನಿಗ್ರಹಿಸುವ ತಂತ್ರದಲ್ಲಿ ಇಡಿಯಾದ ಸಂಘಟನೆಯನ್ನು ಚಿಂದಿ ಮಾಡಲು ವಸಾಹತು ಶಾಹಿಗಳು ನೀಡುವ ಎಂಜಲಿಗಾಗಲೀ ಲಾಬಿ ನಡೆಸಿದವರಲ್ಲ. ಸ್ವಾಭಿಮಾನದಿಂದ ಸಂಘರ್ಷ ಮಾಡಿದ್ದರು. ಸಂಘಟನೆಯ ವಿಷಯದಲ್ಲಿ ಸೈದ್ಧಾಂತಿಕವಾಗಿ ತುಂಬಾ ಗಂಭೀರತೆಯಿದ್ದ ವಿಚಾರಶೀಲ ವ್ಯಕ್ತಿಯಾಗಿದ್ದರು. ವೈಯಕ್ತಿಕವಾಗಿಯೂ ಅಪಾರ ಪ್ರಾಮಾಣಿಕರಾಗಿದ್ದರು. ಅವರು ಪರಿನಿಬ್ಬಾಣ ಹೊಂದಿದ ದಿನ ಅವರ ಮೃತ ಶರೀರವನ್ನು ದಫನ ಮಾಡುವುದಕ್ಕೂ ಅವರದ್ದೇ ಆದ ಸ್ವಂತ ಜಾಗ ಇರಲಿಲ್ಲ! ಹತ್ತಿರದ ಸ್ವಜಾತಿ ಬಾಂಧವರೊಬ್ಬರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಪ್ರತಿಯೊಬ್ಬರೂ ಬಿ.ಕೆ.ಯವರಿಂದ (ಸಂಘಟನೆಯಿಂದ) ವಿಚಾರದ ನೆರವು ಪಡೆದಿದ್ದಾರೆಯೇ ಹೊರತು ಅವರಿಗೆ ಸಂಘಟನೆ (ನಾವು) ಏನನ್ನೂ ನೀಡಲಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು.ಶೋಷಿತರ ಹಕ್ಕುಗಳಿ ಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ. ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.
ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆಸಿದ ಹೊರಾಟಗಳ ಸ್ವರೂಪವನ್ನು ಒಮ್ಮೆ ಚಾರಿತ್ರಿಕ ಅವಲೋಕನ ಮಾಡಿಕೊಳ್ಳಬೇಕು. ಶ್ರೀಯುತರು ನಡೆಸಿದ ಹೋರಾಟಗಳನ್ನು ಹೆಸರಿಸುವುದಾದರೆ:
೧. ಕರ್ನಾಟಕದಲ್ಲಿ ಸಾರ್ವಜನಿಕ ಹೋಟೆಲ್ಗಳಲ್ಲಿ ದಲಿತರು ತೆಂಗಿನ ಚಿಪ್ಪಿನಲ್ಲಿ ಟೀ ಕಾಫಿ ಕುಡಿಯುವದರ ವಿರುದ್ಧ ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿ ಅದನ್ನು ನಿಷೇಧಿಸುವಂತೆ ಮಾಡಿದ್ದು ದಲಿತರ ಬದುಕಿನ ಮರ್ಯಾದೆ ಕಾಪಾಡಿದ ಕೀರ್ತಿ
೨. ದಲಿತರಿಗೆ ಯಾವುದೇ ಭೂ ಒಡೆತನವಿಲ್ಲದೆ ಕೇವಲ ಜೀತದಾಳಗಳಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರಿಗೂ ಭೂ ಒಡೆತನ ಬೇಕೆಂದು ಹೋರಾಟಗಳನ್ನು ಕಟ್ಟಿ ಸರ್ಕಾರಿ ಭೂಮಿಯನ್ನು ದಲಿತ ಭೂಹೀನರಿಗೆ ಹಂಚುವಂತೆ ಮಾಡಿದ್ದು ಕೃಷ್ಣಪ್ಪ ನವರ ಬಹುದೊಡ್ಡ ಸಾಧನೆ.
*ದಿನಾಂಕ ೦೬.೦೭.೨೦೧೪ ರಂದು ಭದ್ರಾವತಿಯಲ್ಲಿ ನಡೆದ ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ಮತ್ತು ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ನೀಡಿದ ಉಪನ್ಯಾಸ
Subscribe to:
Posts (Atom)




