Tuesday 9 October 2012

ಕನ್ನಡ ಜನಪದ ಸಂಸ್ಕೃತಿ- 4


ನಂಬಿಕೆ, ಸಂಪ್ರದಾಯ ಮತ್ತು ಆಚರಣೆಗಳು
ನಂಬಿಕೆ-ಸಂಪ್ರದಾಯ-ಆಚರಣೆಗಳು ಜನಪದ ಧರ್ಮದ ಧರ್ಮಗ್ರಂಥಗಳು ಇವುಗಳಿಂದ ಧರ್ಮಗಳು ರೂಪುಗಳನ್ನು ಪಡೆಯುತ್ತವೆ ಮತ್ತು ಮುನ್ನಡೆಯುತ್ತವೆ. ಈ ನಂಬಿಕೆ, ಸಂಪ್ರದಾಯ ಮತ್ತು ಆಚರಣೆಗಳ ಅಂತರ್ ಸಂಬಂಧವನ್ನು ಒಂದು ಸೂತ್ರದಲ್ಲಿ ಹಿಡಿದಿಡುವುದಾದರೆ ಕನರ್ಾಟಕ ಅನೇಕ ಜಿಲ್ಲೆಗಳಲ್ಲಿ ಮದುವೆಯಾಗದ ಮದುವೆಯಾದರೂ ಮಕ್ಕಳಾಗದ ಹೆಂಗಸು ಕೊಂತಿಪೂಜೆ ಮಾಡಿದರೆ ದೋಷ ಪರಿಹಾರವಾಗುತ್ತದೆ ಎಂಬುದು ನಂಬಿಕೆ. ಮಹಿಳೆಯರು ತಮ್ಮ ಮನೆಯಲ್ಲಿ ಎರೆಮಣ್ಣು ಅಥವಾ ಗೋವಿನ ಸಗಣಿಯಿಂದ ಮಂಡಲವನ್ನು ಬಿಡಿಸಿ ಎರೆಮಣ್ಣಿನಿಂದಲೇ ಸುಂದರವಾದ ಸ್ತ್ರೀ ವಿಗ್ರಹವನ್ನು ಮಾಡಿ ಹದಿನಾರು ದಿನಗಳ ಕಲ ಕೊಂತಿಯ ಹಾಡುಗಳನ್ನು ಹಾಡುತ್ತಾ ಪೂಜೆ ಸಲ್ಲಿಸಬೇಕು ಎಂಬುದು ಸಂಪ್ರದಾಯ ಮಂಡಲವನ್ನು ಹೇಗೆ ಬರೆಯಬೇಕು, ಯಾವ ಹಾಡುಗಳನ್ನು ಹಾಡಬೇಕು, ಪೂಜೆ ಹೇಗೆ ಮಾಡಬೇಕು ಎಂಬುದು ಆಚರಣೆ.
ನಂಬಿಕೆಗಳು
  ಸಾಂಪ್ರದಾಯಿಕವಾಗಿ ಅಂಗೀಕೃತವಾದ ಒಂದು ತಿಳುವಳಿಕೆಯನ್ನು ನಂಬಿಕೆ ಎನ್ನಬಹುದು. ನಂಬಿಕೆಗಳು ಹುಟ್ಟುತ್ತಲೇ ನಂಬಿಕೆಗಳಾಗಿ ಹುಟ್ಟುವುದಿಲ್ಲ ಯಾವುದೋ ಒಂದು ಅನುಭವದ ಹಿನ್ನೆಲೆಯಲ್ಲಿ ಮೂಡಿ ಬಂದ ಜ್ಞಾನವೇ ಹೇಳಿಕೆಯ ರೂಪ ಪಡೆದುಕೊಂಡು ಪರಂಪರೆಯಲ್ಲಿ ನಂಬಿಕೆಗಳಾಗಿ ರೂಪುಗೊಂಡಿರುತ್ತವೆ. ಕನ್ನಡ ಜನಪದ ಸಮುದಾಯಗಳಲ್ಲಿ ಕಂಡು ಬರುವ ಅನೇಕ ನಂಬಿಕೆಗಳು ಕಾಲಾಂತರದ ಸಾಂಸ್ಕೃತಿಕ ಪಲ್ಲಟಗಳಿಂದಾಗಿ ಕೆಲವು ಅರ್ಥ ಕಳೆದುಕೊಂಡಿರುವುದು ಸುಳ್ಳೇನು ಅಲ್ಲ. ಆದರೆ ಇದನ್ನೆ ನೆಲೆಯಾಗಿಸಿಕೊಂಡ ಆಧುನಿಕ ಚಿಂತನೆಗಳು ಜನಪದ ನಂಬಿಕೆಗಳನ್ನೆಲ್ಲ ಮೂಢನಂಬಿಕೆಗಳು ಎನ್ನುವ ಹಣೆಪಟ್ಟಿಯೊಂದಿಗೆ ಮೂಲೆಗುಂಪಾಗಿಸಿವೆ. ಇದು ಸರಿಯಾದ ಶ್ರಮವಲ್ಲ. ಪ್ರತೀ ನಂಬಿಕೆಯ ಹಿಂದೆ ಒಂದು ಸತ್ಯಾಂಶವಿರುತ್ತದೆ.
ರಾತ್ರಿ ಹೊತ್ತು ಕಸವನ್ನು ಹೊರಗೆ ಚೆಲ್ಲಬಾರದು
ಬನ್ನಿ-ಬೇವಿನ ಮರಗಳನ್ನು ಪೂಜಿಸುವುದು ಮನುಷ್ಯರಿಗೆ ಶ್ರೇಯಸ್ಕರ
ಹುತ್ತವನ್ನು ಸುತ್ತಬಾರದು
ನಾಯಿಯನ್ನು ತುಳಿಯಬಾರದು
ಇಂಥ ಅನೇಕ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ತಿರಸ್ಕರಿಸುವುದು ಹೇಗೆ? ಹಾಗೆ ನೋಡಿದರೆ ಮಾನವ ತನ್ನ ಬದುಕಿನಲ್ಲಿ ಒದಗಿ ಬಂದ ಅನುಭವ ಜನ್ಯವಾದವು ಈ ನಂಬಿಕೆಗಳು.
ಸಂಪ್ರದಾಯಗಳು
ನಂಬಿಕೆಯೊಂದು ಐತಿಹ್ಯ-ಪುರಾಣ-ಧರ್ಮಗಳ ಸಂಬಂಧವನ್ನು ಪಡೆದುಕೊಂಡು ಸಮುದಾಯದ ಶ್ರದ್ಧೆಯೊಂದಿಗೆ ಸಮರ್ಥನೆಯನ್ನು ಪಡೆದುಕೊಂಡಾಗ ಅದು ಸಂಪ್ರದಾಯವಾಗುತ್ತದೆ. ಇಂಥ ಸಂಪ್ರದಾಯಗಳು ಪ್ರತಿಯೊಂದು ಪ್ರದೇಶ ಹಾಗೂ ಸಮುದಾಯಗಳ ಅಗತ್ಯಕ್ಕೆ ಅನುಗುಣವಾಗಿ ಚಾಲ್ತಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಕನ್ನಡ ಜಾನಪದ ಜೀವನದ ಒಡಲಾಳದಲ್ಲಿ ಸಾವಿರಾರು ಸಂಪ್ರದಾಯಗಳಿವೆ. ಇವೆಲ್ಲವೂ ಮಾನವ ಪರವಾದ ವಿಚಾರಗಳು ಎಂಬುದನ್ನು ಗಮನಿಸಬೇಕು. ಸಂಪ್ರದಾಯಗಳ ಹಿಂದಿರುವ ಜ್ಞಾನ ಹಾಗೂ ಅಲ್ಲಿ ಬಳಕೆಗೊಳ್ಳುವ ವಸ್ತುಗಳು ಅತ್ಯಂತ ಕುತೂಹಲ ಕಾರಿಯಾಗಿದ್ದು ಅನಂತರದ ದಿನಗಳಲ್ಲಿ ಅವು ಕೇವಲ ಅನುಕರಣೆಯ ಮೇಲು ನೋಟದ ಅರ್ಥಗಳಿಗೆ ಸೀಮಿತಗೊಂಡಿವೆ.
ಉದಾ: ಹಿಂದೆ ಅಪರೂಪಕ್ಕೆ ಈಗಲೂ ವಿಶೇಷ ದಿನಗಳಲ್ಲಿ ವಾಸದ ಮನೆಗಳಿಗೆ ಮಾವು-ಬೇವಿನ ಎಲೆಗಳ ತೋರಣ ಕಟ್ಟುವುದು ಸಂಪ್ರದಾಯ. ಈ ಪದ್ಧತಿ ಆಧುನಿಕ ಕಾಲದಲ್ಲಿ ಬದಲಾವಣೆಗೊಂಡು ಸಹಜವಾದ ಹಸಿರು ಎಲೆಗಳ ಬದಲಿಗೆ ಪ್ಲಾಸ್ಟಿಕ್ ಎಲೆಗಳನ್ನು ಕಟ್ಟುವ ಸಂಪ್ರದಾಯಗಳನ್ನು ಕಂಡರೆ ಇದು ಸ್ಪಷ್ಟವಾಗುತ್ತದೆ.
ಸಂಪ್ರದಾಯಗಳು ಮನುಷ್ಯನ ಜೀವನಾವರ್ತದ ಸಂಗತಿಗಳಾದ ಹುಟ್ಟು-ಮದುವೆ-ಸಾವು ಇವೇ ಮೊದಲಾದ ಸಂದರ್ಭಗಳಲ್ಲಿ ಅವರವರ ಲೋಕದೃಷ್ಟಿಗೆ ಅನುಗುಣವಾಗಿ ರೂಪುಗೊಂಡಿದೆ. ಇನ್ನೂ ವೃತ್ತಿಯಾಧಾರಿತ ಸಂಪ್ರದಾಯಗಳೂ ಇವೆ.  ಕೃಷಿ, ಬೇಟೆ ಮತ್ತಿತರ ವೃತ್ತಿಯ ಜನ ತಮ್ಮ ಅನುಭವದ ಆಧಾರದ ಮೇಲೆ ಸಂಪ್ರದಾಯಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲಾ ಸಂಪ್ರದಾಯಗಳು ಅರ್ಥಪೂರ್ಣ ಎನ್ನಲಾಗದಿದ್ದರೂ ರೈತ ಕೀಟನಾಶಕವಾಗಿ ಚರಗ ಚೆಲ್ಲುವ ಸಂಪ್ರದಾಯ ಮಾಡುವುದನ್ನು, ಬೇಟೆಗಾಗಿ ಬೇಟೆಗಾರ ಕಾಡಿನ ಮದ್ಯೆ ನಡೆಸುವ ಆಚರಣೆಗಳು ಕೊನೆಗೆ ಆಕಾಶಕ್ಕೆ ಗುಂಡು ಆರಿಸುವ ಸಂಪ್ರದಾಯಗಳನ್ನು ತಿರಸ್ಕರಿಸಲಾಗುವುದಿಲ್ಲ.
ಆಚರಣೆಗಳು
ಸಂಪ್ರದಾಯಗಳ ಪ್ರಾಯೋಗಿಕ ಅಥವಾ ಕ್ರಿಯಾರೂಪಗಳೇ ಆಚರೆಗಳು ಹೀಗಾಗಿಯೇ ನಂಬಿಕೆಗಿಂತ ಸಂಪ್ರದಾಯಗಳಿಂದ ಆಚರಣೆಗಳ ವ್ಯಾಪ್ತಿ ದೊಡ್ಡದು. ಆಚರಣೆಗಳ ಪ್ರಮುಖ ಲಕ್ಷಣಗಳೆಂದರೆ ಅವು ಧಾರ್ಮಿಕ ಮತ್ತು ದೈವಿಕ ಸಂಸ್ಪರ್ಶವನ್ನು ಪಡೆದಿರುತ್ತವೆ. ಆಚರಣೆಗೆ ಒಂದು ನಿದರ್ಿಷ್ಟ ಉದ್ದೇಶವಿರುತ್ತದೆ. ಕನ್ನಡ ಜನಪದ ಸಂಸ್ಕೃತಿಯ ಧಾರ್ಮಿಕ ಸ್ವರೂಪದೊಳಗೆ ಕೌಟುಂಬಿಕ, ಸಾಮಾಜಿಕ, ವ್ಯವಸಾಯಿಕ, ಧಾರ್ಮಿಕ ಹೀಗೆ ಬೇರೆ ಬೇರೆ ಆಯಾಮಗಳಿವೆ.
ಕೌಟುಂಬಿಕ ಆಯಾಮದಲ್ಲಿ ನಡೆಯುವ ನಾಮಕರಣ, ಒಸುಗೆ, ಋತುಸಂಸ್ಕಾರ ವಿವಾಹ ಮೊದಲಾದವು ಪ್ರಮುಖ ಆಚರಣೆಗಳಾಗಿ ಕಂಡುಬರುತ್ತವೆ. ಈ ಆಚರಣೆಗಳು ಇಂದಿಗೂ ಪ್ರಚಲಿತದಲ್ಲಿವೆ. ಆದರೂ ಮೂಲದ ಸದುದ್ದೇಶವನ್ನು ಮರೆತು ಕೇವಲ ವಿಜೃಂಭಿಸುವ ಆಥರ್ಿಕ ಬಲ ಪ್ರದರ್ಶನಗಳಾಗಿವೆ. ಪರಸ್ಪರ ಸಂಬಂಧಗಳನ್ನು ಬೆಸೆಯಬೇಕಾಗಿದ್ದ ಈ ಆಚರಣೆಗಳು ಸಂಬಂಧಗಳಲ್ಲಿ ವಿರಸವನ್ನುಂಟುಮಾಡಿ ವಿಘಟನೆಯ ದಿಕ್ಕಿನತ್ತ ಸಾಗಿದೆ.
ವ್ಯವಸಾಯಿಕ ಜೀವನದೊಳಗಂತೂ ಅನಂತ ಆಚರಣೆಗಳಿದ್ದು ಅವುಗಳಲ್ಲಿ ಜೋಕುಮಾರನ ಪೂಜೆ, ಚರಗಚೆಲ್ಲುವುದು, ಮಳೆರಾಯನ ಪೂಜೆ ಮುಂತಾದವು ಪ್ರಮುಖವಾಗಿವೆ. ಇಂಥ ಎಲ್ಲಾ ಆಚರಣೆಗಳು ಬೆಳೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಆಚರಣೆಗೊಳ್ಳುತ್ತಿವೆೆ. ಸಾಮಾಜಿಕ ಆಯಾಮದಲ್ಲೂ ಅನೇಕ ಹಬ್ಬ-ಆಚರಣೆಗಳು ಜೀವನದ ಉತ್ಸಾಹವನ್ನು ಹೆಚ್ಚಿಸುವ ಸಂಗತಿಗಳಾಗಿ ಕಾರ್ಯನಿರ್ವಹಿಸಿವೆ.
ಮಾಟ-ಮಂತ್ರ
'ಮಾಟ-ಮಂತ್ರ ಜನಪದ ಧರ್ಮದ ಪ್ರಮುಖ ಭಾಗ' ಜನಪದ ಸಮಾಜಗಳಲ್ಲಿ ಇಂದಿಗೂ ಈ ಮಾಟ-ಮಂತ್ರದ ಛಾಯೆ ಇರುವುದನ್ನು ಗಮನಿಸಿದರೆ ಇದರ ಶಕ್ತಿಯ ಸ್ವರೂಪ ಹಾಗೂ ಮನುಷ್ಯನ ಮನಸ್ಸಿನ ಮೆಲೆ ಉಂಟುಮಾಡಿರುವ ಪರಿಣಾಮ ಅರ್ಥವಾಗುತ್ತದೆ. ಪ್ರಾಚೀನ ಪರಂಪರೆಯಲ್ಲಿ ಈ ಮಾಟ-ಮಂತ್ರವು ಬಳಕೆಯಾಗಿದ್ದು ಕೂಡ ಸಮೂಹ ಹಿತಾಸಕ್ತಿಯಿಂದಲೇ ಆದರೆ ನಂತರ ದಿನಗಳಲ್ಲಿ ಕೇಡನ್ನುಂಟುಮಾಡುವ ಕ್ರಿಯೆ ಮಾತ್ರ ಎನ್ನುವ ಭಾವನೆ ಮೂಡಿದೆ. ಇದು ಸರಿಯಾದ ಕ್ರಮವಲ್ಲ. ಕೆಟ್ಟದೆಂಬುದರಲ್ಲಿ   ಉತ್ತಮಾಂಶಗಳು ಇರಲು ಸಾಧ್ಯ ಎಂಬುದಕ್ಕೆ ಈ ಸಂಗತಿ ಉತ್ತಮ ಉದಾಹರಣೆ, ಮನುಷ್ಯನ ಮನಸ್ಸಿನ ಮೆಲೆ ಪರಿಣಾಮ ಬೀರುವ ಶಕ್ತಿಯುಳ್ಳ ಈ ಮಾಟ ಮಂತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಬೆದರುಗೊಂಬೆಯಂತೆ ಕೆಲಸಮಾಡಿದೆ. ಇಂದಿಗೂ ನಮ್ಮ ಸಮಾಜದ ಬಹುಪಾಲ ಗ್ರಾಮೀಣ ಜನ ತಮ್ಮ ಕಷ್ಟ ಪರಿಹಾರಕ್ಕೆ, ಆನಾರೋಗ್ಯ ನಿವಾರಣೆಗೆ ಕಾನೂನು ಅಥವಾ ವೈದ್ಯಶಾಸ್ತ್ರದ ಮೊರೆ ಹೋಗದೆ ಮಂತ್ರವಾದಿಗಳ ಬಳಿ ಹೋಗುವುದನ್ನು ಕಂಡರೆ ಈ ಅಂಶ ಸ್ಪಷ್ಟವಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪನಿಗೆ ಸಲ್ಲಿಸುವ ಪೂಜಾ ವಿಧಾನಗಳು, ಸ್ವತ್ತುಗಳು ಕಳೆದುಕೊಂಡಾಗ ಅಣ್ಣಪ್ಪಸ್ವಾಮಿಗೆ ಕಾಣಿಕೆ ಹಾಕಿ ಬೆದರಿಸುವ ಪದ್ಧತಿಯು ಇಲ್ಲಿ ಗಮನಾರ್ಹ. ಇಂಥ ಮಾಟ-ಮಂತ್ರಗಳು ವೈಧಿಕ ಧರ್ಮದ ದಾಳಿಯ ನಂತರವೂ ನಮ್ಮಲ್ಲಿ ಉಳಿದಿದೆ. ಆದರೆ ನಕಾರಾತ್ಮಕ ಸ್ವರೂಪದಲ್ಲಿಯೇ ಕಾಣುತ್ತಿರುವುದು ಹೆಚ್ಚು. ಸಮಕಾಲೀನ ಸಮಾಜಕ್ಕೆ ಇಂಥ ಬೆದರುಗೊಂಬೆಗಳು ಬೇಕು ಆದರೆ ಅದನ್ನು ನೈತಿಕತೆಯ ತಳಹದಿಯ ಮೇಲೆ ಬಳಸಬೇಕಿದೆ. ಪಾರಂಪರಿಕ ಶಿಕ್ಷಾವಿಧಿ ಎಂಬಂತೆ ಮಾಟಮಂತ್ರವನ್ನು ಪರಿಭಾವಿಸಿ ಅಳವಡಿಸಿಕೊಳ್ಳಬೇಕಾದ ತುತರ್ಿದೆ. ಈ ಕೆಲಸವನ್ನು ಬಹು ಎಚ್ಚರದಿಂದ ಮಾಡಬೇಕಾಗಿದ್ದು, ಸರಿಯಾದ ರೀತಿಯಲ್ಲಿ ನಡೆದಿದ್ದೆ ಆದರೆ ಮಾನವಪರವಾದ ಮಾಟ-ಮಂತ್ರಗಳೂ ಇರಲು ಸಾಧ್ಯ.
                                                                                                                          ಡಾ. ಎಸ್. ಎಂ. ಮುತ್ತಯ್ಯ

No comments:

Post a Comment